ಮುಂಬೈ, ಜೂ.24: ಐಪಿಎಲ್ ಕಳ್ಳಾಟದ ಲಲಿತ್ ಮೋದಿ ವೀಸಾ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿಯಲ್ಲೇ ಆಂತರಿಕವಾಗಿ ಅಸಮಾಧಾನಗಳು ಆಸ್ಫೋಟಗೊಂಡಿರುವ ಬೆನ್ನಲ್ಲೇ, ಎನ್ಡಿಎ ಕೂಟದ ಪ್ರಮುಖ ಪಕ್ಷ ಶಿವಸೇನೆ ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಪರ ಬ್ಯಾಟಿಂಗ್ ಮಾಡುವ ಮೂಲಕ ಸರ್ಕಾರಕ್ಕೆ ಮತ್ತಷ್ಟು ಮುಜುಗರ ಉಂಟು ಮಾಡಿದೆ.
ರಾಕೇಶ್ ಮಾರಿಯಾ ವಿಷಯದಲ್ಲಿ ಸಣ್ಣ ಮಣ್ಣಿನ ದಿಬ್ಬವನ್ನು ದೊಡ್ಡ ಪರ್ವತವನ್ನಾಗಿ ಬಿಂಬಿಸುವ ಕೆಲಸ ಮಾಡಲಾಗುತ್ತಿದೆ. ಒಬ್ಬ ಪೊಲೀಸ್ ಕಮೀಷನರ್ ಈ ಕುರಿತಂತೆ ಏನು ಮಾಡಲು ಸಾಧ್ಯವಿದೆ. ಕ್ರಿಕೆಟ್ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ದಂಧೆಯ ರಾಜನಾಗಿರುವ ಮೋದಿಗೆ ಘಟಾನುಘಟಿ ರಾಜಕೀಯ ನಾಯಕರ ಬೆಂಬಲವಿರುವಾಗ ಅವನನ್ನು ಲಂಡನ್ನಿಂದ ಬಂಧಿಸಿ ಕರೆತರಲು ದೊಡ್ಡವರ ಅನುಮತಿಯಿಲ್ಲದೆ ಸಾಧ್ಯವೇ ಎಂದು ಪ್ರಶ್ನಿಸಿರುವ ಶಿವಸೇನೆ, ಲಲಿತ್ಮೋದಿಗೆ ಸಹಕಾರ ನೀಡಿರುವ ನಾಯಕರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಅಭಿಪ್ರಾಯಪಟ್ಟಿದೆ.
ಅದೇರೀತಿ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಅವರು ಮಾರಿಯಾ ಕುರಿತಾಗಿ ನೀಡಿರುವ ಹೇಳಿಕೆಗೂ ಯಾವುದೇ ಅರ್ಥವಿಲ್ಲ. ಮಾರಿಯಾ, ಲಲಿತ್ ಮೋದಿ ಭೇಟಿ ಬಗ್ಗೆ ನನಗೆ ತಿಳಿದೇ ಇಲ್ಲ ಎಂಬ ಅವರ ಹೇಳಿಕೆ ಅರ್ಥ ಹೀನ. ಒಂದು ಪೃಥ್ವಿರಾಜ್ ಚವ್ಹಾಣ್ ಮಾತು ಸತ್ಯ ಎನ್ನುವುದಾದರೆ ಆ ಸಂದರ್ಭ ಇನ್ನೂ ಅನೇಕ ತೆರೆಮರೆಯ ಕೃತ್ಯಗಳು ನಡೆದಿರಬಹುದಲ್ಲವೇ ಎಂದು ಸೇನೆ ಪ್ರಶ್ನಿಸಿದೆ.