ಮುಂಬೈ,ಸೆ.2: ಎರಡು ವರ್ಷಗಳ ಹಿಂದೆ ನಡೆದಿದ್ದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ತನಿಖೆಯಲ್ಲಿ ವಿಳಂಬದ ಬಗ್ಗೆ ಬಾಂಬೆ ಉಚ್ಚ ನ್ಯಾಯಾಲಯವು ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಇದೊಂದು ಗಂಭೀರ ವಿಷಯವಾಗಿದ್ದು,ತನಿಖೆಯ ಮೇಲೆ ನಿಕಟ ನಿಗಾಯಿರಿಸುವ ಅಗತ್ಯವಿದೆ ಎಂದು ಅದು ಹೇಳಿತು.
ಈವರೆಗಿನ ತನ್ನ ತನಿಖೆಯ ಕುರಿತು ಸ್ಥಿತಿಗತಿ ವರದಿಯನ್ನು ಒಂದು ವಾರದೊಳಗೆ ಸಲ್ಲಿಸುವಂತೆ ನ್ಯಾಯ ಮೂರ್ತಿಗಳಾದ ಆರ್.ವಿ. ಮೋರೆ ಮತ್ತು ಆರ್.ಜಿ.ಕೇತ್ಕರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಸಿಬಿಐಗೆ ಆದೇಶಿಸಿತು.
2013,ಆಗಸ್ಟ್ನಲ್ಲಿ ಪುಣೆಯಲ್ಲಿ ಇಬ್ಬರು ಬೈಕ್ ಸವಾರರು ದಾಭೋಲ್ಕರ್ ಅವರನ್ನು ಗುಂಡಿಟ್ಟು ಹತ್ಯೆಗೈದಿದ್ದರು. ರಾಜ್ಯ ಪೊಲೀಸರು ಕಾಟಾಚಾರಕ್ಕೆ ತನಿಖೆ ನಡೆಸುತ್ತಿದ್ದಾರೆೆ ಎಂದು ದಾಭೋಲ್ಕರ್ ಕುಟುಂಬವು ಉಚ್ಚ ನ್ಯಾಯಾಲಯಕ್ಕೆ ದೂರಿಕೊಂಡ ಬಳಿಕ ಕಳೆದ ವರ್ಷ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು.