
ಮುಂಬಯಿ: ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಕ್ಷಿಪ್ರಕ್ರಾಂತಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕೆಲವೇ ಕೆಲವು ಗಂಟೆಗಳಲ್ಲಿ ಇಡೀ ಚಿತ್ರಣವೇ ಬದಲಾಗಿದ್ದು ಹೇಗೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ಶಿವಸೇನೆ, ಎನ್ಸಿಪಿ, ಕಾಂಗ್ರೆಸ್ ಮೈತ್ರಿ ಸರಕಾರ ರಚನೆಯಾಗಲಿದೆ. ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದು ಶುಕ್ರವಾರ ರಾತ್ರಿ 11 ಗಂಟೆವರೆಗಿನ ಬೆಳವಣಿಗೆ ಆಗಿತ್ತು.
ಆದರೆ ಮಧ್ಯರಾತ್ರಿ 12 ಗಂಟೆ ಆಗುತ್ತಿದ್ದಂತೆ ಎಲ್ಲವೂ ಉಲ್ಟಾ ಆಯಿತು. ಬಿಜೆಪಿ ಮತ್ತು ಅಜಿತ್ ಪವಾರ್ ನಡುವೆ ಡೀಲ್ ಕುದುರಿತು. 12.30ಕ್ಕೆ ರಾಜ್ಯಪಾಲರ ಹೊಸದಿಲ್ಲಿ ಪ್ರವಾಸ ಕೂಡ ರದ್ದಾಯಿತು. ನಂತರ ದೇವೇಂದ್ರ ಫಡ್ನವಿಸ್, ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದ್ದು ಎಲ್ಲರಿಗೂ ಗೊತ್ತಿದೆ.
ಈ ಮಹಾ ನಾಟಕೀಯ ಬೆಳವಣಿಗೆಯಾಗಲು ಕಾರಣವೇನು ಎಂಬುದು ಎಲ್ಲರ ತಲೆಕೆಡಿಸಿದೆ.
ಆದರೆ ರಾಜಕೀಯ ತಜ್ಞರ ಪ್ರಕಾರ ಇದು ಪ್ರೀಪ್ಲಾನ್ ಯೋಜನೆ ಎನ್ನಲಾಗಿದೆ. ಶರದ್ ಪವಾರ್ ಮತ್ತು ಅಜಿತ್ ಪವಾರ್ ಮಹಾರಾಷ್ಟ್ರದಲ್ಲಿ ನಡೆದಿರುವ 70 ಸಾವಿರ ಕೋಟಿ ರೂ. ಅವ್ಯವಹಾರ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ಇಬ್ಬರ ವಿರುದ್ಧವೂ ಜಾರಿ ನಿರ್ದೇಶನಾಲಯ ಈಗಾಗಲೇ ಸಮನ್ಸ್ ಜಾರಿ ಮಾಡಿದೆ. ಶರದ್ ಮತ್ತು ಅಜಿತ್ ಈಗಾಗಲೇ ಸಮನ್ಸ್ಗೆ ಉತ್ತರ ನೀಡಿ ಕಾಲಾವಕಾಶ ನೀಡುವಂತೆಯೂ ಮನವಿ ಮಾಡಿದ್ದಾರೆ.
ರಾಜಕೀಯ ಬೆಳವಣಿಗೆ ಮಧ್ಯದಲ್ಲಿಯೇ ಶರದ್ ಪವಾರ್, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಜತೆಗೂಡಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದರ ಬೆನ್ನಲ್ಲೇ ರಾಜ್ಯಸಭೆಯ ವಿಶೇಷ ಅಧಿವೇಶನದಲ್ಲಿ ಪ್ರಧಾನಿ ಮೋದಿ ಎನ್ಸಿಪಿಯನ್ನು ಹಾಡಿ ಹೊಗಳಿದರು.
‘ಇಡಿ’ಯ ಹಿಡಿತದಿಂದ ತಪ್ಪಿಸಿಕೊಳ್ಳಲು ಶರದ್ ಪವಾರ್ ಕುಟುಂಬ ಬಿಜೆಪಿಯ ಹಾಗೂ ಅದಕ್ಕಿಂತಲೂ ಹೆಚ್ಚಾಗಿ ನರೇಂದ್ರ ಮೋದಿ, ಅಮಿತ್ ಶಾ ಮೊರೆ ಹೋಗಿದೆ ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ ಚುನಾವಣೆ ಫಲಿತಾಂಶದ ನಂತರ ಶಿವಸೇನೆಯು ಬಿಜೆಪಿಗಿನ ಮೈತ್ರಿಯನ್ನು ಕಡಿದುಕೊಂಡು ಮುಖ್ಯಮಂತ್ರಿ ಹುದ್ದೆ ಕನಸು ಕಂಡಿತ್ತು. ಹದಿನೈದು ದಿನಗಳ ಮುನ್ನವೇ ಬಿಜೆಪಿ-ಎನ್ಸಿಪಿ ನಾಯಕರ ಜತೆಗೆ ಅಮಿತ್ ಶಾ ಮಾತುಕತೆ ನಡೆಸಿ ಸರಕಾರ ರಚನೆ ಪ್ರಕ್ರಿಯೆಗೆ ಚಾಲನೆ ನೀಡಿದ್ದರು ಎಂದು ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಗುಸುಗುಸು ಕೇಳಿಬಂದಿದೆ.
ಇದಾದ ಕೆಲ ದಿನಗಳ ಹಿಂದೆ ರಾಜಕೀಯ ವಲಯದಲ್ಲಿ ಕೆಲವು ವದಂತಿಗಳು ಕೇಳಿಬಂದವು. ಶರದ್ ಪವಾರ್ ರಾಷ್ಟ್ರಪತಿ ಹುದ್ದೆ ನೀಡುವ ಕುರಿತು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎಂಬ ಮಾತು ಕೇಳಿಬಂದವು. ಈ ಎಲ್ಲ ಬೆಳವಣಿಗೆಗಳಿಗೆ ಪೂರಕ ಎಂಬಂತೆ ಶನಿವಾರ ಬೆಳಗಿನ ಜಾವ ಬಿಜೆಪಿಯ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿ, ಎನ್ಸಿಪಿಯ ಶರದ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಈಗ ಯಾರು ಯಾವ ಆಟ ಆಡಿದ್ದಾರೆ. ಯಾವ ತಂತ್ರವನ್ನು ಯಾರು ಯಾರು ಪ್ರಯೋಗ ಮಾಡಿರಬಹುದು ಎಂಬುದು ಸುಸ್ಪಷ್ಟ. ಪಕ್ಷ, ಸಿದ್ಧಾಂತವು ಅಧಿಕಾರದ ಮುಂದೆ ತಲೆಬಾಗುತ್ತದೆ ಎಂಬುದಕ್ಕೆ ಮತ್ತೊಂದು ‘ಮಹಾ’ ಉದಾಹರಣೆ ಇಲ್ಲಿದೆ.
Comments are closed.