ಮುದ್ದಿನಿಂದ ಸಾಕಿದ ಮಕ್ಕಳು ಯಾರನ್ನೋ ಪ್ರೀತಿಸಿ ಮದುವೆಯಾದರೆ ಹೆತ್ತವರಿಗಾಗುವ ದುಖಃ ಹಾಗೂ ಕುಟುಂಬದಲ್ಲಿ ಉಂಟಾಗುವ ಬಿರುಕನ್ನು ಸೂಕ್ಷ್ಮವಾಗಿ ರನ್ನ ಚಿತ್ರದ ಮೂಲಕ ರಕ್ತಸಂಬಂಧದ ಮೌಲ್ಯವನ್ನು ನಿರ್ದೇಶಕ ನಂದಕಿಶೋರ್ ಹೇಳಿದ್ದಾರೆ.
ರನ್ನ ತೆಲುಗಿನ ಅತ್ತಾರಿಂಟಿಕಿ ದಾರೇದಿ ಚಿತ್ರದ ರಿಮೇಕ್. ಪವನ್ಕಲ್ಯಾಣ್ಗೆ ಸೂಪರ್ಸ್ಟಾರ್ ಪಟ್ಟ ಕೊಟ್ಟ ಚಿತ್ರವಿದು. ಕನ್ನಡದಲ್ಲಿ ಸುದೀಪ್ ಭಾರ್ಗವನ ಪಾತ್ರ ನಿರ್ವಹಿಸಿದ್ದಾರೆ. ತನ್ನ ತಾತನ ಆಸೆ ಪೂರೈಸಲು ಅತ್ಯಂತ ಶ್ರೀಮಂತ ಯುವಕ ಪ್ರೇಮ ವಿವಾಹವಾಗಿ ಮನೆಬಿಟ್ಟುಹೋಗಿದ್ದ ತನ್ನ ಅತ್ತೆಯನ್ನು (ಮಧು) ಮನೆಗೆ ಕರೆತರಲು ಒಬ್ಬ ಸಾಮಾನ್ಯ ಡ್ರೈವರ್ ಆಗಿ ತನ್ನ ಆತ್ತೆ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡು ಅವಮಾನಗಳನ್ನು ಸಹಿಸಿಕೊಳ್ಳುತ್ತಾನೆ.
ತಾತನಿಗೆ (ಪ್ರಕಾಶ್ ರೈ) ಕೊಟ್ಟ ಮಾತನ್ನು ತಪ್ಪದೆ ವೈಯಕ್ತಿಕ ಪ್ರತಿಷ್ಠೆಯಿಂದ ಅಪ್ಪನಿಂದ ದೂರವಾದ ಮಗಳನ್ನು ನಾಯಕ ಮನೆಗೆ ಕರೆತರುತ್ತಾನಾ? ಇಲ್ಲವಾ? ಎಂಬುದು ಚಿತ್ರದ ತಿರುವಾಗಿದೆ. ವೈಯಕ್ತಿಕ ಪ್ರತಿಷ್ಠೆಯಿಂದ ಸಂಬಂಧಗಳು ದೂರವಾದರೆ ಕುಟುಂಬದ ಸದಸ್ಯರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಚಿತ್ರದಲ್ಲಿ ಸೂಕ್ಷ್ಮವಾಗಿ ತೋರಿಸಲಾಗಿದೆ. ಸುದೀಪ್ ಎಲ್ಲ ದೃಶ್ಯಗಳಲ್ಲೂ ಸ್ಟೈಲೀಶ್ಆಗಿ ಕಾಣುತ್ತಾರೆ. ಆಕ್ಷನ್ ಹಾಗೂ ಮಾಸ್ ಪ್ರಿಯರಿಗೆ ಫೈಟ್ಗಳು ಥ್ರಿಲ್ಲಿಂಗ್ ನೀಡುತ್ತವೆ. ವಿಜೃಂಭಣೆ, ಬಿಲ್ಡಪ್ಗಳು ಚಿತ್ರದಲ್ಲಿ ಸಾಕಷ್ಟಿವೆ. ವಿರಾಮದ ನಂತರ ಸ್ವಲ್ಪ ಬೋರ್ ಅನ್ನಿಸಿದರೂ ಸಾಧುಕೋಕಿಲ ಅವರ ಪ್ರವೇಶದಿಂದ ಪ್ರೇಕ್ಷಕರಿಗೆ ಕಚಗುಳಿ ಕೊಟ್ಟಂತಾಗುತ್ತದೆ.
