ಚಿನ್ನ ಗೆದ್ದ ಯೋಗೇಶ್ವರ್ ದತ್ (ಎಡ), 400ಮೀ. ಓಟದ ಸ್ಪರ್ಧೆಯಲ್ಲಿ ಕಂಚು ಜಯಿಸಿದ ರಾಜ್ಯದ ಎಂ.ಆರ್. ಪೂವಮ್ಮ
ಇಂಚೆನ್: ಹದಿನೇಳನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಭಾನುವಾರವೂ ಮುಂದುವರಿಯಿತು. ಹರಿಯಾಣದ ಯೋಗೇಶ್ವರ್ ದತ್ ಕುಸ್ತಿಯಲ್ಲಿ ಚಿನ್ನ ಗೆದ್ದರೆ, ಕರ್ನಾಟಕದ ಎಂ.ಆರ್. ಪೂವಮ್ಮ ಮಹಿಳೆಯರ 400ಮೀ. ಓಟದಲ್ಲಿ ಕಂಚು ಪಡೆದರು.
ಏಷ್ಯನ್ ಕೂಟದ ಕುಸ್ತಿಯಲ್ಲಿ ಭಾರತಕ್ಕೆ 28 ವರ್ಷಗಳ ಬಳಿಕ ಚಿನ್ನದ ಪದಕ ಒಲಿದಿದೆ. 1986ರ ಕೂಟದಲ್ಲಿ ಕರ್ತಾರ್ ಸಿಂಗ್ ಕೊನೆಯ ಸಲ ಬಂಗಾರ ತಂದುಕೊಟ್ಟಿದ್ದರು.
ಕ್ರೀಡಾಕೂಟದ ಒಂಬತ್ತನೇ ದಿನವಾದ ಭಾನುವಾರ ಭಾರತ ತಲಾ ಒಂದು ಚಿನ್ನ, ಬೆಳ್ಳಿ ಮತ್ತು ಆರು ಕಂಚು ಗೆದ್ದುಕೊಂಡಿದೆ. ಒಟ್ಟು 35 ಪದಕಗಳನ್ನು ಗೆದ್ದಿರುವ ಭಾರತ ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೇರಿದೆ.
ಮಹಿಳೆಯರ 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಖುಷ್ಬೀರ್ ಕೌರ್ ಬೆಳ್ಳಿ ಜಯಿಸಿದರೆ, ಟೆನಿಸ್ನಲ್ಲಿ ಪುರುಷ ಮತ್ತು ಮಹಿಳಾ ತಂಡಗಳು ಡಬಲ್ಸ್ ವಿಭಾಗದಲ್ಲಿ ಕಂಚು ಗೆದ್ದವು. ಯೂಕಿ ಭಾಂಬ್ರಿ ಸಿಂಗಲ್ಸ್ನಲ್ಲಿ ಪದಕದ ಸಾಧನೆ ತೋರಿದರು.