ಇನ್ನ 30 ವರ್ಷಗಳ ಕಾಲ ಸ್ಥಿರ ಆಡಳಿತದ ನೀಡುವುದು ಎನ್ಡಿಎ ಉದ್ದೇಶ ಎಂದಿದ್ದ ಅಮಿತ್ ಷಾ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಭಾರೀ ಹಿನ್ನಡೆಯಲ್ಲದೆ ಅಭದ್ರತೆಯ ಭಾವ ಮೂಡಿಸಿದೆ.
ಐದು ರಾಜ್ಯಗಳ ಚುನಾವಣಾ ಫಲಿತಾಂಶದಿಂದಾಗಿ ದೇಶದ ರಾಜಕೀಯದ ದಿಕ್ಕು ಬದಲಾಗುವ ಮುನ್ಸೂಚನೆ ಕಂಡಿದ್ದು, ಇದು ಬಿಜೆಪಿ ನಾಯಕರಿಗೆ ಸಂಕಷ್ಟ ತಂದೊಡ್ಡಿದೆ. ಅಷ್ಟೇ ಅಲ್ಲದೆ, ಬಿಜೆಪಿಯೊಂದಿಗೆ ಸುದೀರ್ಘ ಸಂಬಂಧ ಹೊಂದಿದ್ದ ಶಿವಸೇನೆ ಈಗ ಬಿಜೆಪಿ ಸಖ್ಯ ತೊರೆಯುವ ಮುನ್ಸೂಚನೆ ನೀಡಿದ್ದು, ತೆಲಂಗಾಣದಂತೆ ಅವಧಿ ಪೂರ್ವವಾಗಿ ವಿಧಾನಸಭಾ ಚುನಾವಣೆ ಎದುರಿಸಲು ಸಜ್ಜಾಗಿದೆ.
ಛತ್ತೀಸ್ ಗಢ, ರಾಜಸ್ಥಾನ, ಮಧ್ಯಪ್ರದೇಶದ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿಗೆ ಲೋಕಸಭಾ ಚುನಾವಣೆಗೆ ಈಗ ಜೊತೆಗಾರರ ಅವಶ್ಯಕತೆ ಇದೆ.
ದೇಶದ ರಾಜಕೀಯ ಇತಿಹಾಸದಲ್ಲಿಯೇ ಶಿವಸೇನೆ ಮತ್ತು ಬಿಜೆಪಿಯದ್ದು ಒಂದು ಸುದೀರ್ಘ ಸಂಬಂಧ. ಸುಮಾರು 25 ವರ್ಷಗಳ ಜೊತೆಗಾರರಾಗಿದ್ದ ಉಭಯ ಪಕ್ಷಗಳಿಗೆ 2014ರ ನಂತರದಲ್ಲಿ ಮೊದಲ ಬಾರಿಗೆ ವಿರಸ ಕಾಣಿಸಿಕೊಂಡಿದೆ. ಇದೀಗ ಮುಂದಿನ ದಿನಗಳಲ್ಲಿ ಮೈತ್ರಿ ಮುರಿದುಕೊಳ್ಳಲು ಸಿದ್ದವಾಗಿದ್ದೇವೆ ಎಂದು ಶಿವಸೇನೆ ಹೇಳುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಇಬ್ಬರು ಅಖಾಡಕ್ಕೆ ಇಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ನಡುವೆ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಜನರ ತೀರ್ಪನ್ನು ಸ್ವಾಗತಿಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿಯ ಹುಡುಕಾಟ ಹೇಳಿಕೆ ಬಿಜೆಪಿ ಸೋಲಿಗೆ ಕಾರಣ. ಕಾಂಗ್ರೆಸ್ ಮುಕ್ತವಾಗುವ ಬಿಜೆಪಿ ಕನಸು ಭಗ್ನಕೊಂಡಿದೆ ಎಂದು ಪ್ರತಿಕ್ರಿಯಿಸಿದ್ದರು.
