ಕರ್ನಾಟಕ

ವಿಮಾನದಲ್ಲಿ ಬಂದು ಸರಗಳ್ಳತನ ಮಾಡಿ ರೈಲಿನಲ್ಲಿಎಸ್ಕೇಪ್‌ ಆಗುತ್ತಿದ್ದ ಖತರ್ನಾಕ್‌ ಅಂತಾರಾಜ್ಯ ಸರಗಳ್ಳರ ಬಂಧನ

Pinterest LinkedIn Tumblr

ಹೊಸಕೋಟೆ : ವಿಮಾನದಲ್ಲಿ ಬಂದು ಸರಗಳ್ಳತನ ಮಾಡಿ ರೈಲಿನಲ್ಲಿಎಸ್ಕೇಪ್‌ ಆಗುತ್ತಿದ್ದ ಖತರ್ನಾಕ್‌ ಅಂತಾರಾಜ್ಯ ಸರಗಳ್ಳರನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಪಂಜಾಬ್‌ನ ಅರ್ಜುನ್‌ ಕುಮಾರ್‌ ಹಾಗೂ ರಾಕೇಶ್‌ ಬಂಧಿತ ಆರೋಪಿಗಳು. ಈ ಆರೋಪಿಗಳು ಲೂಧಿಯಾನದಿಂದ ದಿಲ್ಲಿಗೆ ಬಸ್‌ ಅಥವಾ ಸ್ವಂತ ವಾಹನದಲ್ಲಿ ಬಂದು ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ಬರುತ್ತಿದ್ದರು.

ನಂತರ ಅಲ್ಲಿಂದ ಸ್ಥಳೀಯ ಕ್ಯಾಬ್‌ ಬಳಸಿ ಸರ್ಜಾಪುರ ವ್ಯಾಪ್ತಿಯ ದೊಮ್ಮಸಂದ್ರ ಗ್ರಾಮದಲ್ಲಿ ಬಾಡಿಗೆ ಮನೆಯೊಂದನ್ನು ಮಾಡಿಕೊಂಡಿದ್ದು, ಅಲ್ಲಿ ಸ್ನೇಹಿತನ ಬಳಿ ಉಳಿದು ಕೊಳ್ಳುತ್ತಿದ್ದರು. ಆರೋಪಿಗಳು ಕಳ್ಳತನ ಮಾಡಿದ ಬ್ಲಾಕ್‌ ಮತ್ತು ಬ್ಲೂ ಪಲ್ಸರ್‌ ಮೋಟಾರ್‌ ಸೈಕಲ್‌ ವಾಹನವನ್ನು ಬಳಸಿ ಒಂಟಿ ಮಹಿಳೆಯರು, ವೃದ್ಧರನ್ನು ಗುರಿಯಾಗಿಸಿ ಅವರುಗಳು ಹಾಕಿರುವ ಕತ್ತಿನ ಬಂಗಾರದ ಆಭರಣಗಳನ್ನು ಅಂದಾಜಿಸಿ ಇವರುಗಳ ಬಳಿ ವಿಳಾಸ ಕೇಳುವ, ದಾರಿ ಕೇಳುವ, ಹಾಗೂ ನೀರು ಬೇಡುವ ಹಾಗೂ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಆರೋಪಿಗಳು ಮಹಿಳೆಯ ಕತ್ತಿಗೆ ಕೈಹಾಕಿ ರಭಸವಾಗಿ ಕಿತ್ತು ಬೈಕ್‌ನಲ್ಲಿ ಪರಾರಿಯಾಗುತ್ತಿದ್ದರು.

ಕದ್ದ ಮೋಟಾರ್‌ ಸೈಕಲ್‌ ಅನ್ನು ಬಳಸಿ ಕೃತ್ಯ ನಡೆಸುತ್ತಿದ್ದುದ್ದಾಗಿ ತಿಳಿದು ಬಂದಿದ್ದು , ಕೃತ್ಯದ ನಂತರ ಕದ್ದ ವಾಹನಗಳನ್ನು ರೈಲು ನಿಲ್ದಾಣ, ವಿಮಾನ ನಿಲ್ದಾಣ ಮತ್ತು ಬೇರೆ ಸ್ಥಳದಲ್ಲಿ ಪಾರ್ಕಿಂಗ್‌ ಮಾಡಿ ವಿಮಾನದಲ್ಲಿ ಹೋದರೆ ಕಸ್ಟಂಸ್‌ ಅಧಿಕಾರಿಗಳ ಭಯಕ್ಕೆ ರೈಲಿನ ಮೂಲಕ ಪ್ರಯಾಣ ಮಾಡುತ್ತಿದ್ದರು. ರೈಲಿನ ಮೂಲಕ ಹೋಗುವ ಮಾರ್ಗ ಮಧ್ಯೆ ಗೋವಾ, ಬಾಂಬೆ ಮುಂತಾದ ಕಡೆ ಮೋಜು ಮಸ್ತಿ ಮಾಡಿಕೊಂಡು ಹೋಗುತ್ತಿದ್ದಾರೆಂದು ತನಿಖೆಯಿಂದ ಗೊತ್ತಾಗಿದೆ.

