ನವದೆಹಲಿ: ಬಜೆಟ್ ಅಧಿವೇಶನದ ಸಂದರ್ಭದಲ್ಲಿ ದಿಢೀರ್ ರಜೆ ಹಾಕಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಉತ್ತರಾಖಂಡ್ನಲ್ಲಿ ಕ್ಯಾಂಪ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿಕೊಂಡಿದ್ದಾರೆ.
ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್(ಐಎನ್ಟಿಯುಸಿ)ನ ರಾಷ್ಟ್ರೀಯ ಉಪಾಧ್ಯಕ್ಷ ಜಗದೀಶ್ ಕುಮಾರ್ ಶರ್ಮಾ ಅವರು ಉತ್ತರಾಖಂಡನ ಬೆಟ್ಟ-ಗುಡ್ಡಗಳಲ್ಲಿ ರಾಹುಲ್ ಗಾಂಧಿ ಕ್ಯಾಂಪ್ ಮಾಡುತ್ತಿರುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರು ವಿದೇಶಕ್ಕೆ ತೆರಳಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಜಗದೀಶ್ ಶರ್ಮಾ ಅವರು, ಕಾಂಗ್ರೆಸ್ ಉಪಾಧ್ಯಕ್ಷರು ಉತ್ತರಾಖಂಡನಲ್ಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ರಾಹುಲ್ ಗಾಂಧಿ ಅವರು ಪ್ರತಿವರ್ಷ ಉತ್ತರಾಖಂಡ್ಗೆ ಭೇಟಿ ನೀಡುತ್ತಾರೆ. ಅದರಂತೆ ಈ ವರ್ಷವೂ ಭೇಟಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಕೆಲವು ದಿನಗಳ ಕಾಲ ರಜೆ ತೆಗೆದುಕೊಂಡಿರುವ ರಾಹುಲ್ ಗಾಂಧಿ ಅವರು, ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷದ ಹೀನಾಯ ಸೋಲಿನ ಕುರಿತು ಚಿಂತನೆ ನಡೆಸಿದ್ದಾರೆ ಮತ್ತು ಏಪ್ರಿಲ್ನಲ್ಲಿ ನಡೆಯುವ ಎಐಸಿಸಿ ಸಭೆಗೆ ಸಿದ್ಧವಾಗುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಬಜೆಟ್ ಅಧಿವೇಶನದ ಆರಂಭದ ದಿನವೇ ರಾಹುಲ್ ಗಾಂಧಿ ಅಧಿವೇಶನಕ್ಕೆ ಗೈರು ಆಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಗೆ ಕಾರಣವಾಗಿತ್ತು. ಪಕ್ಷದ ಹಿರಿಯ ಮುಖಂಡರ ವರ್ತನೆಯಿಂದ ಬೇಸರತ್ತು ರಾಹುಲ್ ಕಲಾಪದಿಂದ ದೂರ ಉಳಿದಿದ್ದಾರೆ ಎನ್ನಲಾಗಿತ್ತು. ಅಲ್ಲದೆ ನಿರಂತರ ಸೋಲಿನ ರುಚಿ ಕಂಡಿರುವ ಕಾರಣ ರಾಹುಲ್ರನ್ನು ಪಕ್ಷದಿಂದ ದೂರವಿಡಲು ಈ ‘ರಜೆ’ ಮುನ್ನುಡಿಯೇ ಎಂಬ ಪ್ರಶ್ನೆಗಳೂ ರಾಜಕೀಯ ವಲಯದಲ್ಲಿ ಮೂಡಿದ್ದವು.