ಮುಂಬಯಿ : ಬಂಟರ ಸಂಘ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಎರಡನೇ ತುಳು ಸಿನೇಮಾ ’ಮದಿಮೆ’ ಜ. 18ರಂದು ಕಾಂದಿವಲಿ ಪೂರ್ವ ಕಾರ್ನಿವಲ್ ಸಿನೆಮಾ ಮಂದಿರದಲ್ಲಿ ಯಶಸ್ವೀ ಹೌಸ್ ಪುಲ್ ಪ್ರಥಮ ಪ್ರದರ್ಶನ ಕಂಡಿತು.
ತುಳು ಕಿರುತೆರೆ ಹಾಗೂ ರಂಗಭೂಮಿಯ ದಿಗ್ಗಜರಿಲ್ಲದ ಈ ಚಲನಚಿತ್ರದ ಪ್ರಥಮ ಪ್ರದರ್ಶನವನ್ನು ಕಾಂದಿವಲಿಯ ಅವೆನ್ಯೂ ಹೊಟೇಲಿನ ಮಾಲಕರಾದ ರಘುರಾಮ್ ಶೆಟ್ಟಿಯವರು ದೀಪ ಬೆಳಗಿಸಿ ಚಾಲನೆಯಿತ್ತು ಶುಭ ಹಾರೈಸಿದರು.
ನಿರ್ದೇಶಕ ’ಓರಿಯರ್ದೊರಿ ಅಸಲ್’ ಖ್ಯಾತಿಯ ವಿಜಯಕುಮಾರ್ ಕೊಡಿಯಾಲ್ ಬೈಲ್ ರನ್ನು ಬಂಟರ ಸಂಘದ ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್. ಪಯ್ಯಡೆ ಹಾಗೂ ಕಾರ್ಯಧ್ಯಕ್ಷ ವಿಜಯ ಭಂಡಾರಿ ಸನ್ಮಾನಿಸಿದರು. ನಂತರ ಕಿಕ್ಕಿರಿದು ಸೇರಿದ ಜನಸಾಗರವನ್ನು ಉದ್ದೇಶಿಸಿ ಮಾತನಾಡಿದ ವಿಜಯಕುಮಾರ್ ಅವರು ನನ್ನ ಕಲಾಜೀವನದ ಬೆಳವಣಿಗೆಗೆ ಮುಂಬಯಿ ಕಲಾಪ್ರೇಮಿಗಳ ಕೊಡುಗೆ ಅಪಾರ. ಗುಣ ಮಟ್ಟದ ಚಿತ್ರ ನಿರ್ಮಾಣ ಮಾಡಬೇಕೆನ್ನುವುದೇ ನನ್ನ ಉದ್ದೇಶ. ತುಳು ರಂಗಭೂಮಿಯ ಕಲಾವಿದರಿಗೆ ’ಮದಿಮೆ’ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಲು ಅವಕಾಶ ನೀಡಿರುವೆನು ಎಂದರು.
’ಮದಿಮೆ’ ಚಿತ್ರ ವೀಕ್ಷಿಸಲು ಕಾಂದಿವಲಿ ಕಾರ್ನಿವಲ್ ಸಿನೆಮಾ ಮಂದಿರದಲ್ಲಿ ಬೆಳಿಗ್ಗೆ 8.30ಕ್ಕೆ ಜನ ಕಿಕ್ಕಿರಿದು ಸೇರಿಕೊಂಡಿದ್ದರು. ಸಂಸದ ಗೋಪಾಲ ಶೆಟ್ಟಿಯವರ ಪರಿವಾರ, ಪಯ್ಯಡೆ ಪರಿವಾರ, ಬಂಟ ಸಮಾಜದ ಅನೇಕ ಬಂಧುಗಳು, ತುಳು ಚಿತ್ರದ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಬಂಟರ ಸಂಘದ ಗಣ್ಯರಾದ ಪ್ರವೀಣ್ ಭೋಜ ಶೆಟ್ಟಿ, ರವೀಂದ್ರ ಎಸ್. ಭಂಡಾರಿ, ಮನೋಹರ ಶೆಟ್ಟಿ, ನಿಟ್ಟೆ ಎಂ. ಜೆ. ಶೆಟ್ಟಿ, ಪ್ರೇಮನಾಥ ಶೆಟ್ಟಿ, ಉದ್ಯಮಿ ಸಾಧು ಶೆಟ್ಟಿ, ವಿನೋದಾ ಶೆಟ್ಟಿ, ಶಿಮಂತೂರು ಪ್ರವೀಣ್ ಶೆಟ್ಟಿ ’ಮದಿಮೆ’ ಚಿತ್ರದ ಮುಂಬಯಿ ಸಂಚಾಲಕ ಕರುಣಾಕರ ಶೆಟ್ಟಿ,ವ್ಯವಸ್ಥಾಪಕರಾದ ಪ್ರಕಾಶ್ ಎಂ. ಶೆಟ್ಟಿ ಮತ್ತು ಪ್ರೇಮ್ ಶೆಟ್ಟಿ ಸುರತ್ಕಲ್ ಮೊದಲಾದವರು ಉಪಸ್ಥಿತರಿದ್ದರು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್