ಆರೋಪಿತರು ಈ ಹಿಂದೆ ತಮಿಳುನಾಡಿನ ಸೇಲಂ, ಕೃಷ್ಣಗಿರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 2014 ನೇ ಸಾಲಿನಲ್ಲಿ ಸುಮಾರು 25ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದು ಅಲ್ಲಿನ ಪೊಲೀಸರು 6 ತಿಂಗಳ ಕಾಲ ಜೈಲಿನಲ್ಲಿಟ್ಟಿದ್ದರು. ನಂತರ ಅದೇ ಆರೋಪಿಗಳು ಜೈಲಿನಿಂದ ಬಿಡುಗಡೆ ಆದ ಮೇಲೆ ಬೆಂಗಳೂರು ನಗರ ಪ್ರದೇಶದ ರಾಜಾಜಿನಗರ, ಬೆಂಗಳೂರು ಜಿಲ್ಲೆಯ ನೆಲಮಂಗಲ, ಮಾದನಾಯಕನಹಳ್ಳಿ , ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು ಇವರದೇ ಗುಂಪಿನ ಸುಭಾಶ್‌ ಮತ್ತು ಸಂಜಯ್‌ ಎಂಬುವರು ಸರಗಳ್ಳತನ ಮಾಡುವಾಗ ಸಿಕ್ಕಿಹಾಕಿಕೊಂಡು 9 ಪ್ರಕರಣಗಳು ಪತ್ತೆ ಮಾಡಲಾಗಿದೆ.

ಆರೋಪಿಗಳು ಮೂಲತಃ ಉತ್ತರಪ್ರದೇಶ ರಾಜ್ಯದ ಶ್ಯಾಮಿಲಿ ಜಿಲ್ಲೆಯವರಾಗಿದ್ದು, ಪ್ರಸ್ತುತ ಲೂಧಿಯಾನದಲ್ಲಿ ವಾಸವಾಗಿದ್ದರು. ಆರೋಪಿಗಳು ಕರ್ನಾಟಕ, ತಮಿಳುನಾಡು ಹಾಗೂ ಉತ್ತರಪ್ರದೇಶ ರಾಜ್ಯಗಳಲ್ಲಿಸರಗಳ್ಳತನ ಮಾಡಿರುವ ಅಂತಾರಾಜ್ಯ ಕಳ್ಳರಾಗಿದ್ದು , ಜು.21 ರಂದು ಮತ್ತೆ ಸರಗಳ್ಳತನ ಮಾಡಲು ಬಂದ ವೇಳೆ ತಾಂತ್ರಿಕ ಹಾಗೂ ವಿಡಿಯೋ ಪುಟೇಜ್‌ ಮತ್ತು ತಾಂತ್ರಿಕ ಸಹಾಯ ಬಳಸಿ ದೊಮ್ಮಸಂದ್ರ ಗ್ರಾಮದಲ್ಲಿಕಳ್ಳತನಕ್ಕೆ ಬಳಸುತ್ತಿದ್ದ ಬೈಕ್‌ ಹಾಗೂ ಪ್ರಕರಣ ಒಂದರಲ್ಲಿಕದ್ದ 15 ಗ್ರಾಂ ತೂಕದ ಚಿನ್ನದ ಸರ ಹಾಗೂ 2 ಮೊಬೈಲ್‌ಗಳ ಸಮೇತ ವಶಕ್ಕೆ ಪಡೆದಿದ್ದಾರೆ.

ಈ ಆರೋಪಿಗಳು ಕದ್ದ ಮಾಲನ್ನು ಲೂಧಿಯಾನದಲ್ಲಿಗಿರವಿ ಇಟ್ಟಿರುವುದಾಗಿ ತನಿಖೆಯಿಂದ ತಿಳಿದುಬಂದಿದ್ದು ಜು.26 ರಂದು ಹೊಸಕೋಟೆ ಪಿಎಸ್‌ಐ ಮಂಜುನಾಥ್‌ ಅವರ ನೇತೃತ್ವದ ತಂಡ ಲೂಧಿಯಾನಕ್ಕೆ ತೆರಳಿ ಕಳವು ಮಾಲನ್ನು ವಶಪಡಿಸಿಕೊಂಡಿದ್ದಾರೆ. ಈ ಆರೋಪಿಗಳು ಶ್ಯಾಮಿಲಿ ಗ್ಯಾಂಗ್‌ ಎಂದೇ ಕುಖ್ಯಾತರಾಗಿದ್ದು , ಈ ಶ್ಯಾಮಿಲಿ ಗ್ಯಾಂಗ್‌ ನಲ್ಲಿಈ ಇಬ್ಬರು ಆರೋಪಿಗಳ ಜೊತೆ ಸುಭಾಷ್‌ ಕುಮಾರ್‌, ಸಂಜಯ್‌ , ಚಗನ್‌ ಲಾಲ….ಡಿ.ಮಾಲೀಕ್‌, ಸೋನುಕುಮಾರ್‌ ಕನೌಜಿಯಾ ರವರು ಒಳಗೊಂಡಿದ್ದಾರೆಂದು ಹೊಸಕೋಟೆ ಪೊಲೀಸರು ಮಾಹಿತಿ ನೀಡಿದ್ದಾರೆ.

Comments are closed.