ಸ್ಯಾಂಡಲ್ ವುಡ್ ನಲ್ಲಿ ಮುಂಚೂಣಿಯಲ್ಲಿರುವ ನಟರ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಅಭಿಮಾನಿಗಳು ಪರಸ್ಪರ ವಾಗ್ಯುದ್ಧ ನಡೆಸುವುದು ಸಾಮಾನ್ಯ. ಆದರೆ ಅದೇ ಅಭಿಮಾನಿಗಳ ನೆಚ್ಚಿನ ಸ್ಟಾರ್ ಗಳು ಪರಸ್ಪರ ಸ್ನೇಹದಿಂದ ವರ್ತಿಸಿದರೆ ಬಹುಶಃ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಕುರಿತಾದ ಸುದ್ದಿಗಳು ಮಹತ್ವ ಪಡೆದುಕೊಳ್ಳುವುದಿಲ್ಲ. ಯಶ್ ಹಾಗೂ ಸುದೀಪ್ ಈಗ ಇಂತಹದ್ದೇ ಹೆಜ್ಜೆ ಇಟ್ಟಿದ್ದಾರೆ.
ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ರಾಕಿಂಗ್ ಸ್ಟಾರ್ ಯಶ್ ನಡುವೆ ಪೈಪೋಟಿ ಇದೆಯಂತೆ, ಒಳಗೊಳಗೇ ಘರ್ಷಣೆ ಉಂಟಾಗಿದೆಯಂತೆ ಎಂಬ ವದಂತಿಗಳನ್ನೆಲ್ಲಾ ಸುಳ್ಳು ಮಾಡುವ ನಿಟ್ಟಿನಲ್ಲಿ ಯಶ್ ಸುದೀಪ್ ಅವರ ರನ್ನ ಚಿತ್ರವನ್ನು ವೀಕ್ಷಿಸಿದ್ದಾರೆ. ವಿಶೇಷವೆಂದರೆ ಮೈಸೂರಿನಲ್ಲಿ ಶೂಟಿಂಗ್ ನಲ್ಲಿರುವ ಯಶ್, ಸ್ವತಃ ಸುದೀಪ್ ಅವರೊಂದಿಗೆ ಮಾತನಾಡಿ ರನ್ನ ಚಿತ್ರ ವೀಕ್ಷಿಸಲು ಉತ್ಸಾಹ ತೋರಿದ್ದಾರೆ. ತಕ್ಷಣವೇ ಸುದೀಪ್ ಮೈಸೂರಿನ ಶಾಂತಲಾ ಥಿಯೇಟರ್ ನಲ್ಲಿ ಯಶ್ ಸಿನಿಮಾ ವೀಕ್ಷಿಸಲು ವ್ಯವಸ್ಥೆ ಮಾಡಿದ್ದಾರೆ. ಚಿತ್ರ ವೀಕ್ಷಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಯಶ್, ರನ್ನ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರನ್ನ ಚಿತ್ರ ತಮ್ಮ ಹಿಂದಿನ ದಿನಗಳನ್ನು ನೆನಪಿಸುವಂತಿತ್ತು ಎಂದು ಹೇಳಿದ್ದಾರೆ.
ಎಲ್ಲಾ ಕ್ಷೇತ್ರದಲ್ಲಿರುವಂತೆ ಚಿತ್ರರಂಗದಲ್ಲಿಯೂ ನಾಯಕ ನಟರ ನಡುವೆ ಆರೋಗ್ಯಕರವಾದ ಪೈಪೋಟಿ ಇದ್ದೇ ಇರುತ್ತದೆ. ಆದರೆ ಅದು ವಯಕ್ತಿವಾಗಿ ಇಬ್ಬರ ಸ್ನೇಹದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಯಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಉತ್ತಮ ಚಿತ್ರಗಳು ಎಂದಿಗೂ ಗೆಲ್ಲುತ್ತವೆ ಎಂಬುದನ್ನು ರನ್ನ ಚಿತ್ರ ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಯಶ್ ಅಭಿಪ್ರಾಯಪಟ್ಟಿದ್ದಾರೆ. ಸುದೀಪ್ ಹಾಗೂ ಯಶ್ ಇಬ್ಬರನ್ನೂ ಈಗ ಸ್ಯಾಂಡಲ್ ವುಡ್ ನ ಅಣ್ತಮ್ಮ ಎಂದೇ ಬ್ರಾಂಡ್ ಮಾಡಲಾಗುತ್ತಿದೆ.