ಮುಂಬೈ, ನ.21: ಭಾರತದ ಕ್ರಿಕೆಟ್ಗೆ ನೀಡಿದ ಮಹತ್ತರ ಕೊಡುಗೆಗಾಗಿ ಮಾಜಿ ನಾಯಕ ದಿಲಿಪ್ ವೆಂಗ್ಸರ್ಕಾರ್ ಶುಕ್ರವಾರ ಇಲ್ಲಿ ಬಿಸಿಸಿಐನ ಪ್ರತಿಷ್ಠಿತ ಕರ್ನಲ್ ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಶುಕ್ರವಾರ ತಡ ರಾತ್ರಿ ಆಸ್ಟ್ರೇಲಿಯಕ್ಕೆ ಪ್ರವಾಸ ಕೈಗೊಳ್ಳಲಿರುವ ಭಾರತದ ವೇಗದ ಬೌಲರ್ ಭುವನೇಶ್ವರ ಕುಮಾರ್ ಹಾಗೂ ರೋಹಿತ್ ಶರ್ಮ ಪ್ರಶಸ್ತಿ ಸ್ವೀಕರಿಸಿದರು. ಕುಮಾರ್ ಪಾಲಿ ಉಮ್ರಿಗರ್ ಪ್ರಶಸ್ತಿ ಹಾಗೂ ರೂ. 5 ಲಕ್ಷ ಚೆಕ್ ಸ್ವೀಕರಿಸಿದರೆ, ರೋಹಿತ್ ಶ್ರೀಲಂಕಾ ವಿರುದ್ಧ ನಾಲ್ಕನೆ ಏಕದಿನ ಪಂದ್ಯದಲ್ಲಿ ವಿಶ್ವದಾಖಲೆ 264 ರನ್ ಸಿಡಿಸಿದ್ದಕ್ಕಾಗಿ ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡರು.
‘‘ನನಗೆ ಈ ಗೌರವ ನೀಡಿದ್ದಕ್ಕೆ ಬಿಸಿಸಿಐಗೆ ಋಣಿಯಾಗಿದ್ದೇನೆ. ನಾನು ಮುಂಬಯಿ ಹಾಗೂ ಭಾರತ ಪರ ಆಡುವ ಕನಸು ಕಂಡಿದ್ದೆ. ನಾನು ಪ್ರತಿ ಇನಿಂಗ್ಸನ್ನು ಆನಂದಿಸಿದ್ದೆ. ನನ್ನ ಬೆಂಬಲಕ್ಕೆ ನಿಂತಿದ್ದ ಮುಂಬೈನ ಶಾಲಾ-ಕಾಲೇಜು ಹಾಗೂ ವಿಶ್ವವಿದ್ಯಾನಿಲಯಕ್ಕೆ ಕೃತಜ್ಞತೆ ಸಲ್ಲಿಸುವೆನು’’ ಎಂದು ವೆಂಗ್ಸರ್ಕಾರ್ ನುಡಿದರು.