ಮೂಡುಬಿದಿರೆ (ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆ), ನ.27: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ‘ಆಳ್ವಾಸ್ ನುಡಿಸಿರಿ- 2015’ನ್ನು ಗುರುವಾರ ಸಂಜೆ ಖ್ಯಾತ ಲೇಖಕಿ ಡಾ.ವೀಣಾ ಶಾಂತೇಶ್ವರ ಅವರು ಸಾಂಪ್ರದಾಯಿಕವಾಗಿ ತೆನೆಗೆ ಹೂ ಹಾಗೂ ಹಾಲೆರೆಯುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು,ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿ ಕಾನೂನನ್ನು ಕಠಿಣಗೊಳಿಸಿ ಕ್ಷಿಪ್ರವಾಗಿ ಶಿಕ್ಷೆ ಜಾರಿಯಾಗುವಂತೆ ಮಾಡಬೇಕಾಗಿದೆ ಎಂದು ಆಗ್ರಹಿಸಿದರು. ಅತ್ಯಾಚಾರ, ಅಪರಾಧ ಎಸಗಿದವರು ಪ್ರಭಾವಿ ರಾಜಕಾರಣಿಯಾಗಿರಲಿ, ಅಧಿಕಾರಿಯಾಗಿರಲಿ ಅಥವಾ ಸ್ವಾಮೀಜಿಯೇ ಆಗಿರಲಿ ಅಪರಾಧ ಸಾಬೀತಾದ ತಕ್ಷಣ ಕಠಿಣ ಶಿಕ್ಷೆ ಜಾರಿಯಾಗಬೇಕು ಎಂದು ಡಾ.ವೀಣಾ ಒತ್ತಾಯಿಸಿದರು. ಸಾಹಿತ್ಯದಿಂದ ಸಮಾಜ ಸುಧಾರಣೆ ಸಾಧ್ಯ ಎಂಬ ನಂಬಿಕೆಯೇ ಅರ್ಥ ಕಳೆದುಕೊಳ್ಳುತ್ತಿದೆ. ಆದರೆ ಇದಕ್ಕೆ ಭ್ರಮನಿರಸನ ಪರಿಹಾರವಲ್ಲ ಎಂದು ಅವರು ಹೇಳಿದರು.
ಶಿಕ್ಷಣ ಪದ್ಧತಿಯಲ್ಲಿ ವೌಲ್ಯಗಳ ಅರಿವು ಮೂಡಿಸುವ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಭಾರತೀಯ ಸಂಸ್ಕೃತಿಗೆ ತಕ್ಕ ಹಾಗೆ ಹೆಣ್ಣು ಮಕ್ಕಳನ್ನು ಗೌರವಿಸುವ, ವ್ಯಕ್ತಿ ಸ್ವಾತಂತ್ರವನ್ನು ಮನ್ನಿಸುವ ಮನೋಭಾವವನ್ನು ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಮಕ್ಕಳಲ್ಲಿ ಬೆಳೆಸಬೇಕು. ಪರಂಪರಾಗತ ವೌಲ್ಯಗಳ ಬಗ್ಗೆ ಜಾಗೃತಿ ಮೂಡಿದಾಗ ಅತ್ಯಾಚಾರದಂತಹ ದೌರ್ಜನ್ಯಗಳನ್ನು ಹತ್ತಿಕ್ಕಲು ಸಾಧ್ಯ ಎಂದ ಅವರು, ನಮಗೆ ಏಕರೂಪದ ನಾಗರಿಕ ಸಂಹಿತೆಯೂ ಅವಶ್ಯವಾಗಿ ಬೇಕು ಎಂದು ಅಭಿಪ್ರಾಯಪಟ್ಟರು.
