ಮುಂಬೈ: ಮುಂಬೈ ದಾಳಿ ನಡೆದು ಗುರುವಾರಕ್ಕೆ (ನ. 26) ಏಳು ವರ್ಷ ತುಂಬಿದೆ. ಉಗ್ರರ ವಿರುದ್ಧದ ಕಾರ್ಯಾ ಚರಣೆಯಲ್ಲಿ ಹುತಾತ್ಮರಾದ ಯೋಧರಿಗೆ ಗುರುವಾರ ಇಲ್ಲಿ ನಡೆದ ಸಮಾರಂಭದಲ್ಲಿ ಪುಷ್ಪನಮನ ಸಲ್ಲಿಸಲಾಯಿತು.
ದಕ್ಷಿಣ ಮುಂಬೈನ ಜಿಮ್ಕಾನ ದಲ್ಲಿರುವ ‘26/11 ಪೊಲೀಸ್ ಸ್ಮಾರಕ‘ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಪುಷ್ಪನಮನ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಮುಂಬೈ ಸುರಕ್ಷತೆಗಾಗಿ ಯೋಧರು ಪ್ರಾಣವನ್ನೇ ಅರ್ಪಿಸಿದರು. ಅವರ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ಹೇಳಿದರು. ಹುತಾತ್ಮ ಯೋಧರ ಕುಟುಂಬ ಸದಸ್ಯರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
2008 ರ ನವೆಂಬರ್ 26 ರಂದು ನಡೆದ ಮುಂಬೈ ದಾಳಿಯಲ್ಲಿ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನ ಮೃತಪಟ್ಟಿದ್ದರು. ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಯೋಧ ಸಂದೀಪ್ ಉನ್ನಿ ಕೃಷ್ಣನ್, ಮುಂಬೈ ಹೆಚ್ಚುವರಿ ಪೊಲೀಸ್ ಆಯುಕ್ತ ಅಶೋಕ್ ಕಾಮ್ಟೆ ಹಾಗೂ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ವಿಜಯ್ ಸಾಲಸ್ಕರ್ ಸೇರಿ ಹಲವರು ಮೃತ ಪಟ್ಟಿದ್ದರು. ದಾಳಿಯಲ್ಲಿ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್ನನ್ನು 2012 ರ ನ. 21 ರಂದು ಗಲ್ಲಿಗೇರಿಸಲಾಗಿತ್ತು.