ಮುಂಬೈ

ರೈಲಿನಲ್ಲಿ ಹೆಂಡತಿಗೆ ಸೀಟು ಕೇಳಿದ ಗಂಡನನ್ನು ಥಳಿಸಿ ಹತ್ಯೆ ಮಾಡಿದ ಪ್ರಯಾಣಿಕರು!

Pinterest LinkedIn Tumblr


ಮುಂಬೈ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪತ್ನಿಗೆ ಸೀಟು ಕೊಡಿ ಎಂದು ಕೇಳಿದ್ದಕ್ಕೆ ಪತಿಯನ್ನು 12 ಮಂದಿ ಹಿಗ್ಗಾಮುಗ್ಗಾ ಹೊಡೆದು ಕೊಂದು ಹಾಕಿರುವ ಘಟನೆ ಮುಂಬೈ-ಲಾತೂರ್, ಬೀದರ್ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

ಮುಂಬೈನ ಕಲ್ಯಾಣ್ ನಿವಾಸಿ ಸಾಗರ್ ಮಾರ್ಕಂಡ್ (29ವರ್ಷ) ಹಾಗೂ ಪತ್ನಿ ಜ್ಯೋತಿ, ಎರಡು ವರ್ಷದ ಪುತ್ರಿ ಜತೆಗೆ ಬುಧವಾರ ರಾತ್ರಿ ಕಲ್ಯಾಣ್ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಿದ್ದರು. ಜನರಲ್ ಕಂಪಾರ್ಟ್ ಮೆಂಟ್ ಜನರಿಂದ ತುಂಬಿ ಹೋಗಿತ್ತು. ಈ ಸಂದರ್ಭದಲ್ಲಿ ಕೆಲವು ಮಹಿಳೆಯರ ಬಳಿ ಪತ್ನಿಗೆ ಕುಳಿತುಕೊಳ್ಳಲು ಸ್ವಲ್ಪ ಸ್ಥಳ ಕೊಡಿ ಎಂದು ಕೇಳಿಕೊಂಡಿರುವುದಾಗಿ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಸಾಟೋರೆ ತಿಳಿಸಿದ್ದಾರೆ.

ಮಾರ್ಕಂಡ್ ಮನವಿ ಕೇಳಿದ ಮಹಿಳೆಯರು ಕೋಪಗೊಂಡು ಬೈಯ್ಯಲು ಆರಂಭಿಸಿದ್ದರು. ಇದರಿಂದ ವಾಗ್ವಾದ ನಡೆದು ಮಹಿಳೆಯರು ಹಾಗೂ ಗಂಡಸರು ಸೇರಿ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ಪತ್ನಿ ಹೊಡೆಯಬೇಡಿ ಎಂದು ಅಂಗಲಾಚಿದರೂ ಸುಮಾರು ಒಂದು ತಾಸುಗಳ ಕಾಲ ಹೊಡೆದಿದ್ದರು. ರೈಲು ದೌಂಡ್ ಸ್ಟೇಶನ್ ನಲ್ಲಿ ನಿಂತಾಗ ಕೂಡಲೇ ರೈಲ್ವೆ ಪೊಲೀಸರು ಮಾರ್ಕಂಡ್ ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಮಾರ್ಕಂಡ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಕಂಡ್ ಮತ್ತು ಪತ್ನಿ ಸೋಲಾಪುರ್ ಜಿಲ್ಲೆಯ ಕುರ್ದುವಾಡಿಯಲ್ಲಿ ತಮ್ಮ ಸಂಬಂಧಿಯೊಬ್ಬರ ಅಂತ್ಯ ಸಂಸ್ಕಾರ ಕಾರ್ಯಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ವರದಿ ತಿಳಿಸಿದೆ.

ಘಟನೆಗೆ ಸಂಬಂಧಿಸಿದಂತೆ ಆರು ಮಹಿಳೆಯರು ಹಾಗೂ ನಾಲ್ವರು ಗಂಡಸರನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಸಾಟೋರೆ ತಿಳಿಸಿದ್ದಾರೆ.

Comments are closed.