ಮುಂಬಯಿ, ಫೆ.08: ನಗರದ ಅಂಧೇರಿ ಪರಿಸರದಲ್ಲಿನ ಬಂಟರ ಸಾಂಸ್ಕೃತಿಕ ಚಟುವಟಿಕೆ ಕೇಂದ್ರ ಎಂದೇ ಪ್ರಸಿದ್ಧಿ ಪಡೆದ ಜವಾಬ್ (ಜುಹೂ ಅಂಧೇರಿ ವರ್ಸೋವಾ ವಿಲೇಪಾರ್ಲೆ ಎಸೋಸಿಯೇಶನ್ ಆಫ್ ಬಂಟ್ಸ್) ತನ್ನ 18ನೇ ವಾರ್ಷಿಕ ಸ್ನೇಹಮಿಲನವನ್ನು ಕಳೆದ ಶನಿವಾರ ಸಂಜೆ ಅಂಧೇರಿ ಪಶ್ಚಿಮದ ಲೋಕಂಡ್ವಾಲ ಕಾಂಪ್ಲೆಕ್ಸ್ನ ರೆಸಿಡೆನ್ಸಿ ಅಸೋಸಿಯೇಶನ್ ಮೈದಾನದಲ್ಲಿನ ರೂಪಿಸಿದ ದಿ ಕೋಡು ವಸಂತ ಶೆಟ್ಟಿ ವೇದಿಕೆಯಲ್ಲಿ ಅದ್ದೂರಿಯಿಂದ ಸಂಭ್ರಮಿಸಿತು.
ಸಾಂಸ್ಕೃತಿ ಸಾರುವ ಜಾತ್ರೆಯಾಗಿಯೇ ಪರಿಣಮಿಸಿದ ಈ ಸಡಗರ ಸಂಭ್ರಮಕ್ಕೆ ನೆರೆದ ಆಹ್ವಾನಿತರನ್ನು ಕೊಂಬು ಕಹಳೆ, ವಾದ್ಯಮಂಗಳ ನಿನಾದದೊಂದಿಗೆ ಪದಾಧಿಕಾರಿಗಳು ಬರಮಾಡಿಕೊಂಡರು. ಅಂತೆಯೇ ಬಂಟ ಸಂಸ್ಕೃತಿ ಸಾರುವ ಭವ್ಯ ಮೆರವಣಿಗೆಯಲ್ಲಿ ತುಳುನಾಡಿನ ಸತ್ಯದೈವ ಜುಮಾದಿಯ ‘ಭಂಡಾರ’ವನ್ನು ವೇದಿಕೆಗೆ ಬರಮಾಡಿ ಕೊಂಡು ಧಾರ್ಮಿಕ ವಿಧಿಯನುಸಾರ ಜವಾಬ್ ಅಧ್ಯಕ್ಷ ನಾಗೇಶ್ ಎನ್.ಶೆಟ್ಟಿ ಅವರು ಪದಾಧಿಕಾರಿಗಳನ್ನೋಳಗೊಂಡು ವಿಘ್ನವಿನಾಯಕ ದೇವರಿಗೆ ಸ್ತುತಿಸಿ ದೀಪ ಬೆಳಗಿಸಿ ಸಾಂಸ್ಕೃತಿಕ ವೈಭವಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಜೊತೆ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ ಕಾರ್ನಾಡ್, ಜೊತೆ ಕೋಶಾಧಿಕಾರಿ ಸತೀಶ್ ಭಂಡಾರಿ, ನಿಕಟಪೂರ್ವ ಅಧ್ಯಕ್ಷ ಪ್ಯಾಪಿಲಾನ್ ರಘು ಎಲ್.ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಆಸೀನರಾಗಿದ್ದರು.
