ಮುಂಬಯಿ: ನೀರಿನ ಪೂರೈಕೆಗಿಂತ ಬೇಡಿಕೆ ಹೆಚ್ಚುತ್ತಿರುವ ಕಾರಣ 2025ರ ವೇಳೆಗೆ ದೇಶದಲ್ಲಿ ಜಲಕ್ಷಾಮ ಎದುರಾಗುವ ಭೀತಿ ಇದೆ ಎಂದು ಹೊಸ ಅಧ್ಯಯನದ ವರದಿ ತಿಳಿಸಿದೆ.
ಮುಂಬರುವ ವರ್ಷಗಳಲ್ಲಿ ವಿದೇಶಿ ಹೂಡಿಕೆದಾರರು ದೇಶದ ನೀರು ಪೂರೈಕೆ ಉದ್ಯಮದಲ್ಲಿ 13 ಶತಕೋಟಿ ಡಾಲರ್ ಹಣ ತೊಡಗಿಸುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
‘ನೀರಾವರಿಯ ಶೇ.70 ಹಾಗೂ ಗೃಹ ಬಳಕೆಯ ಶೇ.80 ರಷ್ಟು ನೀರು ಅಂತರ್ಜಲದಿಂದ ಲಭ್ಯವಾಗಿತ್ತಿದ್ದು, ಕ್ಷಿಪ್ರಗತಿಯಲ್ಲಿ ಅಂತರ್ಜಲ ಬರಿದಾಗುತ್ತಿದೆ. ನೀರಿನ ಬೇಡಿಕೆ ಮಿತಿ ಮೀರಿದ್ದು, 2025ರ ವೇಳೆಗೆ ಬರ ಉಂಟಾಗಲಿದೆ. ಕೌಟುಂಬಿಕ ಆದಾಯದ ಹೆಚ್ಚಳದೊಂದಿಗೆ, ಸೇವಾ ಹಾಗೂ ಉದ್ಯಮ ವಲಯದ ಕೊಡಯಗೆಯೂ ಹೆಚ್ಚುವ ಕಾರಣ ಗೃಹ ಬಳಕೆಯ ಹಾಗೂ ಉದ್ದಿಮೆ ವಲಯಗಳಿಂದ ನೀರಿನ ಬೇಡಿಕೆ ವೃದ್ಧಿಸಲಿದೆ,’ ಎಂದು ವರದಿ ವಿವರಿಸಿದೆ.
‘ದೇಶದ ನೀರು ಪೂರೈಕೆ ವಲಯದಲ್ಲಿ 13 ಶತಕೋಟಿ ಡಾಲರ್ ಹಣ ಹೂಡಲು ಕೆನಡಾ, ಇಸ್ರೇಲ್, ಜರ್ಮನಿ, ಇಟಲಿ, ಅಮೆರಿಕ, ಚೀನಾ ಹಾಗೂ ಬೆಲ್ಜಿಯಂ ಸಜ್ಜಾಗಿವೆ. ಮುಂದಿನ ವರ್ಷಗಳಲ್ಲಿ ನೀರು ಪೂರೈಕೆ ಉದ್ಯಮಕ್ಕೆ 18,000 ಕೋಟಿ ರೂ. ಹರಿದು ಬರುವ ನಿರೀಕ್ಷೆ ಇದೆ,’ ಎಂದು ವರದಿ ತಿಳಿಸಿದೆ.