ಇವತ್ತು ವ್ಯಕ್ತಿ ಸ್ವಾತಂತ್ರಕ್ಕೆ ಸಾಂಪ್ರದಾಯಿಕತೆ ಸವಾಲು ಹಾಕುತ್ತಿದೆ. ದೇಶಾದ್ಯಂತ ಅಸಹಿಷ್ಣುತೆ ವ್ಯಾಪಿಸುತ್ತಿದೆ. ಭಾರತ ಸಹಿಷ್ಣುತೆಗೆ ಹಿಂದಿನಿಂದಲೂ ಹೆಸರಾಗಿದೆ. ದೇಶ ಅರ್ಥಿಕವಾಗಿ ಮುನ್ನಡೆ ಸಾಧಿಸಬೇಕಾದರೆ ಸಹಿಷ್ಣುತೆ ಅಗತ್ಯ ಎಂದ ಅವರು, ಅಸಹಿಷ್ಣುತೆ ಕೇವಲ ಭಾರತದ ಸಮಸ್ಯೆಯಲ್ಲ, ಜಾಗತಿಕ ಸಮಸ್ಯೆ. ಅಸಹಿಷ್ಣುತೆ, ಭಯೋತ್ಪಾದನೆಯನ್ನು ದಿಟ್ಟತನದಿಂದ ಎದುರಿಸಿ ಮಾನ ವೀಯ ವೌಲ್ಯಗಳನ್ನು ಪುನರ್ ಸ್ಥಾಪಿಸಲು ಇಡೀ ಜಗತ್ತೇ ಒಂದಾಗುವ ಅಗತ್ಯವಿದೆ. ನುಡಿಸಿರಿಯಂತಹ ಕಾರ್ಯಕ್ರಮಗಳು ನಮ್ಮಲ್ಲಿ ಸೌಹಾರ್ದ ಭಾವವನ್ನು ಹೆಚ್ಚಿಸುವ ದಿಕ್ಕಿನಲ್ಲಿ ಮಹತ್ವದ ಪ್ರಯತ್ನಗಳು ಎಂದು ಅವರು ಹೇಳಿದರು.
‘100 ವರ್ಷಗಳವರೆಗೂ ನುಡಿಸಿರಿ ಮುಂದುವರಿಸುವ ಉತ್ಸಾಹ’
ಪ್ರಾಸ್ತಾವಿಕವಾಗಿ ಮಾತನಾಡಿದ ನುಡಿಸಿರಿಯ ರೂವಾರಿ ಡಾ.ಎಂ.ಮೋಹನ್ ಆಳ್ವ, ಹೊಸತನದ ಹುಡುಕಾಟ ಇಂದಿನ ಅಗತ್ಯ. ಇದೇ ಪರಿಕಲ್ಪನೆಯೊಂದಿಗೆ ಪ್ರತಿವರ್ಷ ಹೊಸತನದೊಂದಿಗೆ ನುಡಿಸಿರಿಯನ್ನು ಆಯೋಜಿಸಲಾಗುತ್ತಿದೆ. ಪ್ರೇಕ್ಷಕರು ಸಾಹಿತ್ಯಾಭಿಮಾನಿಗಳಿಗೆ ಇಷ್ಟವಾಗುವ ಕಾರಣಕ್ಕಾಗಿ ಪ್ರತಿವರ್ಷ ಬದಲಾವಣೆಯೊಂದಿಗೆ ನುಡಿಸಿರಿ ನಡೆಯುತ್ತಿದ್ದು, ಇದಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಇದರಿಂದಾಗಿ 100 ವರ್ಷಗಳ ಕಾಲ ನುಡಿಸಿರಿಯನ್ನು ಮುಂದುವರಿಸುವ ಉತ್ಸಾಹ ಬಂದಿದೆ ಎಂದು ನುಡಿದರು.
ವೇದಿಕೆಯಲ್ಲಿ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಮಾಜಿ ಸಚಿವ ಅಮರನಾಥ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ನುಡಿಸಿರಿ ಹಿಂದಿನ ಸಭಾಧ್ಯಕ್ಷ ಡಾ.ವಿವೇಕ ರೈ, ಡಾ.ಹಂಪನಾ, ಡಾ.ಕಮಲಾ ಹಂಪನಾ, ಮಿಜಾರುಗುತ್ತು ಆನಂದ ಆಳ್ವ, ವಿವೇಕ ಆಳ್ವ, ಧರ್ಮಸ್ಥಳ ಕ್ಷೇತ್ರದ ಹರ್ಷೇಂದ್ರಕುಮಾರ್, ಮೂಡುಬಿದಿರೆ ಪುರಸಭಾಧ್ಯಕ್ಷೆ ರೂಪಾ ಎಸ್. ಶೆಟ್ಟಿ, ಶ್ರೀಪತಿ ಭಟ್, ಎಸ್.ಪ್ರಭಾಕರ್ ಮಾದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ‘ವಾಙ್ಮಯ’ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ಹೊಸತನ, ವಿಶೇಷತೆಗಳಿಗೆ ಸಾಕ್ಷಿಯಾದ ಉದ್ಘಾಟನಾ ಸಮಾರಂಭ
ನುಡಿಸಿರಿಯ 12 ವಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಪ್ರತ್ಯೇಕ ಹಾಗೂ ವಿಶಾಲವಾದ ತೆರೆದ ವೇದಿಕೆಯಲ್ಲಿ ಹಲವು ವಿಶೇಷತೆ, ಹೊಸತನಗಳೊಂದಿಗೆ ಉದ್ಘಾಟನಾ ಸಮಾರಂಭ ನಡೆಯಿತು.
