ಮುಂಬೈ: ತಡವಾಗಿ ವಿಮಾನ ನಿಲ್ದಾಣಕ್ಕೆ ಬಂದು ಇತರೆ ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟು ಮಾಡುವ ವಿವಿಐಪಿ ಗಳ ವರ್ತನೆಗೆ ಸರಿಯಾಗಿ ಬುದ್ದಿ ಕಲಿಸಲಾಗಿದೆ. ನಿಗದಿತ ಸಮಯ ಮೀರಿ ನಿಲ್ದಾಣಕ್ಕೆ ಬಂದ ಸಂಸದರನ್ನು ವಿಮಾನಕ್ಕೆ ಹತ್ತಿಸಿಕೊಳ್ಳದೇ ವಾಪಾಸ್ ಕಳುಹಿಸಲಾಗಿದೆ.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ನಾಯಕ ಹಾಗೂ ಸಂಸದ ರಾಮದಾಸ್ ಅತವಾಳೆ ಮುಂಬೈನಿಂದ ಅಹ್ಮದಾಬಾದಿಗೆ ತೆರಳಲು ಜೆಟ್ ಏರ್ವೇಸ್ ನ 9W 313 ವಿಮಾನದಲ್ಲಿ ತಮ್ಮ ಸೀಟನ್ನು ಕಾಯ್ದಿರಿಸಿದ್ದರು. ಈ ವಿಮಾನ 5-15 ಕ್ಕೆ ತೆರಳಬೇಕಿತ್ತಾದರೂ 4-30 ರೊಳಗಾಗಿ ಬೋರ್ಡಿಂಗ್ ಪಾಸ್ ಪಡೆಯಲು ಸೂಚಿಸಲಾಗಿತ್ತು. ರಾಮದಾಸ್ ಅತಾವಳೆ ಅವರು 4-55 ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ವಿಮಾನ 5-15 ಕ್ಕೆ ಹಾರಾಟ ಆರಂಭಿಸಬೇಕಿತ್ತಾದರೂ ಬೋರ್ಡಿಂಗ್ ಪಾಸ್ ನೀಡುವ ಗೇಟನ್ನು ವಿಮಾನ ಹಾರಾಟ ಆರಂಭಿಸುವ 25 ನಿಮಿಷ ಮುನ್ನ ಅಂದರೆ 4-50 ಕ್ಕೆ ಬಂದ್ ಮಾಡಲಾಗಿತ್ತು. ಸಂಸದರು ತಡವಾಗಿ ಬಂದ ಕಾರಣ ಅವರನ್ನು ಮುಲಾಜಿಲ್ಲದೇ ವಾಪಾಸ್ ಕಳುಹಿಸಲಾಗಿದೆ. ಜೆಟ್ ಏರ್ವೇಸ್ ಸಿಬ್ಬಂದಿಯ ನಿಷ್ಟುರ ವರ್ತನೆಯ ವಿರುದ್ದ ರಿಪಬ್ಲಿಕನ್ ಪಾರ್ಟಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ರಾಮದಾಸ್ ಅತಾವಳೆಯವರು ತಮ್ಮ ಪ್ರಯಾಣವನ್ನೇ ರದ್ದುಪಡಿಸಿ ವಾಪಾಸ್ ತೆರಳಿದ್ದಾರೆ.