ನಿರ್ಮಾಪಕಿ: ರಕ್ಷಿತಾ ಪ್ರೇಮ್
ನಿರ್ದೇಶನ: ವಿಜಯ್ ಹಂಪಾಳಿ
ತಾರಾಗಣ: ಪ್ರೇಮ್, ಚೈತ್ರಾ, ಶರತ್ ಲೋಹಿತಾಶ್ವ, ಶೋಭರಾಜ್, ಋಷಿಕುಮಾರ ಸ್ವಾಮೀಜಿ, ಸನ್ನಿ ಲಿಯೋನ್ ಮತ್ತಿತರರು
‘ಬಂದ ಬಂದ ನೋಡು ಡಿಕೆ ಸಾಹೇಬ…’ ಹೀಗೆ ಖದರ್ ಹಾಡಿನೊಂದಿಗೆ ಎಂಟ್ರಿಯಾಗುವ ಪ್ರೇಮ್, ಆನಂತರ ಎದ್ದು ಕಾಣುವುದು ಕಾಮಿಡಿ ಪೀಸ್ ಆಗಿ! ಪಕ್ಕಾ ರಾಜಕಾರಣದ ಮೂಲವಸ್ತುವಿಗೆ ಹೊಡೆದಾಟ, ಉಪದೇಶ, ಉಡಾಳ ನಾಯಕನ ಆಟ–ಹುಡುಗಾಟ, ನಾಯಕನ ವಿರುದ್ಧ ನಾಯಕಿಯ ಅಬ್ಬರ, ಪ್ರೀತಿ–ಪ್ರೇಮ, ಆದರ್ಶ ಹೀಗೆ ವಿರೋಧಾಭಾಸದ ಅಂಶಗಳನ್ನೆಲ್ಲ ತುರುಕಿದ್ದಾರೆ ನಿರ್ದೇಶಕ ವಿಜಯ್ ಹಂಪಾಳಿ. ಇಲ್ಲಿ ಹಾಸ್ಯವೂ ಇದೆ; ಮಚ್ಚು, ಬಂದೂಕುಗಳ ಮೊರೆತವೂ ಇದೆ.
ಯಾವ ವಸ್ತು, ವಿಚಾರದಲ್ಲಿ ಗಟ್ಟಿತನವಿದೆ ಎಂದು ಹುಡುಕಲು ಯತ್ನಿಸುವುದೇ ಕಷ್ಟ ಎನ್ನುವಷ್ಟು ಗೋಜಲುಗಳು. ರಾಜಕೀಯ ಕಥೆಗೆ ಕಾಮಿಡಿ ಸ್ಪರ್ಶ ಇರಬಾರದು ಎಂದೇನೂ ಇಲ್ಲ. ಆದರೆ ಆ ಕಾಮಿಡಿ ಪೇಲವವಾದರೆ, ಇತ್ತ ಖದರೂ ಇಲ್ಲ ಅತ್ತ ಕಾಮಿಡಿಯೂ ಇಲ್ಲದ ಎಡಬಿಡಂಗಿ ಚಿತ್ರವಾಗುತ್ತದೆ. ರಾಜಕೀಯ ಕಥನದ ಮೂಲಕ ಒಂದು ಸಂದೇಶ ಕೊಡಲು ನಿರ್ದೇಶಕರು ಯತ್ನಿಸಿದ್ದಾರೆ. ವೈರುಧ್ಯದ ಅಲೆಯಲ್ಲಿ ಈ ಸಂದೇಶದ ಅಂಶಗಳು ಮರೆಯಾಗಿ ಹೋಗುತ್ತವೆ, ಪೇಲವ ಅಂಶಗಳು ಢಾಳಾಗಿ ಗೋಚರಿಸುತ್ತವೆ!.
