ಮುಂಬಯಿ : ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಇದರ ಮಹಿಳಾ ವಿಭಾಗವು ಜ. 4 ರಂದು ’ಮೃಗನಯನಿ’ ಕಾರ್ಯಕ್ರಮವನ್ನು ಅಂದೇರಿಯ ಶಾಲಿನಿ ಶಂಕರ್ ಕನ್ವೆಂಶನ್ ಸಭಾಗೃಹದಲ್ಲಿ ಆಯೋಜಿಸಿದ್ದು ನಾಡೋಜ ಡಾ. ಜಿ. ಶಂಕರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾಜದ ಬಡ ಕುಟುಂಬಕ್ಕೆ ನೆರವು ನೀಡಲು ಯೋಜನೆಗಳನ್ನು ನಿರ್ಮಿಸಬೇಕಾಗಿ ಕರೆಯಿತ್ತರು. ನಿಸ್ವಾರ್ಥ ಸಮಾಜ ಸೇವೆ ಮಾಡುವಾಗ ಟೀಕೆ ಟಿಪ್ಪಣಿಗಳು ಬರಬಹುದು. ಅದನ್ನೆಲ್ಲಾ ಲೆಕ್ಕಿಸದೆ ಮಹಿಳೆಯರು ಮಹಿಳಾ ವಿಭಾಗವನ್ನು ಮುನ್ನಡೆಸಬೇಕು ಎಂದು ಅವರು ಹೇಳಿದರು.
ದಿನ ಪೂರ್ತಿ ನಡೆದ ಈ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೆ ಎಲ್ಲಾ ಕಿರಿಯ ಹಾಗೂ ಹಿರಿಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷ ಸುರೇಶ್ ಕಾಂಚನ್ ಮಾತನಾಡುತ್ತಾ 74 ವರ್ಷಗಳ ಇತಿಹಾಸವುಳ್ಳ ಈ ಸಂಘಟನೆಯಲ್ಲಿ ಕೇವಲ ನಾಲ್ಕು ತಿಂಗಳ ಹಿಂದೆ ಹುಟ್ಟಿದ ಮಹಿಳಾ ವಿಭಾಗವು ಇಷ್ಟೊಂದು ದೊಡ್ಡ ಮಟ್ಟದ ಕಾರ್ಯಕ್ರಮವನ್ನು ನೀಡಿದ್ದು ಹೆಗ್ಗಳಿಕೆಯಾಗಿದೆ. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಸುಚಿತ್ರಾ ಎಸ್. ಪುತ್ರನ್ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸುಚಿತ್ರಾ ಎಸ್. ಪುತ್ರನ್ ಮಾತನಾಡುತ್ತಾ ಹೆತ್ತವರು ತಮ್ಮ ಮಕ್ಕಳನ್ನು ಅವರ ಪ್ರತಿಭಾ ವಿಕಸನಕ್ಕಾಗಿ ಇಂತಹ ವೇದಿಕೆಯನ್ನು ಬಳಸಲು ಅವಕಾಶ ನೀಡಬೇಕು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಯಾಶೀಲರಾದಲ್ಲಿ ಮಹಿಳಾ ವಿಭಾಗವು ಮಹಿಳೆಯರಿಗಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗುತ್ತದೆ.
ಅಧ್ಯಕ್ಷತೆಯನ್ನು ವಹಿಸಿದ ಮೊಗವೀರ ಮಹಾಜನ ಸೇವಾ ಸಂಘದ ಅಧ್ಯಕ್ಷ ಮಹಾಬಲ ಕುಂದರ್ ಮಾತನಾಡುತ್ತಾ ಸುಚಿತ್ರಾ ಅವರು ಸಂತೋಷ್ ಪುತ್ರನ್ ಅವರ ಸಹಕಾರದೊಂದಿಗೆ ಉತ್ತಮ ಕಾರ್ಯಕ್ರಮ ನೀಡಿದ್ದು ಮಹಿಳೆಯರ ಸಾಧನೆ ಮೆಚ್ಚ ತಕ್ಕದ್ದು. ಈ ರೀತಿ ಮುಂದುವರಿದಲ್ಲಿ ಮುಂದಿನ ದಿನದಲ್ಲಿ ಸಮಾಜವ್ ಖಂಡಿತವಾಗಿ ಅಭಿವೃದ್ದಿ ಸಾಧಿಸುತ್ತದೆ ಎಂದರು.
ವೇದಿಕೆಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಅಜಿತ್ ಸುವರ್ಣ, ಮೊಗವೀರ ಯುವಕ ಸಂಘದ ಅಧ್ಯಕ್ಷ ಸದಾನಂದ ಕೋಟ್ಯಾನ್, ಮೊಗವೀರ ಬ್ಯಾಂಕಿನ ನಿರ್ದೇಶಕ ಪ್ರದೀಪ್ ಚಂದನ್, ಗೋಪಾಲ ಪುತ್ರನ್, ಆರ್. ಡಿ. ಶಿಂಧೆ, ಸಂತೋಷ್ ಪುತ್ರನ್, ರಘುರಾಂ ಚಂದನ್, ರಾಜು ಮೆಂಡನ್, ಯಶೋಧ ಕಾಂಚನ್, ವಸಂತಿ ನಾಯ್ಕ್, ಎಸ್. ಡಿ. ನಾಯ್ಕ್, ಶ್ರೀನಿವಾಸ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು. ಮಂಜುನಾಥ ನಾಯ್ಕ್ ಮತ್ತು ಮೀನಾಕ್ಷಿ ಶ್ರೀಯಾನ್ ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್