ಕೂಡುಕಟ್ಟು ಇದ್ದಲ್ಲಿ ಮಾತ್ರ ಕೌಟುಂಬಿಕ ಜೀವನವು ಬಲಭರಿತ ಆಗುತ್ತದೆ. ಜವಾಬ್ ಒಂದು ಕುಬೇರನ ಗೂಡು ಇದ್ದಂತೆ. ನಮ್ಮಲ್ಲಿ ಅನೇಕರು ಧನವಂತರು ಇದ್ದರೂ ಕೆಲವರಂತೂ ಧನಹೀನರೂ ಇದ್ದಾರೆ. ಇವರನ್ನೂ ಸಮಾನರನ್ನಾಗಿಸುವಲ್ಲಿ ಸುಶಿಕ್ಷಿತರನ್ನಾಗಿಸುವಲ್ಲಿ ಶ್ರಮಿಸೋಣ. ಬಂಟರು ಮೂಢನಂಬಿಕೆಯಿಂದ ಮುಕ್ತರಾಗಬೇಕು. ಕಪಟ ಸನ್ಯಾಸಿಗಳ ಕಾಲು ತೊಳೆದು ನೀರು ಕುಡಿಯುವುದಕ್ಕಿಂತ ದೀನದಲಿತರ ಕಣ್ಣೀರು ಒರೆಸಿ ಪುಣ್ಯಕಟ್ಟಿ ಕೊಳ್ಳಿರಿ ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಅಧ್ಯಕ್ಷ ನಾಗೇಶ್ ಶೆಟ್ಟಿ ಕರೆಯಿತ್ತರು.
ಅಧ್ಯಕ್ಷರು ಉಪಸ್ಥಿತ ಇತರ ಸಂಘ-ಸಂಸ್ಥೆಗಳ ಮುಖ್ಯಸ್ಥರನ್ನು ಮತ್ತು ಗಣ್ಯ ಮಹಾನೀಯರನ್ನು ಪುಷ್ಪಗುಚ್ಚವನ್ನೀ ಡಿ ಸತ್ಕರಿಸಿದರು. ಹಾಗೂ 42ರ ದಾಂಪತ್ಯಬಾಳು ಪೂರೈಸಿದ ಜವಾಬ್ ಉಪಾಧ್ಯಕ್ಷ ಬಿ.ಶಿವರಾಮ ನಾಕ್ ಮತ್ತು ಪ್ರತಿಮಾ ಶಿವರಾಮ ಹಾಗೂ ವಿಶ್ವಸ್ಥ ಸದಸ್ಯರಾಗಿ ನೇಮಿತ ಪಾಂಡು ಎಸ್.ಶೆಟ್ಟಿ ಮತ್ತು ವನಿತಾ ಪಿ.ಶೆಟ್ಟಿ ದಂಪತಿಯನ್ನು ಅಭಿನಂದಿಸಿ ಗೌರವಿಸಿದರು.
ಕೋಕಿಲಾಬೆನ್ ಧೀರೂಭಾಯಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಡಾ ಸಂತೋಷ್ ಶೆಟ್ಟಿ ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದು ಅವರನ್ನು ಜವಾಬ್ ಪರವಾಗಿ ಸನ್ಮಾನಿಸಲಾಯಿತು. ಡಾ ಸಂತೋಷ್ ಮಾತನಾಡಿ ಮನುಷ್ಯನಾದವನಿಗೆ ಯಾರಿಗೂ ರೋಗ ಎನ್ನುವುದು ಬರಬಾರದು. ಆದರೂ ಅನಾರೋಗ್ಯ ಹೇಳಿಕೊಂಡು ಬರುವುದಿಲ್ಲ. ಬಂದಲ್ಲಿ ನನ್ನನ್ನು ಸಂಪರ್ಕಿಸಿದರೆ ಹಗಲಿರುಳು ಮರೆತು ತಮ್ಮ ಸೇವೆಗೆ 247 ಅವಧಿಯಲ್ಲೂ ಸೇವೆ ನೀಡಲು ಬದ್ಧನಾಗಿರುವೆ ಎಂದರು.
ರಘು ಶೆಟ್ಟಿ ಮಾತನಾಡಿ 18ರ ಯೌವ್ವನದ ಹರೆಯಲ್ಲಿನ ಜವಾಬ್ ಸಮಾಜದ ಹಿತದೃಷ್ಠಿಯಿಂದ ನಿರಂತರ ಸೇವೆಗೈದ ಹಿರಿಮೆಯ ಸಂಸ್ಥೆಯಾಗದೆ. ಇದು ಒಂದು ಸಂಸ್ಥೆಕ್ಕಿಂತಲೂ ಒಂದು ಬಾಂಧವ್ಯ ಬೆಸೆಯುವ ಕುಟುಂಬವಾಗಿ ಬೆಳೆದು ನಿಂತಿದೆ. ಜವಾಬ್ ಸ್ವ್ವಂತದ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ವಿಜಯದ ಹೆಜ್ಜೆಯಾಗಿದೆ ಎಂದು ಜವಾಬ್ ಅಭಿವೃದ್ಧಿ ಬಗ್ಗೆ ಸ್ಥೂಲವಾಗಿ ತಿಳಿಸಿದರು.
