ಮುಂಬೈ: ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ಶನಿಶಿಂಗ್ಣಾಪುರದ ಶನಿ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ಮೇಲಿನ ನಿಷೇಧವನ್ನು ಸಚಿವೆ ಪಂಕಜಾ ಮುಂಡೆ ಸಮರ್ಥಿಸಿಕೊಂಡಿದ್ದಾರೆ.
‘ಇವೆಲ್ಲಾ ಸಾಂಪ್ರದಾಯಿಕ ಆಚರಣೆಗಳು. ಇವನ್ನು ಮಹಿಳೆಯರ ವಿಚಾರಗಳೊಂದಿಗೆ ತಳುಕು ಹಾಕುವುದು ಸರಿಯಲ್ಲ’ ಎಂದು ಮುಂಡೆ ಹೇಳಿದ್ದಾರೆ. ಮುಂಡೆ ಅವರ ಹೇಳಿಕೆಯನ್ನು ಎನ್ಸಿಪಿ ಮಹಾರಾಷ್ಟ್ರ ಘಟಕದ ಅಧ್ಯಕ್ಷೆ ಚಿತ್ರಾ ವಾಘ್ ಖಂಡಿಸಿದ್ದಾರೆ.
‘ಮಹಿಳೆಯರಿಗೆ ದೇಗುಲ ಪ್ರವೇಶ ನಿಷೇಧವನ್ನು ಸಮರ್ಥಿಸಿಕೊಳ್ಳುವ ಮೂಲಕ ಮುಂಡೆ ರಾಜ್ಯವನ್ನು ಶತಮಾನಗಳ ಹಿಂದಕ್ಕೆ ದೂಡುವ ಪ್ರಯತ್ನ ಮಾಡಿದ್ದಾರೆ’ ಎಂದು ಚಿತ್ರಾ ವಾಘ್ ಪ್ರತಿಕ್ರಿಯಿಸಿದ್ದಾರೆ. ನಿಷೇಧ ಮೀರಿ ಮಹಿಳೆಯೊಬ್ಬರು ಇತ್ತೀಚೆಗೆ ಶನಿ ದೇವಾಲಯ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿದ್ದರು. ಈ ಮೂಲಕ ದೇವಸ್ಥಾನದಲ್ಲಿ ಐದು ಶತಮಾನಗಳಿಂದ ಇರುವ ಪರಂಪರೆಯನ್ನು ಈ ಮಹಿಳೆ ಮುರಿದಿದ್ದರು.