ಮುಂಬಯಿ : 21ನೇ ಶತಮಾನದಲ್ಲಿ ಮಾನವನನ್ನು ಕಾಡುತ್ತಿರುವ ದೊಡ್ಡ ರೋಗ ಅಂದರೆ ಏಕಾಂಗಿತನ. ಇಂತಹ ಸಮಾರಂಭಗಳ ಮೂಲಕ ಮುಖಾ ಮುಖಿ ಸಂಭಾಷಣೆಯು ನಡೆಯುತ್ತಿದ್ದು ಇದು ಇಂದಿನ ಅಗತ್ಯವೂ ಆಗಿದೆ ಎಂದು ಹಿರಿಯ ಪತ್ರಕರ್ತ ಈಶ್ವರ ದೈತೋಟ ನುಡಿದರು. ಸೆ. 26 ರಂದು ಕರ್ನಾಟಕ ಸಂಘದ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಮತ್ತು ಕರ್ನಾಟಕ ಸರಕಾರದ ವಾರ್ತಾ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡ ಮೂರು ದಿನಗಳ ಸಿ. ಲಕ್ಷ್ಮಣ ನಿರ್ದೇಶನದ ಪ್ರಶಸ್ತಿ ಪುರಸ್ಕೃತ ಮಕ್ಕಳ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಹೀಗೆಂದರು.
ಇನ್ನೋರ್ವ ಪತ್ರಕರ್ತ ಮಂಜುನಾಥ ಚಾಂದ, ಸಮಾಜ ಸೇವಕ ಅನಂತ ರಾಮಯ್ಯ ಅವರೂ ಉಪಸ್ಥಿತರಿದ್ದ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಮೂರು ದಿನಗಳಲ್ಲಿ ಪ್ರದರ್ಶಿಸಿದ ಚಿತ್ರಗಳ ನಿರ್ಮಾಪಕ ನಿರ್ದೇಶಕ ಸಿ. ಲಕ್ಷ್ಮಣ ಅವರನ್ನು ಗೌರವಿಸಲಾಯಿತು. ಬಳಿಕ ಅವರು ನಿರ್ದೇಶಿಸಿದ ’ಮಸಣದ ಮಕ್ಕಳು’ ಚಲನ ಚಿತ್ರ ಪ್ರದರ್ಶನಗೊಂಡಿತು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರಕಾಶ್ ಬುರ್ಡೆಯವರು ಸ್ವಾಗತಿಸಿದರು. ಗೌ. ಕಾರ್ಯದರ್ಶಿ ಓಂದಾಸ್ ಕನ್ನಂಗಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಕೋಶಾಧಿಕಾರಿ ಎಂ. ಎನ್. ಗುಡಿ ವಂದನಾರ್ಪಣೆ ಮಾಡಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್