ಮುಂಬಯಿ: ಕಳೆದ ರಾತ್ರಿಯಿಂದ ವಾಣಿಜ್ಯ ನಗರಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಭಾರಿ ಮಳೆಯಿಂದಾಗಿ ಬಾಂದ್ರಾದಲ್ಲಿ ಗೋಡೆ ಕುಸಿದಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಕೇಂದ್ರ ರೈಲ್ವೆ ವಲಯದ ಹಳಿಗಳ ಮೇಲೆ 10 ಇಂಚು ನೀರು ನಿಂತಿದ್ದು, ಬೆಳಗ್ಗೆ ರೈಲು ಸಂಚಾರ ಸ್ಥಗಿತಗೊಂಡಿದೆ.
ಮಹಾರಾಷ್ಟ್ರ ಸುತ್ತಮುತ್ತ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಮಂಗಳವಾರ ಮುಂದುವರಿದಿದೆ. ಪರಿಣಾಮ ರೈಲ್ವೆ ಸಂಚಾರಕ್ಕೆ ಅಡ್ಡಿಯಾಗಿದ್ದು, ಅನೇಕ ರೈಲುಗಳ ಓಡಾಟ ತಡವಾಗಿದೆ. ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿರುವುದರಿಂದಾಗಿ ವಾಹನ ಸಂಚಾರಕ್ಕೂ ಅಡಚಣೆಯಾಗಿದೆ.
ಅಂಧೇರಿ, ಪರೆಲ್, ಬಾಂದ್ರಾ ಸೇರಿದಂತೆ ಸೆಂಟ್ರಲ್ ರೈಲ್ವೆ ನಿಲ್ದಾಣ ಸುತ್ತಮುತ್ತ ಹೆಚ್ಚಿನ ಭಾಗಗಳಲ್ಲಿ ಮಳೆ ನೀರು ಕಟ್ಟಿ ನಿಂತಿದ್ದರಿಂದಾಗಿ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಸ್ಥಳೀಯ ರೈಲ್ವೆ ಸಂಚಾರವನ್ನು ಬೆಳಗ್ಗೆಯಿಂದಲೇ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 20-21 (ಬೆಳಗ್ಗೆ 8.30ರಿಂದ ಮರುದಿನ ಬೆಳಗ್ಗೆ 8.30) 24 ತಾಸಿನಲ್ಲಿ ಕೊಲಬಾದಲ್ಲಿ 15.8 ಮಿ.ಮೀಟರ್, ಸ್ಯಾಂತಕ್ರೂಸ್ನಲ್ಲಿ 61 ಮಿ.ಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸಮುದ್ರದಲ್ಲಿ ಭಾರಿ ಅಲೆಗಳು ಎಳುತ್ತಿದ್ದು, ತೀರ ಪ್ರದೇಶ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ವಿಪತ್ತು ನಿರ್ವಹಣಾ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಭಾರಿ ಮಳೆಯ ಕಾರಣ ವೆಸ್ಟರ್ನ್ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನಗಳು ನಿಧಾನವಾಗಿ ಸಾಗಿವೆ.
ಹೆಚ್ಚು ಕಾಲಾವಕಾಶ:
ಭಾರಿ ಮಳೆ ಹಿನ್ನೆಲೆಯಲ್ಲಿ ತಡವಾಗಿ ಪರೀಕ್ಷಾ ಕೇಂದ್ರ ತಲುಪಿರುವ ಎಸ್ಎಸ್ಎಸ್ ಪೂರಕ ಪರೀಕ್ಷೆ ಅಭ್ಯರ್ಥಿಗಳಿಗೆ ಹೆಚ್ಚುವರಿ ಸಮಯಾವಕಾಶ ನೀಡುವುದಾಗಿ ಎಸ್ಎಸ್ಎಸ್ ಮಂಡಳಿ ಘೋಷಿಸಿದೆ.