140 ಅಡಿ ಅಗಲದ ವಿಶಾಲವಾದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಅತಿಥಿಗಳು, ಗಣ್ಯರು ವಿವಿಧ ಘಟಕಗಳ ಪದಾಧಿಕಾರಿಗಳು ಸೇರಿದಂತೆ 500 ಮಂದಿ ಆಸೀನರಾಗುವ ವ್ಯವಸ್ಥೆ ಕಲ್ಪಿಸಲಾಗಿದ್ದು, 300ಕ್ಕೂ ಅಧಿಕ ಮಂದಿ ಉಪಸ್ಥಿತರಿದ್ದರು. ವೇದಿಕೆ ಎದುರಿನ ವಿಶಾಲವಾದ ಸಭಾಂಗಣದಲ್ಲಿ 30,000 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, 15,000ಕ್ಕೂ ಅಧಿಕ ಮಂದಿ ಆಸೀನರಾಗಿದ್ದರು.
ಮುಸ್ಸಂಜೆಯಲ್ಲಿ ಹಾರಾಡಿದ ಪತಾಕೆಗಳು
ಉದ್ಘಾಟನಾ ಸಮಾರಂಭದ ಆರಂಭದಲ್ಲಿ ಖ್ಯಾತ ಗಾಯಕ ರಮೇಶ್ಚಂದ್ರ ಬಳಗವು ನಾಡಗೀತೆ, ರೈತ ಗೀತೆ ಹಾಗೂ ಭಾವೈಕ್ಯ ಗೀತೆಗಳನ್ನು ಹಾಡಿ ಸಂಚಲನ ಮೂಡಿಸಿದರು. ಈ ವೇಳೆ ವೇದಿಕೆ ಹಾಗೂ ಸಭಾಂಗಣದಲ್ಲಿ ಆಸೀನರಾಗಿದ್ದ ಎಲ್ಲರೂ ಮೊದಲೇ ನೀಡಲಾಗಿದ್ದ ಕನ್ನಡ, ರಾಷ್ಟ್ರ ಹಾಗೂ ಹಸಿರು ಪತಾಕೆಗಳನ್ನು ಎತ್ತಿ ಹಿಡಿದು ಬೀಸಿ ಸಂಭ್ರಮಿಸಿದರು. ನಾಡಗೀತೆಯ ವೇಳೆ ಕನ್ನಡ ಪತಾಕೆ ಹಾರಾಡಿದರೆ, ರೈತಗೀತೆಯ ಸಂದರ್ಭ ಹಸಿರು ಪತಾಕೆಗಳು ರಾರಾಜಿಸಿದವು, ಭಾವೈಕ್ಯದ ‘ನಾವೆಲ್ಲರೂ ಭಾರತೀಯರು..’ ಎಂಬ ಹಾಡಿಗೆ ರಾಷ್ಟ್ರ ಪತಾಕೆ ಮೇಳೈಸಿತು.
ಗಮನಸೆಳೆದ ಡ್ರೋನ್ ಚಿತ್ರೀಕರಣ: ಮೆರವಣಿಗೆ ಸೇರಿದಂತೆ ಸಂಪೂರ್ಣ ಉದ್ಘಾಟನಾ ಸಮಾರಂಭವನ್ನು ಆಗಸದಲ್ಲಿ ಹಾರಾಡುತ್ತಿದ್ದ ಕ್ಯಾಮರಾ ಹೊತ್ತ ಎರಡು ಡ್ರೋನ್(ರಿಮೋಟ್ ಕಂಟ್ರೋಲರ್ಯುಕ್ತ ಮಿನಿ ಹೆಲಿಕ್ಯಾಪ್ಟರ್ ಮಾದರಿ)ಗಳು ಸೆರೆಹಿಡಿದವು.
ವರದಿ ಕೃಪೆ : ವಾಭಾ