ಖಾನಾವಳಿ ವೈಶಿಷ್ಟ ್ಯತೆಗಳು: ಜವಾಬ್ ಸಂಸ್ಥೆಯ ಮಾಜಿ ಪದಾಧಿಕಾರಿ, ಮನೀಷ್ ಕ್ಯಾಟರರ್ಸ್ನ ವಾಮನ ಎಸ್.ಶೆಟ್ಟಿ ಅವರು ತುಳುನಾಡಿನ ರುಚಿರುಚಿಯ ಬಂಟಮನೆತನದ ಶುಚಿರುಚಿಯಾದ ಊಟೋಪಚಾರ ಸಿದ್ಧಪಡಿಸಿದ್ದು, ಗೆಂದದ ಅಡ್ಯ, ಸಾರ್ನೆದಡ್ಯೆ, ನೀರ್ದೋಸೆ, ಮೂಡೆ, ತಾಟೆ ಗಸಿ, ಮಟ್ಟು ಗುಳ್ಳದ ಗಸಿ, ಕೋರಿರೊಟ್ಟಿ, ಊರುದ ರೊಟ್ಟಿ, ಕುಡುತ್ತಾ-ಉಡ್ದುದ ಚಟ್ನಿ ಸೇರಿದಂತೆ ಅನೇಕಾನೇಕ ಬಾಯಲ್ಲಿ ರಸವನ್ನಿಳಿಸುವ ತವರೂರ ತಿನಿಸುಗಳನ್ನು ತಯಾರಿಸಿ ಬಂಟ ಸಂಸ್ಕೃತಿಯ ರಸದೌತನವನ್ನು ಉಣಬಡಿಸಿದರು. ನವಪೀಳಿಗೆಯು ಹಳೇಶೈಲಿಯ ಪೌಷ್ಠಿಕ ಮತ್ತು ಊಟೋಪಚಾರಗಳನ್ನು ಸವಿದು ಆಧುನಿಕ ಪೀಜ್ಹಾ-ನೂಡಲ್ಸ್ಕ್ಕಿಂತ ತವರೂರ ಪುಂಡಿಗಸಿಯೇ ಬೆಟ್ಟರ್ ಅಂದರು.
ಮಕ್ಕಳ ಪ್ರಾರ್ಥನಾ ನೃತ್ಯದೊಂದಿಗೆ ವಾರ್ಷಿಕೋತ್ಸವ ಆದಿಗೊಂಡಿತು. ಉಪಾಧ್ಯಕ್ಷ ಬಿ.ಶಿವರಾಮ ನಾಕ್ ಸ್ವಾಗತಿಸಿದರು. ರಮ್ಯ ಶೆಟ್ಟಿ, ದಿವ್ಯಾ ಕೆ.ಶೆಟ್ಟಿ, ತಾರಾ ಸಿ.ರೈ ಮತ್ತು ನಮಿತಾ ಎಸ್.ರೈ ಪ್ರಾರ್ಥನೆಯನ್ನಾಡಿದರು. ಮಾಜಿ ಅಧ್ಯಕ್ಷ ಬಿ.ವಿವೇಕ್ ಶೆಟ್ಟಿ ಅತಿಥಿಯನ್ನು ಪರಿಚಯಿಸಿದರು ಹಾಗೂ ಸ್ವಚ್ಚತಾ ಅಭಿಯಾನದ ಮಾಹಿತಿಯನ್ನಿತ್ತರು. ಗೌ ಪ್ರ ಕಾರ್ಯದರ್ಶಿ ಪ್ರಕಾಶ್ ಎಸ್.ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಕಳತ್ತೂರು ಪೂರ್ಣಿಮಾ ವಿ.ಶೆಟ್ಟಿ ಮತ್ತು ವಲ್ಲಾರಿ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಾಹಿಸಿದರು. ಮಾಜಿ ಅಧ್ಯಕ್ಷ ಶಂಕರ್ ಟಿ.