ಮುಂಬೈ: 4 ವರ್ಷಗಳ ಕಾಲ ಸೆರೆವಾಸ ಅನುಭವಿಸಿ ಇಂದು ಜೈಲಿನಿಂದ ಬಿಡುಗಡೆಗೊಂಡಿರುವುದು ನನಗೆ ಸಂತೋಷ ತಂದಿದೆ, ನನ್ನ ಪಾಲಿಗೆ ಇಂದು ಸ್ವಾತಂತ್ರ್ಯ ಸಿಕ್ಕ ದಿನವೆಂದು ಬಾಲಿವುಡ್ ನಟ ಸಂಜಯ್ದತ್ ಹೇಳಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂಜಯ್ದತ್, ಇಂತಹ ದಿನಕ್ಕೆ 23 ವರ್ಷಗಳಿಂದ ಕಾಯುತ್ತಿದ್ದೆ, 23 ವರ್ಷಗಳ ಬಳಿಕ ನನಗೆ ಸ್ವಾತಂತ್ರ್ಯ ಸಿಕ್ಕಿದೆ. ನನ್ನ ತಂದೆ ಇದ್ದಿದ್ದರೆ ತುಂಬಾ ಖುಷಿ ಪಡುತ್ತಿದ್ದರು. ಅವರ ನೆನಪು ಹೆಚ್ಚಾಗಿ ಕಾಡುತ್ತಿದೆ ಎಂದರು.
ನಾನು ಭಾರತದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆಯಿದೆ. ಕಳೆದ ರಾತ್ರಿ ನಾನು ಊಟವನ್ನು ಸೇವಿಸಿರಲಿಲ್ಲ. ನಾಲ್ಕು ದಿನಗಳಿಂದ ನಿದ್ದೆಯನ್ನೂ ಮಾಡಿರಲಿಲ್ಲ. ನಾನೊಬ್ಬ ನಟನಾಗಿರುವುದು ನನ್ನ ಬಿಡುಗಡೆಗೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ. ಸೆಲಬ್ರಿಟಿ ಎನ್ನುವ ಕಾರಣಕ್ಕೆ ನನಗೆ ವಿನಾಯಿತಿ ನೀಡಿಲ್ಲ ಎಂದು ತಿಳಿಸಿದರು.
ನಾನು ಜೈಲಿನಲ್ಲಿ ಪೇಪರ್ ಬ್ಯಾಗ್ ತಯಾರಿಸುತ್ತಿದ್ದೆ, ಅದರಿಂದ ಸಂಪಾದಿಸಿರುವ 440 ರೂಪಾಯಿಯನ್ನು ಪತ್ನಿ ಮಾನ್ಯತಾಗೆ ನೀಡುವೆ. ಸದ್ಯಕ್ಕೆ ಕುಟುಂಬದ ಜೊತೆಯಲ್ಲಿ ಹೆಚ್ಚು ಸಮಯ ಕಳೆಯುವೆ. ನಾನು ಉಗ್ರಗಾಮಿ ಅಲ್ಲ. ನನಗೂ ಮುಂಬೈ ಬಾಂಬ್ ಸ್ಫೋಟ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ, ದಯಮಾಡಿ ತಪ್ಪು ಮಾಹಿತಿಯನ್ನು ಕೊಡಬೇಡಿ ಎಂದು ಸುದ್ದಿಗಾರರಲ್ಲಿ ಮನವಿ ಮಾಡಿಕೊಂಡರು.