ಮನೋರಂಜನೆ

7ನೆ ಬೆಂಗಳೂರು ಅಂತರಾಷ್ಟ್ರೀಯ ಸಿನೆಮೋತ್ಸವ: ಸಿನಿಮಾ ನನಗೆ ಕಥನ ಕೌಶಲ್ಯ ಕಲಿಸಿದೆ: ಖ್ಯಾತ ಕಥೆಗಾರ ವಸುಧೇಂದ್ರ

Pinterest LinkedIn Tumblr

Vasudhendra

ಬೆಂಗಳೂರು: ೭ ನೆ ಬೆಂಗಳೂರು ಅಂತರಾಷ್ಟ್ರೀಯ ಸಿನೆಮೋತ್ಸವಕ್ಕೆ ಗುರುವಾರ ಚಾಲನೆ ಸಿಕ್ಕಿದ್ದು, ನಾಡಿದ ವಿವಿಧ ರಂಗದ ಸಾಧಕರು ಸಿನೆಮೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಅಂತಹವರಲ್ಲಿ ಒಬ್ಬರು ಕನ್ನಡದ ಖ್ಯಾತ ಕಥೆಗಾರ ವಸುಧೇಂದ್ರ. ಸಾಮಾನ್ಯವಾಗಿ ಬೆಂಗಳೂರು ಸಿನೆಮೋತ್ಸವವನ್ನು ತಪ್ಪಿಸಿಕೊಳ್ಳದ ವಸುಧೇಂದ್ರ ಸಿಕ್ಕಿದ್ದು ಹೀಗೆ.

*ಸಿನೆಮಾ ನಿಮಗೆ ಯಾಕೆ ಅಷ್ಟಿಷ್ಟ?

ನಾನು ಇಂಗ್ಲೆಂಡಿನಲ್ಲಿ ಕೆಲಸ ಮಾಡುವಾಗ ಸಾಕಷ್ಟು ಸಿನೆಮಾಗಳನ್ನು ನೋಡುತ್ತಿದ್ದೆ. ನನಗೆ ಸಿನೆಮಾದಲ್ಲಿನ ಕಥೆಗಾರಿಕೆ ಬಹಳ ಕಾಡುತ್ತೆ. ನನ್ನ ಕಥನ ಕೌಶಲ್ಯಕ್ಕೆ ಬಹುಷಃ ಈ ಸಿನೆಮಾಗಳೇ ಕಾರಣ ಇರಬೇಕು.

*ವಿಶ್ವ ಸಿನೆಮಾಗಳ ಮಹತ್ವ ಏನು?

ನಾನು ಇಂಗ್ಲಿಶ್ ಪುಸ್ತಕಗಳನ್ನು ಅಷ್ಟು ಸರಾಗವಾಗಿ ಓದಲಾರೆ. ಆದುದರಿಂದ ನನಗೆ ಬೇರೆ ದೇಶಗಳ ಕಥೆಗಳನ್ನು, ಸಂಸ್ಕೃತಿಯನ್ನು ತಿಳಿದುಕೊಳ್ಳಲು ಪುಸ್ತಕಗಳಿಗೆ ಇದು ಪರ್ಯಾಯ ಮಾರ್ಗ ಅನ್ಸುತ್ತೆ. ಇದು ಜಗತ್ತಿನ ಸಾಹಿತ್ಯ ಓದುವಷ್ಟೆ ಪರಿಣಾಮಕಾರಿ. ಹಾಗೆಯೇ ನನಗೆ ವೈಯಕ್ತಿಕವಾಗಿ ಸಿನೆಮಾ ಸಾಹಿತ್ಯಕ್ಕಿಂತ ಪರಿಣಾಮಕಾರಿ ಮಾಧ್ಯಮ ಎಂದೆನಿಸುತ್ತದೆ.

* ನೆಚ್ಚಿನ ವಿಶ್ವ ಸಿನೆಮಾ ನಿರ್ದೇಶಕ ಯಾರು?

ನನ್ನ ನೆಚ್ಚಿನ ನಿರ್ದೇಶಕ ಚೈನಾ ದೇಶದ ಜ್ಯಾಂಗ್ ಯಿಮೋವ್. ಅವನ ಒಂದು ಚಲನಚಿತ್ರ ‘ಕಮಿಂಗ್ ಹೋಮ್’ ಈ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಅದಕ್ಕೆ ಎದುರು ನೋಡುತ್ತಿದ್ದೇನೆ.

* ಎಲ್ ಜಿ ಬಿ ಟಿ ಆಕ್ಟಿವಿಸ್ಟ್ ಆಗಿ ಈ ಸಿನೆಮಾದಲ್ಲಿ ಎಲ್ ಜಿ ಬಿ ಟಿ ಹಕ್ಕುಗಳ ಬಗ್ಗೆ ಚರ್ಚಿಸುವ ಯಾವುದಾದ್ರೂ ಸಿನೆಮಾ ಎದುರು ನೋಡುತ್ತಿದ್ದಿರಾ?

ಆಶ್ಚರ್ಯಕರವಾಗಿ ಈ ಸಿನೆಮೋತ್ಸವದಲ್ಲಿ ಈ ವಿಷಯದ ಯಾವುದೇ ಸಿನೆಮಾಗಳಿಲ್ಲ. ಬಹುಷಃ ಅವರಿಗೆ ಈ ಥೀಮ್ ಆಧಾರಿತ ಒಳ್ಳೆಯ ಸಿನೆಮಾ ಸಿಕ್ಕಿಲ್ಲವೇನೊ ಅಥವಾ ಲೈಂಗಿಕ ಹಿಂಸೆಯನ್ನು ವಿಶೇಷ ವಸ್ತುವಾಗಿ ಆಯ್ಕೆ ಮಾಡಿರುವುದರಿಂದ ಎಲ್ ಜಿ ಬಿ ಟಿ ಸಿನೆಮಾ ಯಾವುದನ್ನೂ ಆಯ್ಕೆ ಮಾಡಿಲ್ಲವೇನೊ. ಆದರೆ ಜನವರಿಯಲ್ಲಿ “ಬೆಂಗಳೂರು ಕ್ವೀರ್ ಫಿಲ್ಮ್ ಫೆಸ್ಟಿವಲ್” ನಡೆಯುತ್ತದೆ. ಅದನ್ನು ಎದುರು ನೋಡುತ್ತಿದ್ದೇನೆ.

* ಸಾಹಿತ್ಯಕ್ಕಿಂತ ಸಿನೆಮಾಗಳಲ್ಲಿ ಎಲ್ ಜಿ ಬಿ ಟಿ ಸಮಸ್ಯೆಗಳನ್ನು ಹೆಚ್ಚು ಪ್ರತಿನಿಧಿಸ್ತಾರ?

ಹಾಗೇನಿಲ್ಲ. ಪಶ್ಚಿಮ ದೇಶಗಳಲ್ಲಿ ಸಾಹಿತ್ಯದಲ್ಲೂ ಹಾಗೂ ಸಿನೆಮಾದಲ್ಲೂ ಈ ಸಮಸ್ಯೆಗಳನ್ನು ಹೆಚ್ಚು ಬಿಂಬಿಸುತ್ತಾರೆ. ನಾವು ಭಾರತದಲ್ಲೇ ಆ ಪ್ರಯೋಗಗಳನ್ನು ಹೆಚ್ಚು ಮಾಡಿಲ್ಲ.

Write A Comment