ಮುಂಬೈ: ಆಯಿಲ್ ಟ್ಯಾಂಕರ್ ಮತ್ತು ಗೂಡ್ಸ್ ರೈಲಿನ ನಡುವೆ ಡಿಕ್ಕಿ ಸಂಭವಿಸಿದ ವೇಳೆ ಟ್ಯಾಂಕರ್ ನಲ್ಲಿದ್ದ ಆಯಿಲ್ ಸೋರಿಕೆಯಾಗಿದ್ದು, ಅಗ್ನಿಶಾಮಕ ದಳದವರ ಎಚ್ಚರಿಕೆಯನ್ನೂ ಲೆಕ್ಕಿಸದೆ ಜನ ಅದನ್ನು ತುಂಬಿಸಿಕೊಳ್ಳಲು ಪೈಪೋಟಿ ನಡೆಸಿದ ಕಾರಣ ಟ್ರಾಫಿಕ್ ಜಾಮ್ ಉಂಟಾದ ಘಟನೆ ನಡೆದಿದೆ.
ಮುಂಬೈನ ಸೆವ್ರಿ ಎಂಬ ಬಳಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಆಯಿಲ್ ಟ್ಯಾಂಕರ್ ರೈಲು ಹಳಿ ಮೇಲೆ ಬರುತ್ತಿದ್ದ ವೇಳೆ ಅದಕ್ಕೆ ಗೂಡ್ಸ್ ರೈಲು ಡಿಕ್ಕಿ ಹೊಡೆದಿದೆ. ಇದರಿಂದಾಗಿ ಟ್ಯಾಂಕರ್ ನಲ್ಲಿದ್ದ ಆಯಿಲ್ ನಲ್ಲಿಯಲ್ಲಿ ಬಂದಂತೆ ಹೊರ ಬರಲಾರಂಭಿಸಿದೆ. ಪುಗಸಟ್ಟೆ ಆಯಿಲ್ ಸಿಗುತ್ತದೆ ಎಂಬ ಕಾರಣಕ್ಕೆ ಜನ ತಮಗೆ ಅದು ಉಪಯೋಗಕ್ಕೆ ಬರುತ್ತದೋ ಇಲ್ಲವೋ ಎಂಬುದನ್ನು ಯೋಚಿಸದೆ ಕೈಗೆ ಸಿಕ್ಕ ವಸ್ತುಗಳಲ್ಲೆಲ್ಲಾ ಆಯಿಲ್ ತುಂಬಿಸಿಕೊಂಡಿದ್ದಾರೆ.
ಈ ವೇಳೆ ಸ್ಥಳಕ್ಕಾಗಮಿಸಿದ್ದ ಆಗ್ನಿಶಾಮಕ ಸಿಬ್ಬಂದಿ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಕುರಿತು ಎಚ್ಚರಿಸಿದರೂ ಅದನ್ನು ಲೆಕ್ಕಿಸಿಲ್ಲ. ಇದರಿಂದಾಗಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ಬಳಿಕ ಪೊಲೀಸರು ಆಗಮಿಸಿ ಜನರನ್ನು ಚದುರಿಸಿದ್ದಾರೆ. ಟ್ಯಾಂಕರ್ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ದಾರಿಯನ್ನು ಸುಗಮಗೊಳಿಸಿಕೊಟ್ಟಿದ್ದಾರೆ.