ಶೆಟ್ಟಿ ಜುಮಾದಿಯೊಂದಿಗೆ ಪ್ರೆಶ್ನೆಗಳನ್ನು ಕೇಳುತ್ತಾ ಭವಿಷ್ಯತ್ತಿನ್ನುದ್ದಕ್ಕೂ ಈ ಸಂಸ್ಥೆಯನ್ನು ಬಲಯುತ ಗೊಳಿಸಿ ಸಮಾಜ ಸೇವೆಗೆ ಪ್ರೇರೆಪಿಸುವ ಶಕ್ತಿ, ಒಮ್ಮತದಿಂದ ಸಂಸ್ಥೆಯನ್ನು ಮುನ್ನಡೆಸುವ ಬಲತುಂಬುವಂತೆ ಕೋರುತ್ತಾ ‘ಭಂಡಾರ’ದ ವಿಧಿವಿಧಾನಗಳನ್ನು ನೆರವೇರಿಸಿದರು. ಸಿ.ವಿ ಶೆಟ್ಟಿ ಸಭಾ ಕಾರ್ಯಕ್ರಮ ನಿರೂಪಿಸಿದರು. ಗೌ ಕೋಶಾಧಿಕಾರಿ ಜಯಪ್ರಕಾಶ್ ಶೆಟ್ಟಿ ವಂದನಾರ್ಪಣೆಗೈದರು.
ಕಾರ್ಯಕ್ರಮದಲಿ ಮಾಜಿ ಅಧ್ಯಕ್ಷರುಗಳಾದ ನ್ಯಾ ಆನಂದ್ ಪಿ.ಶೆಟ್ಟಿ, ರಮೇಶ್ ಯು.ಶೆಟ್ಟಿ, ವಿಶ್ವನಾಥ್ ಹೆಗ್ಡೆ, ವಿಶ್ವಸ್ಥ ಸದಸ್ಯರುಗಳಾದ ಜಯರಾಮ್ ಎನ್.ಶೆಟ್ಟಿ, ರತ್ನಾಕರ್ ರೈ, ಬಿ.ಆರ್ ಪೂಂಜಾ, ಮಹೇಶ್ ಎಸ್.ಶೆಟ್ಟಿ, ಕೃಷ್ಣ ವೈ.ಶೆಟ್ಟಿ, ಸಿಎ ರವೀಂದ್ರ ಎ.ಶೆಟ್ಟಿ, ರಘುರಾಮ್ ಕೆ.ಶೆಟ್ಟಿ, ಮನ್ಮೋಹನ್ ಆರ್.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಮನೋರಂಜನೆಯ ಸಲುವಾಗಿ ಜವಾಬ್ನ ಸದಸ್ಯರು, ಮಹಿಳೆಯರು ಮತ್ತು ಮಕ್ಕಳು ವೈವಿಧ್ಯಮಯ ಇಂಪಾದ ಹಾಡುಗಳಿಗೆ ಹೆಜ್ಜೆಗಳನ್ನಾಕಿ ನೃತ್ಯಾವಳಿಗಳೊಂದಿಗೆ ಕುಣಿದು ಕುಪ್ಪಳಿಸಿದರು. ಮಹಿಳೆಯರು ‘ನವದುರ್ಗೆ’ ನೃತ್ಯರೂಪಕ, ಸದಸ್ಯರು ‘ಪ್ರೇಮನಾಥ ಪಾಸ್ ಆದ’ ನೃತ್ಯ, ಯುವಕ-ಯುವತಿಯರು ಬಂಟ ಸಂಸ್ಕೃತಿ ಸಾರುವ ‘ಫ್ಯಾಶನ್ ಶೋ’ ಸಾದರ ಪಡಿಸಿದರು. ಬಹುತೇಕರೆಲ್ಲರೂ ಸಾಂಪ್ರದಾಯಿಕ ಉಡುಗೆ-ತೊಡುಗೆಯೊಂದಿಗೆ ಆಗಮಿಸಿ ಸಾಂಸ್ಕೃತಿಕ ವೈಭವಕ್ಕೆ ಮೆರುಗು ನೀಡಿದರು.
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)