ಮುಂಬೈ: ಬಿಕ್ಕಟ್ಟಿಗೆ ಸಿಲುಕಿಕೊಂಡಿರುವ ಪಂಜಾಬ್ ಮಹಾರಾಷ್ಟ್ರ ಸಹಕಾರ ಬ್ಯಾಂಕ್ (ಪಿಎಂಸಿ)ನ ಮತ್ತೊಬ್ಬ ಠೇವಣಿದಾರರು ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಒಟ್ಟು ನಾಲ್ವರು ಠೇವಣಿದಾರರು ಅಸುನೀಗಿದ್ದಾರೆ.
ಪಿಎಂಸಿ ಬ್ಯಾಂಕ್ನ ಖಾತೆದಾರರಾದ ಮುರಳೀಧರ ಧರ ಅವರೇ ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ. ಹಿರಿಯ ನಾಗರಿಕರಾಗಿರುವ ಮುರಳೀಧರ ಧರ ಅವರ ಚಿಕಿತ್ಸೆ ವೆಚ್ಚಕ್ಕಾಗಿ ಪಿಎಂಸಿ ಬ್ಯಾಂಕ್ನಿಂದ ತಮ್ಮ ಹಣವನ್ನು ಹಿಂಪಡೆಯಲಾಗಿದೆ ಸಂಕಷ್ಟಕ್ಕೆ ತುತ್ತಾಗಿದ್ದರು ಎಂದು ಎಎನ್ಐ ವರದಿ ಮಾಡಿದೆ.
51 ವರ್ಷದ ಜೆಟ್ ಏರ್ವೇಸ್ ಸಂಸ್ಥೆಯ ಮಾಜಿ ಉದ್ಯೋಗಿಯಾಗಿರುವ ಸಂಜಯ್ ಗುಲಾಟಿ ಎಂಬುವವರು ಪಿಎಂಸಿ ಬ್ಯಾಂಕಲ್ಲಿ 90 ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದರು. ಹಣ ವಾಪಸ್ ಸಿಗುವುದಿಲ್ಲ ಎಂದು ಭಯಭೀತಗೊಂಡಿದ್ದ ಗುಲಾಟಿ ಸೋಮವಾರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು.
ಅದಾದ ಮರುದಿನವೇ ಫಟೋಮಲ್ ಪಂಜಾಬಿ ಎಂಬುವವರು ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು. ಪಿಎಂಸಿ ಬ್ಯಾಂಕಿನಿಂದ ಹಣ ಹಿಂಪಡೆಯುವಿಕೆಗೆ ಆರ್ಬಿಐ ಕಡಿವಾಣ ಹಾಕಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದಾಗಿ ಪಂಜಾಬಿ ಹೃದಯಾಘಾತಕ್ಕೆ ಒಳಗಾಗಿದ್ದರು.
ಮುಂಬೈನ 39 ವರ್ಷದ ವೈದ್ಯೆ ನಿವೇದಿತಾ ಬಿಜಲಾನಿ (39) ಎಂಬುವವರು ಕೂಡ ನಿದ್ದೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪಿಎಂಸಿ ಬ್ಯಾಂಕ್ ಖಾತೆದಾರರಾಗಿರುವ ನಿವೇದಿತಾ ಅವರು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದರ ಬೆನ್ನಲ್ಲೇ ಇದೀಗ ಮತ್ತೋರ್ವ ಬ್ಯಾಂಕ್ ಠೇವಣಿದಾರ ಹೃದಯಾಘಾತಕ್ಕೆ ಒಳಗಾಗಿ ಅಸುನೀಗಿದ್ದಾರೆ.
ಅವ್ಯವಹಾರ ಹಗರಣಕ್ಕೆ ಸಿಲುಕಿರುವ ಪಿಎಂಸಿ ಬ್ಯಾಂಕ್ ಇದೀಗ ಭಾರೀ ನಷ್ಟದಲ್ಲಿದೆ. ಆರ್ಬಿಐನ ನಿರ್ದೇಶನದ ಅಡಿಯಲ್ಲಿರುವ ಈ ಬ್ಯಾಂಕಲ್ಲಿ ಠೇವಣಿದಾರರು ಇಟ್ಟಿರುವ ಹಣದ ಮೊತ್ತ 11,000 ಕೋಟಿ ಇದೆ. ತಮ್ಮ ಹಣ ವಾಪಸ್ ನೀಡುವಂತೆ ಠೇವಣಿದಾರರು ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ಧಾರೆ.
Comments are closed.