ಡಿಕೆ ಮೂಲ ಆದರ್ಶವಾದಿಯಲ್ಲ. ಐದು ನಿಮಿಷಕ್ಕೆ ಪ್ರೀತಿಸಿ, ಐದು ನಿಮಿಷಕ್ಕೆ ತಾಳಿ ಕಟ್ಟಿ, ಐದು ನಿಮಿಷದಲ್ಲಿ ಶೋಬನ ಮುಗಿಸಿ, ಐದೇ ನಿಮಿಷಕ್ಕೆ ವಿಚ್ಛೇದವನ್ನೂ ನೀಡುವ ಭೂಪ! ಅದೆಲ್ಲವೂ ಆತ ನಾಯಕಿಯ ಅಹಂಕಾರ, ಹಟವನ್ನು ಬಗ್ಗಿಸಲು ನಡೆಸುವ ಆಟ. ಅಂತಿಮವಾಗಿ ಬದಲಾಗುವ ಡಿಕೆ, ಸ್ವಚ್ಛ–ಆದರ್ಶ ರಾಜಕಾರಣಕ್ಕಾಗಿ ತನ್ನ ಹೆಂಡತಿಯನ್ನೇ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುತ್ತಾನೆ, ಕಿಂಗ್ ಮೇಕರ್ ಆಗುತ್ತಾನೆ. ಎಂಥಾ ವೈರುಧ್ಯ ಇದು!
ನಾಯಕಿ ತನ್ನ ಅಪ್ಪನ ಪರವಾಗಿ ನಾಯಕನ (ಡಿಕೆ) ವಿರುದ್ಧ ತೊಡೆ ತಟ್ಟುವುದು, ಅದಕ್ಕೆ ವಿರುದ್ಧವಾಗಿ ಡಿಕೆ ಮತ್ತೊಬ್ಬನಿಗೆ ಸಾಥ್ ನೀಡುವುದು, ನಾಯಕಿಯನ್ನು ತನ್ನ ಮಾತಿನ ಮೋಡಿಗೆ ಸಿಲುಕಿ ವಂಚಿಸುವುದು, ತನ್ನ ಗುರುವಿನ ಸಾವಿನೊಂದಿಗೆ ಡಿಕೆ ಬದಲಾಗುವುದು ಮತ್ತಿತರ ಸನ್ನಿವೇಶಗಳು ಈಗಾಗಲೇ ತೆರೆಗೆ ಬಂದು ಹೋಗಿರುವ ಹಲವು ಚಿತ್ರಗಳನ್ನು ನೆನಪಿಗೆ ತರುತ್ತವೆ. ಕ್ಲೈಮ್ಯಾಕ್ಸ್ನಲ್ಲಿ ‘ರಾಜಕಾರಣದಲ್ಲಿ ಗೆದ್ದವರೆಲ್ಲ ನಮ್ಮವರೇ’ ಎನ್ನುವ ಸವಕಲು ಮಾತನ್ನು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ.
ಮಚ್ಚು ಇಲ್ಲದಿದ್ದರೆ ಪ್ರೇಮ್ ಚಿತ್ರಗಳು ಪೂರ್ಣವಾಗುವುದಿಲ್ಲ! ಇಲ್ಲೂ ಪ್ರೇಮ್ ಕೈ ಬಿಚ್ಚಿ ಹೊಡೆದಾಡಿದ್ದಾರೆ. ಕಾಮಿಡಿಗಿಂತ ಹೊಡೆದಾಟದಲ್ಲಿ ಹೆಚ್ಚು ಅಂಕ ಗಳಿಸಿಕೊಳ್ಳುತ್ತಾರೆ. ಚೈತ್ರಾ ಹಟವಾದಿ, ಅಹಂಕಾರದ ತಮ್ಮ ಪಾತ್ರಕ್ಕೆ ಒಗ್ಗಿಕೊಂಡಿದ್ದರೆ, ಶರತ್ ಲೋಹಿತಾಶ್ವ ಪಾತ್ರ ಇಷ್ಟವಾಗುತ್ತದೆ. ರಾಜಕಾರಣಕ್ಕೆ ಸರಿಹೊಂದುವಂಥ ಸಂಭಾಷಣೆಗಳು ಚಿತ್ರಕ್ಕೆ ಪೂರಕವಾಗಿವೆ. ಸನ್ನಿ ಲಿಯೋನ್ ಕುಣಿದಿರುವ ‘ಬಾಗಿಲು ತೆಗೆಯೇ ಸೇಸಮ್ಮ…’ ಹಾಡು ಅಬ್ಬರಿಸುತ್ತದೆ, ಆದರೆ ಸಮೂಹ ಸನ್ನಿಯನ್ನೇನೂ ಹಿಡಿಸುವುದಿಲ್ಲ. ‘ಬಂದ ಬಂದ ನೋಡು ಡಿಕೆ ಸಾಹೇಬ’ ಹಾಡು ಹೊರತು ಬೇರಾವುದೂ ನೆನಪಿನಲ್ಲಿ ಉಳಿಯುವುದಿಲ್ಲ.