ಮುಂಬಯಿ, ಜ.26: ಸಿನೇಮಾರಂಗದಲ್ಲೇ ತುಳು ಸಿನೇಮಾಗಳ ಸಂಖ್ಯೆ ಕಡಿಮೆಯಾಗಿದ್ದು ಸದ್ಯ ತುಳು ಸಿನೇಮಾರಂಗ ವಿಶ್ವ ಮಾನ್ಯತೆ ಪಡೆಯುತ್ತಿದೆ ಎನ್ನುವ ಅಭಿಮಾನ ಆಗುತ್ತಿದೆ. 45 ವರ್ಷಗಳಲ್ಲಿ 45 ತುಳು ಸಿನೇಮಾಗಳನ್ನು ಕಂಡ ತುಳು ಸಿನೇಮಾ ಜಗತ್ತು ತನ್ನ ‘ಓರಿಯರ್ದೊರಿ ಅಸಲ್’ ತುಳು ಸಿನೇಮಾ ಮೂಲಕ ಜೀವಕಳೆ ಪಡೆದಿದೆ. ಸದ್ಯ 50 ತುಳು ಸಿನೇಮಾ ಶಿರೋನಾಮೆಗಳು ಸ್ವಾಧೀನ (ಟೈಟ್ಲ್ ಪೊಝೆಶನ್) ಹಂತದಲ್ಲಿದ್ದು ತುಳು ಸಿನೇಮಾಗಳ ಪರ್ವಕಾಲವಾಗಿದೆ. ಮದಿಮೆ ಯಂತಹ ಪ್ರಪ್ರಥಮ ಕೌಟುಂಬಿಕ ತುಳು ಚಿತ್ರಗಳಂತೆಯೇ ಇನ್ನಷ್ಟು ತುಳು ಸಿನೇಮಾಗಳು ರೂಪುಗೊಂಡು ತುಳು ಸಿನೇಮಾರಂಗ ವಿಶ್ವ ಮಾನ್ಯತೆ ಪಡೆಯುವಂತಾಗಲಿ ಎಂದು ಹೆಸರಾಂತ ತುಳು ನಾಟಕ, ಚಿತ್ರಕಾರ, ‘ಮದಿಮೆ’ ತುಳು ಸಿನೇಮಾದ ಸಾಹಿತ್ಯ ಚಿತ್ರಕಥೆ ರಚನೆಕಾರ, ಸಂಭಾಷಕ, ನಿರ್ದೇಶಕ ವಿಜಯಕುಮಾರ್ ಶೆಟ್ಟಿ ಕೊಡಿಯಾಲ್ಬೈಲ್ ತಿಳಿಸಿದರು.
ಅಸಲ್ಫಾ ಮತ್ತು ಸಾಕಿನಾಕ ಪರಿಸರದ ಚಿತ್ರರಸಿಕರ ಬಹು ಅಪೇಕ್ಷೆಯ ಮೇರೆಗೆ ಇಂದಿಲ್ಲಿ ಸೋಮವಾರ ಕುರ್ಲಾ ಪಶ್ಚಿಮದಲ್ಲಿನ ಜೆರಿಮೆರಿ ಕಾಜುಪಾಡ ಅಲ್ಲಿನ ಮ್ಯಾಕ್ಸಾಸ್ ಸಿನೇಮಾ ಮಂದಿರದಲ್ಲಿ ಪ್ರದರ್ಶಿಸಲ್ಪಟ್ಟ ‘ಮದಿಮೆ’ ಕೌಟುಂಬಿಕ ತುಳು ಹಾಸ್ಯ ಚಲನಚಿತ್ರ ಪ್ರದರ್ಶನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿಜಯಕುಮಾರ್ ಕೊಡಿಯಾಲ್ಬೈಲ್ ಮಾತನಾಡಿದರು.