ಬಿಜೆಪಿ ಸಖ್ಯ ಹೊಂದಿರುವ ಜೆಡಿಯು, ಅಕಾಲಿದಳ ಚುನಾವಣಾ ಫಲಿತಾಂಶದ ಬಗ್ಗೆ ತಟಸ್ಥ ನೀತಿ ಹೊಂದಿರುವಾಗ ಶಿವಸೇನೆ ಹೇಳಿಕೆ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುತ್ತಿರುವುದರ ಸ್ಪಷ್ಟ ಸೂಚನೆಯಾಗಿದೆ,
‘ರಾಜವಂಶ’, ‘ಭ್ರಷ್ಟಾಚಾರ’, ‘ಚಾಯ್ವಾಲ’, ‘ನಾಮ್ದಾರ್ v/s ಕಾಮ್ದಾರ್’ ಹಾಗೂ ‘ರಾಮಮಂದಿರ’ ವಿಷಯಗಳು ಬಿಜೆಪಿಗೆ ಕೈ ಹಿಡಿಯಲಿಲ್ಲ ಎಂದು ಕಮಲಪಾಳಯದ ಸೋಲನ್ನು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ವ್ಯಾಖ್ಯಾನಿಸಲಾಗಿದೆ.
ಜನರು ಸ್ಪಷ್ಟ ಅಭಿವೃದ್ಧಿ , ಭ್ರಷ್ಟಚಾರ ಹಾಗೂ ಕಪ್ಪು ಹಣದ ವಿರುದ್ಧ ಪ್ರಧಾನಿ ಹೋರಾಡಬೇಕು ಎಂದು ಬಯಸುತ್ತಿದ್ದಾರೆ ಎಂದಿದ್ದಾರೆ.
ಇನ್ನು ಶರದ್ ಪವರ್ ಹಾಗೂ ಉದ್ಭವ್ ಠಾಕ್ರೆ ನಡುವೆ ಈಗಾಗಲೇ ಮಾತುಕತೆ ಆರಂಭವಾಗಿದೆ ಎಂದು ಈಗಾಗಲೇ ಮಾಧ್ಯಮಗಳು ವರದಿ ಮಾಡುತ್ತಿದೆ. ಕಾಂಗ್ರೆಸ್, ಎನ್ಸಿಪಿ ಹಾಗೂ ಶಿವಸೇನೆಯ ಅಘೋಷಿತ ತಂತ್ರಗಾರಿಕೆಯಿಂದಾಗಿ ಬಿಜೆಪಿ ಏಕಾಂಗಿಯಾಗಿದ್ದು ಮೂರು ಪಕ್ಷಗಳು ಬೆಂಬಲದ ನಿರೀಕ್ಷೆಯಲ್ಲಿದೆ. ಇದರಿಂದಾಗಿ ದುರ್ಬಲಗೊಂಡಿರುವ ಶಿವಸೇನೆ ಮಹಾರಾಷ್ಟ್ರದ ಹಿರಿಯ ಪಾಲುದಾರ ಸ್ಥಾನಕ್ಕೆ ಮರಳಲು ತಂತ್ರಗಾರಿಕೆ ರೂಪಿಸಲು ಮುಂದಾಗಿದೆ.
ಈಗಾಗಲೇ ಹಳಸಿದ ಸಂಬಂಧದಲ್ಲಿ ಮುನ್ನಡೆಯುತ್ತಿರುವ ಶಿವಸೇನೆ ಬಿಜೆಪಿ ಲೋಕಸಭಾ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಒಟ್ಟಿಗೆ ಎದುರಿಸುವುದಾಗಿ ಈ ಹಿಂದೆ ತಿಳಿಸಿದ್ದವು. ಆದರೆ ಈಗ ಬದಲಾದ ಪರಿಸ್ಥಿತಿಯಲ್ಲಿ ಈ ಬಿಜೆಪಿ ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆ ಅಧಿಕಾರ ಹಂಚಿಕೊಳ್ಳಲು ಹಿಂದು ಮುಂದು ಯೋಚಿಸಲು ಮುಂದಾಗಿದೆ.
ಚುನಾವಣಾ ಸಮಯದಲ್ಲಿ ಮಾತ್ರ ಬಿಜೆಪಿಗೆ ರಾಮ ನೆನಪಾಗುತ್ತಾದೆ ಎಂದು ಬಹಿರಂಗವಾಗಿ ಬಿಜೆಪಿ ಟೀಕಿಸಿದ್ದ ಉದ್ಭವ್ ಠಾಕ್ರೆ ಏಕಾಂಗಿಯಾಗಿ ಚುನಾವಣೆ ಎದುರಿಸುವ ಕುರಿತು ಸೂಚನೆ ನೀಡಿದ್ದಾರೆ.
(ಲೇಖನದಲ್ಲಿರುವ ವಿಷಯಗಳು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ)
Comments are closed.