ಒಂದು ಚಿತ್ರಕ್ಕೆ ಅದರ ಶೀರ್ಷಿಕೆಯೇ ದೊಡ್ಡ ಶಕ್ತಿ. ಕನ್ನಡದ ಮಟ್ಟಿಗೆ ಪ್ರೇಕ್ಷಕನ ಮೊದಲ ಗಮನ ಸೆಳೆಯುವುದು ಚಿತ್ರದ ಟೈಟಲ್. ಆದರೆ, ಟೈಟಲ್ ಗಳಲ್ಲಿ ಸಿಕ್ಕಾಪಟ್ಟೆ ಆಟವಾಡುವುದರಲ್ಲೂ ಕನ್ನಡ ಸಿನಿಮಾಮಂದಿಯದ್ದು ಎತ್ತಿದ ಕೈ. ಅಂಥವರ ಚಿತ್ರಗಳ ಸಾಲಿಗೆ ಸೇರುವ ಈ ಚಿತ್ರಕ್ಕೆ ಟೈಟಲ್ ಇಲ್ಲದಿದ್ದರೂ ಇರುವ ಶೀರ್ಷಿಕೆ ಕೊಂಚ ವಿಭಿನ್ನವಾಗಿಯೇ ಇದೆ. ಅದೇ `ಟೈಟ್ಲು ಬೇಕಾ?’ ಚಿತ್ರ.
ಆನಂದ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಚಿತ್ರ ಹೆಸರಿಂದಲೇ ಒಂದಿಷ್ಟು ಕುತೂಹಲ ಮೂಡಿಸಿದ್ದು, ಈಗ ಚಿತ್ರೀಕರಣ ಮುಗಿಸಿಕೊಂಡು ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿದೆ. ಪ್ರಥಮ ಚಿತ್ರವಾದರೂ ಗೆಲ್ಲಲೇಬೇಕೆಂಬ ಛಲದಿಂದಲೇ ಆ್ಯಕ್ಷನ್ ಕಟ್ ಹೇಳಿರುವ ಆನಂದ್, ಈ ಚಿತ್ರದಲ್ಲಿ ಮನರಂಜನೆ ಜತೆಗೆ ಸಂದೇಶವನ್ನೂ ಹೇಳುತ್ತಾರಂತೆ. ಹೀಗಾಗಿ ಮೊದಲ ಸಿನಿಮಾದಲ್ಲೇ ಒಂದಷ್ಟು ವಿಷಯಗಳನ್ನಿಟ್ಟುಕೊಂಡಿದ್ದಾರೆ. ಮಾರ್ಚ್ ನಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
`ಈ ಚಿತ್ರದಲ್ಲಿ ಪ್ರೇಮವಿದೆ. ಆದರೆ ಫೀಲಿಂಗ್ಸ್ ಇಲ್ಲ. ಇದೊಂದು ಮಾಸ್ ಸಿನಿಮಾ. ಆದರೆ ಫೈಟ್ಸ್ ಇಲ್ಲ. ಸೆಂಟಿಮೆಂಟ್ ಇದೆ. ಆದರೆ ಫ್ಯಾಮಿಲಿ ಮೆಲೋಡ್ರಾಮ ಇಲ್ಲ’ ಎಂದು ತಮ್ಮ ಚಿತ್ರದ ಬಗ್ಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಾರೆ ನಿರ್ದೇಶಕ ಆನಂದ್. ಸಿನಿಮಾ ಶುರುವಾಗೋದೇ ಒಬ್ಬ ನಿರ್ದೇಶಕನ ದೃಷ್ಟಿಕೋನದಿಂದ. ಹೀಗಾಗಿ ಒಟ್ಟಾರೆ ಕಥೆ ಹೇಳಿ ಮುಗಿಸಿದ ಮೇಲೆ ನೋಡಿದವರ ಅನಿಸಿಕೆ `ಟೈಟ್ಲು ಬೇಕಾ?’. ಇದೇ ಪ್ರಶ್ನೆಯನ್ನು ಪ್ರೇಕ್ಷಕರಿಗೂ ಕೇಳಿದ್ದಾರೆ ನಿರ್ದೇಶಕ ಆನಂದ್. ಅಂದರೆ, ಸಹ ನಿರ್ದೇಶಕನೊಬ್ಬ ತಾನು ನಿರ್ದೇಶಕನಾಗಲು ಹೊರಟಾಗ ಆತ ಅನುಭವಿಸುವ ವ್ಯಥೆ ಈ ಚಿತ್ರದ ಕಥೆ. ಆಯುಷ್ ಈ ಚಿತ್ರದ ನಾಯಕ. ನೇಹಾ ಪಾಟೀಲ್ ಮತ್ತು ಮಾನಸಿ ಚಿತ್ರದ ನಾಯಕಿಯರು. ಸಂಗಮೇಶ ಹಲಗತ್ತಿ ಚಿತ್ರದ ನಿರ್ಮಾಪಕರು. ರಾಬಿನ್ ಪೌಲ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.