ಚಿತ್ರಪ್ರದರ್ಶನದ ಆದಿಯಲ್ಲಿ ನಡೆಸಲ್ಪಟ್ಟ ಸರಳ ಕಾರ್ಯಕ್ರಮದಲ್ಲಿ ಚಿತ್ರಮಂದಿರದ ವೇದಿಕೆಯಲ್ಲಿ ಬಂಧು ಬಳಗವನ್ನೊಳಗೊಂಡು ಅಸಲ್ಫಾ ನಿವಾಸಿಗಳಾದ ಮಾಧವ ಬಂಗೇರಾ ಮತ್ತು ಚಂದ್ರಾವತಿ ಬಂಗೇರಾ ದಂಪತಿ ಪುಷ್ಪಹಾರ ಬದಲಾಯಿಸಿ ತಮ್ಮ ಮದುವೆಯ (ದಾಂಪತ್ಯ ಜೀವನದ) 51ನೇ ಸಂಭ್ರಮ ಆಚರಿಸಿದ್ದು, ಕೊಡಿಯಾಲ್ಬೈಲ್ ಅವರು ದಂಪತಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಗೌರವ ಅತಿಥಿಗಳಾಗಿ ಚಿತ್ರದ ನಿರ್ಮಾಪಕ ಮೇಗಿನಮನೆ ಬಾಲಕೃಷ್ಣ ಶೆಟ್ಟಿ, ಮಾಲಾಡಿ ಬಾಲಕೃಷ್ಣ ಶೆಟ್ಟಿ, ಚಿತ್ರದ ಮುಂಬಯಿ ಸಂಚಾಲಕ ಪ್ರೇಮ್ ಶೆಟ್ಟಿ ಸುರತ್ಕಲ್ ಉಪಸ್ಥಿತರಿದ್ದು ಶುಭಾರೈಸಿದರು.
ವಿಶೇಷ ಆಮಂತ್ರಿತರಾಗಿ ತೋನ್ಸೆ ಸಂಜೀವ ಪೂಜಾರಿ, ನ್ಯಾಯವಾದಿ ಆರ್.ಜಿ ಶೆಟ್ಟಿ, ಕೇಶವ ಎನ್.ಅಂಚನ್ ಪೊವಾಯಿ, ರವಿ ಮೆಂಡನ್ ಕುರ್ಕಾಳ್, ಬಾಬು ಅವಿೂನ್ ಕಾರಿಂಜೆ, ವೆಣೂರು ಸುರೇಶ್ ಸಿ.ದೇವಾಡಿಗ, ರಮೇಶ್ ಪೂಜಾರಿ, ರವಿ ಪೂಜಾರಿ, ಸುಂದರ್ ಸಾಲ್ಯಾನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಚಲನಚಿತ್ರ ಪ್ರದರ್ಶನ ಸಂಘಟಕ ಬೆಳುವಾಯಿ ಪ್ರಭಾಕರ ವಿ.ಶೆಟ್ಟಿ ಸ್ವಾಗತಿಸಿದರು. ಬಾಬಾಪ್ರಸಾದ್ ಅರಸ ಕಾರ್ಯಕ್ರಮ ನಿರೂಪಿಸಿದರು. ನವೀನ್ ಎಸ್.ಶೆಟ್ಟಿ ಇರ್ವತ್ತೂರು ವಂದಿಸಿದರು.
ಚಿತ್ರಮಂದಿರಕ್ಕೆ ಪ್ರವೇಶಿಸುತ್ತಿದ್ದಂತೆಯೇ ನೆರೆದ ಬಂಗೇರಾ ದಂಪತಿಯ ಬಂಧುಗಳು ಪಣ್ಣಿರು ಚಿಮುಕಿಸಿ, ಮಹಿಳೆಯರಿಗೆ ಮಂಗಳೂರು ಮಲ್ಲಿಗೆ ಮುಡಿಸಿ ಮದುವೆ ಮಂಟಪದಂತೆಯೇ ಸುಖಾಗಮನ ಬಯಸಿದರು. ಗಣರಾಜ್ಯೋತ್ಸವದ ಸಂಭ್ರಮದ ನಿಮಿತ್ತ ಚಿತ್ರಮಂದಿರದಲ್ಲಿ ಬಿಗು ಬಂದೋಬಸ್ತುನೊಂದಿಗೆ ನಡೆದ ಮದುವೆ ಸಂಭ್ರಮಕ್ಕೆ ಆಶೀರ್ವಚನ ನೀಡಲಿರುವ ಪುರೋಹಿತರೇ ಗೈರು ಹಾಜರಾಗಿದ್ದು ವಿಜಯಕುಮಾರ್ ಕೊಡಿಯಾಲ್ಬೈಲ್ ಅವರೇ ವಧುವರರನ್ನು ಹರಸಿ ಧಾರ್ಮಿಕ ಕೈಂಕರ್ಯ ಪೂರೈಸಿದರು. ಮದುವೆಯ ಬೀಗರೂಟ ಮಾತ್ರ ಅವರವರ ಮನೆಯಲ್ಲೇ ಸವಿಯುವಂತಾಯಿತು.
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)