ಮುಂಬೈ

ಪತಂಜಲಿ ಯೋಗಪೀಠಕ್ಕೆ ಮಹಾ ಸರ್ಕಾರದಿಂದ 653 ಎಕರೆ ಭೂಮಿ

Pinterest LinkedIn Tumblr

BABA RAMDEV

ಮುಂಬೈ: ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಯೋಗ ಪೀಠಕ್ಕೆ ಮಹಾರಾಷ್ಟ್ರ ಸರ್ಕಾರ 653 ಎಕರೆ ಭೂಮಿಯನ್ನು ನೀಡಿದೆ. ಪೂರ್ವ ಮಹಾರಾಷ್ಟ್ರದ ವಿದರ್ಭಾ ಪ್ರದೇಶದಲ್ಲಿ ನಾಲ್ಕು ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವುದಕ್ಕಾಗಿ ಈ ಭೂಮಿಯನ್ನು ನೀಡಲಾಗಿದೆ.

ಬಾಬಾ ಅವರಿಗೆ ಭೂಮಿಯನ್ನು ನೀಡುತ್ತಿರುವ ಬಗ್ಗೆ ಹೇಳಿಕೆ ನೀಡಿದ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ನಾಗ್ಪುರ್ (ಮಿಹಾನ್)ನಲ್ಲಿರುವ ಮಲ್ಟಿ ಮಾಡೆಲ್ ಇಂಟರ್‌ನ್ಯಾಷನಲ್ ಕಾರ್ಗೋ ಹಬ್ ಮತ್ತು ವಿಮಾನ ನಿಲ್ದಾಣ, ಅಮರಾವತಿ ಮತ್ತು ಕಾಟೋಲ್, ಗಡ್‌ಚಿರೋಲಿಯಲ್ಲಿ ಬಾಬಾ ಅವರಿಗೆ ಭೂಮಿ ನೀಡಲಾಗಿದೆ ಎಂದಿದ್ದಾರೆ.

ಮಿಹಾನ್‌ನಲ್ಲಿ ಆಹಾರ ಘಟಕ ಸ್ಥಾಪಿಸುವುದಕ್ಕಾಗಿ ಬಾಬಾ ಅವರಿಗೆ 347 ಎಕರೆ ಭೂಮಿಯನ್ನು ಮಹಾರಾಷ್ಟ್ರ ಸರ್ಕಾರ ನೀಡುತ್ತಿದೆ. ಒಂದು ತಿಂಗಳೊಳಗೆ ಬಾಬಾ ಅವರಿಗೆ ಈ ಭೂಮಿಯನ್ನು ಹಸ್ತಾಂತರಿಸಲಾಗುವುದು. ಅಮರಾವತಿಯಲ್ಲಿ ಫುಡ್ ಪಾರ್ಕ್ ನಿರ್ಮಿಸುವುದಕ್ಕಾಗಿ ಭೂಮಿ ನೀಡಲಾಗಿದೆ ಎಂದು ಗಡ್ಕರಿ ಹೇಳಿದ್ದಾರೆ.

ಕಳೆದ ಶುಕ್ರವಾರ ಮಹಾ ಸರ್ಕಾರ ಪತಂಜಲಿ ಗ್ರೂಪ್ ನೊಂದಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ಈ ಯೋಜನೆಯಲ್ಲಿ ಪತಂಜಲಿ ರು. 2,000 ಕೋಟಿ ಹೂಡಿಕೆ ಮಾಡಲಿದ್ದು, 10,000 ಸ್ಥಳೀಯರಿಗೆ ಉದ್ಯೋಗವಕಾಶಗಳು ಸಿಗಲಿದೆ ಎಂದು ಬಲ್ಲಮೂಲಗಳು ಹೇಳಿವೆ.

Write A Comment