ಸಾಧುಕೋಕಿಲ ಹಾಗೂ ಸುದೀಪ್ ನಡುವೆ ನಡೆಯುವ ಕೆಲವು ಡ್ರಮಾಗಳು ಸುದೀಪ್ ವರ್ಚಸ್ಸಿಗೆ ಅಷ್ಟೊಂದು ಸಮಂಜಸವಲ್ಲ. ಸ್ವಾಮೀಜಿ ವೇಶದಲ್ಲಿ ಸುಧೀಪ್ ಅವರನ್ನು ನೋಡುವುದು ಸ್ವಲ್ಪ ಕಷ್ಟ. ಸುದೀಪ್ ಕಾಸ್ಟುಮ್, ಡಿಸೈನ್ ಹೊಸ ರೀತಿಯಲ್ಲಿದೆ. ಹರಿಕೃಷ್ಣ ಅವರ ಸಂಗೀತ ಇಷ್ಟವಾಗುತ್ತದೆ. ಚಿಕ್ಕಣ್ಣ ಹಾಗೂ ಸುದೀಪ್ ಕಾಂಬಿನೇಷನ್ ದೃಶ್ಯಗಳು ಚೆನ್ನಾಗಿವೆ. ಹರಿಪ್ರಿಯ ಅವರು ನಟನೆಯಲ್ಲಿ ಇನ್ನಷ್ಟು ಪಳಗಬೇಕು, ಅವರ ಪಾತ್ರಕ್ಕೆ ಚಿತ್ರದಲ್ಲಿ ಅಷ್ಟೊಂದು ಪ್ರಾಧಾನ್ಯತೆ ನೀಡಿಲ್ಲ.
ರಚಿತಾರಾಮ್ ಮೇಕಪ್ ಹಾಗೂ ಕಾಸ್ಟೂಮ್ ಎಲ್ಲವೂ ಹಿತಮಿತವಾಗಿವೆ. ಪ್ರಕಾಶ್ ರೈ, ದೇವರಾಜ್, ಧರ್ಮಶರತ್ಲೋಹಿತಾಶ್ವ, ಅವಿನಾಶ್ ಕೀರ್ತಿರಾಜ್ ತಮ್ಮ ಪತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಸುಧಾಕರ್ಎಸ್ರಾಜ್ ಅವರ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ.ಡ್ಯಾನ್ಸ್, ಫೈಟ್ಗಳಿಗಿಂತ ಕೌಟುಂಬಿಕ ಭಾವೋದ್ವೇಗ ವ್ಯಕ್ತಪಡಿಸುವ ರೀತಿಯಲ್ಲಿ ಸುದೀಪ್ ಗೆದ್ದಿದ್ದಾರೆ. ಮನೆಯವರೆಲ್ಲಾ ಒಟ್ಟಿಗೆ ಕುಳಿತು ಯಾವುದೇ ಮುಜುಗರವಿಲ್ಲದೆ ರನ್ನ ಚಿತ್ರವನ್ನು ನೋಡಿ ಎಂಜಾಯ್ ಮಾಡಬಹುದು.
ನಿರ್ದೇಶನ: ನಂದಕಿಶೋರ್
ನಿರ್ಮಾಪಕ: ಎಂ.ಚಂದ್ರಶೇಖರ್
ಛಾಯಾಗ್ರಹಣ : ಸುಧಾಕರ್ಎಸ್ರಾಜ್
ಸಂಗೀತ : ವಿ.ಹರಿಕೃಷ್ಣ
ತಾರಾಗಣದಲ್ಲಿ : ಸುದೀಪ್, ಪ್ರಕಾಶ್ರೈ, ರಚಿತಾರಾಂ, ಹರಿಪ್ರಿಯಾ,ಮಧುಬಾಲಾ, ದೇವರಾಜ್, ಸಾಧುಕೋಕಿಲಾ, ಅವಿನಾಶ್, ತಬಲನಾಣಿ, ಶರತ್ಲೋಹಿತಾಶ್ವ, ಚಿಕ್ಕಣ್ಣ ಮೊದಲಾದವರು ಇದ್ದಾರೆ.