ಮುಂಬೈ: ವಿಮಾನ ಪ್ರಯಾಣಿಕನೊಬ್ಬ ವಿಮಾನ ಲ್ಯಾಂಡ್ ಆದ ವೇಳೆ ತುರ್ತು ನಿರ್ಗಮನ ದ್ವಾರವನ್ನು ತೆರೆದು ರೆಕ್ಕೆ ಮೇಲೆ ಹಾರಿ ಆತಂಕ ಸೃಷ್ಟಿಸಿದ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಜಲಂಧರ್ ಮೂಲದ 27 ವರ್ಷದ ಆಕಾಶ್ ಜೈನ್ ಎಂಬ ಯುವಕ ಜೆಟ್ ಏರ್ವೇಸ್ ನ ಚಂಡೀಘರ್- ಮುಂಬೈ ವಿಮಾನದಲ್ಲಿ ಮುಂಬೈಗೆ ಭಾನುವಾರ ಬಂದಿದ್ದು, ನಿಲ್ದಾಣದಲ್ಲಿ ಇಳಿದ ಬಳಿಕ ಈತ ಏಕಾಏಕಿ ತುರ್ತು ನಿರ್ಗಮನ ದ್ವಾರವನ್ನು ತೆರೆದಿದ್ದಾನೆ. ಬಳಿಕ ಅದರಿಂದ ವಿಮಾನ ದ ರೆಕ್ಕೆ ಮೇಲೆ ಹಾರಿ ಕೆಳಗಿಳಿದು ಆರಾಮಾಗಿ ತನ್ನ ಪಾಡಿಗೆ ನಡೆದುಕೊಂಡು ಹೊರಟಿದ್ದಾನೆ.
ಈ ಅನಿರೀಕ್ಷಿತ ಘಟನೆಯಿಂದ ಒಂದು ಕ್ಷಣ ತಬ್ಬಿಬ್ಬಾದ ವಿಮಾನ ಸಿಬ್ಬಂದಿ, ನಿಲ್ದಾಣದ ಸುರಕ್ಷಾ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದು, ಅವರುಗಳು ಆಕಾಶ್ ಜೈನ್ ರನ್ನು ತನ್ನ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಈತ ಗೋವಾಕ್ಕೆ ತೆರಳುವ ಪ್ಲಾನ್ ಮಾಡಿಕೊಂಡು ಮನೆಯಿಂದ 30 ಸಾವಿರ ಕದ್ದು ಮುಂಬೈಗೆ ಬಂದಿದ್ದನೆಂದು ಹೇಳಲಾಗಿದೆ. ಈತ ನಾಪತ್ತೆಯಾಗಿರುವ ಕುರಿತು ಆತನ ಪೋಷಕರು ಜಲಂಧರ್ ಪೊಲೀಸರಿಗೆ ದೂರು ಸಲ್ಲಿಸಿದ್ದರೆಂದು ತಿಳಿದುಬಂದಿದೆ.