ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಶಿವಸೇನೆ ನಡುವಿನ ಬಿಕ್ಕಟ್ಟು ಶಮನಗೊಳ್ಳುವ ಸಾಧ್ಯತೆಗಳು ಗೋಚರಿಸುತ್ತಿಲ್ಲ. ಚುನಾವಣೆಯಲ್ಲಿ 150ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ತಾನು ಸ್ಪರ್ಧಿಸಲು ಸಾಧ್ಯವೇ ಇಲ್ಲ ಎಂದು ಶಿವಸೇನೆ ಹೇಳಿದೆ.
”150ಕ್ಕಿಂತ ಕಡಿಮೆ ಸ್ಥಾನಗಳಿಗೆ ಶಿವಸೇನೆ ಸ್ಪರ್ಧಿಸಲು ಸಾಧ್ಯವೇ ಇಲ್ಲ. ಮಹಾಯುತಿಯನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಬಿಜೆಪಿಗೂ ಇದೆ. ಐದು ಸೀಟುಗಳನ್ನು ಬಿಟ್ಟುಕೊಡಲು ಬಿಜೆಪಿ ಸಿದ್ಧವಾದರೆ, ನಾವು ಅವರಿಗೆ ಮೊದಲು ಕೊಟ್ಟಿದ್ದಕ್ಕಿಂತಲೂ 6 ಸೀಟುಗಳು ಹೆಚ್ಚುವರಿಯಾಗಿ ಅವರಿಗೆ ದಕ್ಕುತ್ತವೆ” ಎಂದು ಹಿರಿಯ ಶಿವಸೇನಾ ಮುಖಂಡ ರಾಮದಾಸ್ ಕದಂ ತಿಳಿಸಿದರು.
ತಾನು 151 ಸ್ಥಾನಗಳನ್ನು ಇಟ್ಟುಕೊಂಡು, ಬಿಜೆಪಿಗೆ 130 ಸ್ಥಾನಗಳು ಹಾಗೂ ಇತರ ಸಣ್ಣ ಪಕ್ಷಗಳಿಗೆ ಕೇವಲ 7 ಸ್ಥಾನಗಳನ್ನು ಬಿಟ್ಟುಕೊಡುವುದಾಗಿ ನಿನ್ನೆ ರಾತ್ರಿ ಹೊಸ ಪ್ರಸ್ತಾವವನ್ನು ಶಿವಸೇನೆ ಮಂಡಿಸಿತ್ತು.
ಮೈತ್ರಿಕೂಟ ಉಳಿಸಿಕೊಳ್ಳಲು ಶಿವಸೇನೆ ಈಗಾಗಲೇ 18 ಸ್ಥಾನಗಳನ್ನು ತ್ಯಾಗ ಮಾಡಿದೆ. ಮಹಾಯುತಿಯ ಕಿರು ಪಕ್ಷಗಳು ಹೊಸ ಸೀಟು ಹಂಚಿಕೆ ಸೂತ್ರದ ಬಗ್ಗೆ ಅಸಮಾಧಾನ ಹೊಂದಿವೆ. ನಾಲ್ಕು ಪಕ್ಷಗಳಿಗೆ 7 ಕೇವಲ ಸ್ಥಾನಗಳನ್ನು ಬಿಟ್ಟುಕೊಡುವುದೆಂದರೆ ಅದು ಬಹುದೊಡ್ಡ ಅವಮಾನ ಎಂದು ಸ್ವಾಭಿಮಾನಿ ಶೇತ್ಕರಿ ಸಂಘಟನದ ಅಧ್ಯಕ್ಷ ರಾಜು ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಆರ್ಪಿಐ(ಎ) ಮುಖ್ಯಸ್ಥ ರಾಮದಾಸ್ ಅಠವಳೆ ಕೂಡ ಹೊಸ ಸೂತ್ರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಾಯುತಿಯ ಕಿರು ಪಕ್ಷಗಳು ಹೊಸ ಸೀಟು ಹಂಚಿಕೆ ಸೂತ್ರದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದವು. ಹೀಗಾಗಿ ಇಂದು ಮುಂಬೈನ ಹೋಟೆಲೊಂದರಲ್ಲಿ ಬಿಜೆಪಿ, ಶಿವಸೇನೆ ಹಾಗು ಮೈತ್ರಿಕೂಟದ 3 ಪಕ್ಷಗಳು ಸಭೆಯಲ್ಲಿ ಸೇರಿವೆ.