ನಮ್ಮ ತಂದೆ ಕ್ರಿಶ್ಚಿಯನ್ ಎಂಬ ಕಾರಣಕ್ಕೆ ಅವರಿಗೆ ಅವಕಾಶ ತಪ್ಪಿಸುತ್ತಿದ್ದರು. ಈಗ ನನ್ನನ್ನು ಕೂಡಾ ಚಿತ್ರರಂಗದಲ್ಲಿ ತುಳಿಯಲಾಗುತ್ತಿದೆ ಎಂದು ಸ್ಯಾಂಡಲ್ ವುಡ್ ನ ಟೈಗರ್ ಎಂದೇ ಖ್ಯಾತರಾಗಿದ್ದ ನಟ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ಮಂಡ್ಯದಲ್ಲಿ ಟೈಗರ್ ಪ್ರಭಾಕರ್ ಅಭಿಮಾನಿಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ನಮ್ಮ ತಂದೆ ಅಭಿನಯಿಸುತ್ತಿದ್ದ ಕಾಲದಲ್ಲೂ ಅವರ ಜಾತಿ (ಕ್ರಿಶ್ಚಿಯನ್) ನೋಡಿ ಅವಕಾಶ ತಪ್ಪಿಸುತ್ತಿದ್ದರು. ಇದರ ನಡುವೆ ನಮ್ಮ ತಂದೆ ಚಿತ್ರರಂಗದಲ್ಲಿ ಬೆಳೆದರು. ಈಗ ನನಗೂ ಸಹ ಅದೇ ಪರಿಸ್ಥಿತಿ ಬಂದೋದಗಿದೆ. ಅರ್ಹತೆಯುಳ್ಳವರಿಗೆ, ಪ್ರತಿಭಾವಂತರಿಗೆ ಅವಕಾಶ ಸಿಗುತ್ತಿಲ್ಲ. ವ್ಯವಸ್ಥಿತವಾಗಿ ತುಳಿಯುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದ ವಿನೋದ್ ಪ್ರಭಾಕರ್, ಅಭಿಮಾನಿಗಳ ಆಶೀರ್ವಾದ ಇರೊವವರೆಗೆ ನಮಗೆ ಏನೂ ತೊಂದರೆ ಆಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡ ಚಿತ್ರರಂಗ ಕಂಡ ಅಪರೂಪದ ಆಲ್ ರೌಂಡರ್ ನಟನಾಗಿದ್ದವರು ಟೈಗರ್ ಪ್ರಭಾಕರ್, ಖಳನಟನಾಗಿ, ಪೋಷಕ ನಟನಾಗಿ, ನಾಯಕ ನಟನಾಗಿ, ಛಾಯಾಗ್ರಾಹಕನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದವರು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿ ಸುಮಾರು 450 ಸಿನಿಮಾಗಳಲ್ಲಿ ಟೈಗರ್ ಅಭಿನಯಿಸಿದ್ದರು.