ಮುಂಬೈ (ಫೆ.14): ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ಯೋಜನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಮಹಾರಾಷ್ಟ್ರದಲ್ಲಿ ಶಿವಸೇನೆ ಮೈತ್ರಿ ಸರ್ಕಾರ ಜಾರಿಗೆ ಬಂದ ನಂತರ ‘ಇಂದಿರಾ ಕ್ಯಾಂಟೀನ್’ ಮಾದರಿಯಲ್ಲೇ ‘ಶಿವ ಭೋಜನ’ ಯೋಜನೆಯನ್ನು ಪರಿಚಯಿಸಿತ್ತು. 10 ರೂಪಾಯಿಗೆ ದೊರೆಯುತ್ತಿರುವ ಈ ಊಟಕ್ಕೆ ಜನ ಸಾಮಾನ್ಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಗಣರಾಜ್ಯೋತ್ಸವದ ನಿಮಿತ್ತ ಜ.26ರಂದು ಮಹಾರಾಷ್ಟ್ರ ಸರ್ಕಾರ ‘ಶಿವ ಭೋಜನ’ ಪರಿಚಯಿಸಿತ್ತು. ಕಳೆದ 17 ದಿನಗಳಲ್ಲಿ ಒಟ್ಟು 2.33 ಲಕ್ಷ ಜನರು ಈ ಯೋಜನೆಯ ಲಾಭ ಪಡೆದಿದ್ದಾರೆ. ಅಂದರೆ ನಿತ್ಯ ಸುಮಾರು 13,750 ಜನರು ‘ಶಿವ್ ಭೋಜನ’ದ ಮೂಲಕ ತಮ್ಮ ಹಸಿವನ್ನು ನೀಗಿಸಿಕೊಂಡಿದ್ದಾರೆ.
ಬಡವರಿಗೆ, ದಿನಗೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಊಟ ನೀಡುವುದು ‘ಶಿವ ಭೋಜನ’ ಯೋಜನೆಯ ಮುಖ್ಯ ಉದ್ದೇಶ. ಈ ಯೋಜನೆಗೆ ಮೊದಲ ದಿನವೇ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಹೀಗಾಗಿ ನಿತ್ಯ ಇಲ್ಲಿಗೆ ಆಗಮಿಸುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಲೇ ಇದೆ.
ಈ ಯೋಜನೆಯನ್ನು ಸರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಸಿಎಂ ಉದ್ಧವ್ ಠಾಕ್ರೆ ‘ಶಿವ್ ಭೋಜನ್’ ಯೋಜನೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಗುಣಮಟ್ಟ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವುದು ಸಿಎಂ ಅವರ ಮೂಲ ಉದ್ದೇಶವಾಗಿದೆ.
ಏನೇನು ಇರಲಿದೆ?:
ರಾಜ್ಯದ ವಿವಿಧ ಕಡೆಗಳಲ್ಲಿ ‘ಶಿವ್ ಭೋಜನ್’ ಆರಂಭಿಸಲಾಗಿದ್ದು, ಕೇವಲ 10 ರೂಪಾಯಿಗೆ ಊಟ ದೊರೆಯುತ್ತಿದೆ. ಒಂದು ಬೌಲ್ ಅನ್ನ, ದಾಲ್, ತರಕಾರಿ, 2 ಚಪಾತಿ, ಒಂದು ಸ್ವೀಟ್ ಸಿಗಲಿದೆ.ರಾಜ್ಯದಲ್ಲಿ ಇಂದಿರಾ ಕ್ಯಾಂಟಿನ್:
ಬೆಳಗ್ಗೆ 5 ರೂ. ಗೆ ತಿಂಡಿ ಹಾಗೂ ಉಳಿದ ಎರಡೊತ್ತು 10 ರೂ. ಗೆ ಊಟ ಕೊಡುವ ಈ ಯೋಜನೆಯೇ ಇಂದಿರಾ ಕ್ಯಾಂಟೀನ್. ಬಿಬಿಎಂಪಿ ವ್ಯಾಪ್ತಿಯ 173 ವಾರ್ಡ್ಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು. ಕ್ಯಾಂಟೀನ್ ನಿರ್ಮಾಣಕ್ಕೆ ಜಾಗದ ಕೊರತೆ ಇದ್ದ ಸ್ಥಳಗಳಲ್ಲಿ 18 ಮೊಬೈಲ್ ಕ್ಯಾಂಟೀನ್ಗಳನ್ನೂ ತೆರೆಯಲಾಗಿತ್ತು. ಬೆಂಗಳೂರು ಹೊರತುಪಡಿಸಿ ಹುಬ್ಬಳ್ಳಿ, ದಾವಣಗೆರೆ, ಮೈಸೂರು, ಕೊಡಗು ನಂತಹ ದ್ವಿತೀಯ ದರ್ಜೆಯ ನಗರಗಳಲ್ಲೂ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ. ರಾಜಧಾನಿಯ ಸುಮಾರು 14.47 ಲಕ್ಷ ಬಡಜನರು ಪ್ರತಿನಿತ್ಯ ಇಂದಿರಾ ಕ್ಯಾಂಟೀನ್ ಊಟದ ಮೇಲೆ ಅವಲಂಬಿತರಾಗಿದ್ದಾರೆ ಎಂಬುದು ಅಂಕಿ ಅಂಶಗಳ ಮಾಹಿತಿ.
Comments are closed.