ಕರ್ನಾಟಕ

ಆಪರೇಷನ್ ಕಮಲದ ಜನಕ ಮಿಸ್ಟರ್ ಯಡಿಯೂರಪ್ಪ: ಮಾಜಿ ಸಿಎಂ ಸಿದ್ಧರಾಮಯ್ಯ

Pinterest LinkedIn Tumblr

ಬೆಂಗಳೂರು: ರಾಜ್ಯಪಾಲರ ಕೈಯಲ್ಲಿ ಸರ್ಕಾರ ಸುಳ್ಳು ಹೇಳಿಸಿದೆ. ಕೆಲವು ಸದಸ್ಯರು ಆ ಸುಳ್ಳುಗಳನ್ನೇ ಬೆಂಬಲಿಸಿ ದೀರ್ಘವಾಗಿ ಭಾಷಣ ಮಾಡಿದ್ದಾರೆ. ಬಜೆಟ್ ನಲ್ಲಿ ಸತ್ಯವೇ ಇಲ್ಲ, ಎಲ್ಲವೂ ಸುಳ್ಳಿನ ಕಂತೆಯಾಗಿದೆ. ದಿಕ್ಕು ದೆಸೆ, ಮುಂದಾಲೋಚನೆ, ಮುನ್ನೋಟವೂ ಇಲ್ಲದ ಭಾಷಣ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ, ಬಜೆಟ್ ನಲ್ಲಿ ಏನೇನೂ ಸತ್ವವೇ ಇಲ್ಲ. ನಮ್ಮ ಸರ್ಕಾರದ ಸಾಧನೆಗಳನ್ನೇ ಯೋಜನೆಗಳನ್ನೇ ನಮ್ಮದೆಂದು ಬಜೆಟ್ ನಲ್ಲಿ ಹೇಳಿಕೊಂಡಿದ್ದಾರೆ. ಯಾವುದೇ ಚುನಾಯಿತ ಸರ್ಕಾರ ಮಾಡುವ ಕೆಲಸವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯಪಾಲರಿಗೆ ಒಂದು ಘಟನೆ, ಗೌರವ ಇರುತ್ತದೆ. ಈ ಸರ್ಕಾರ ರಾಜ್ಯಪಾಲರನ್ನು ಬಳಸಿಕೊಂಡು ಅವರ ಬಾಯಿಯ ಮೂಲಕ ಸುಳ್ಳು ಹೇಳಿಸಿದೆ ಎಂದು ಆರೋಪಿಸಿದರು.

ನೀತಿ ಆಯೋಗದವರು ನಾವೀನ್ಯತಾ ಸೂಚ್ಯಂಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಮೊದಲ ಸ್ಥಾನ ನೀಡಿದ್ದರು. ಬಿಜೆಪಿಯವರದ್ದು ಚುನಾಯಿತ ಸರ್ಕಾರವಲ್ಲ, ಜನರಿಂದ ಆರಿಸಿ ಬಂದ ಸರ್ಕಾರವೂ ಅಲ್ಲ, ಪಾಪದ ಹಣ ಖರ್ಚು ಮಾಡಿ ಕಾಂಗ್ರೆಸ್, ಜೆಡಿಎಸ್ ನಿಂದ ಶಾಸಕರನ್ನು ಕರೆಸಿಕೊಂಡು ಸರ್ಕಾರ ರಚಿಸಿದ್ದಾರೆ. ಆಪರೇಷನ್ ಕಮಲದ ಜನಕ ಮಿಸ್ಟರ್ ಯಡಿಯೂರಪ್ಪ. ಅನೈತಿಕವಾಗಿ ಹುಟ್ಟಿದ ಅಂಗವೈಫಲ್ಯದ ಸರ್ಕಾರವಿದು. ನಮ್ಮ ಸರ್ಕಾರವಿದ್ದಾಗ ಟೇಕ್ ಆಫ್ ಆಗಿಲ್ಲ ಎಂದು ಹೇಳುತ್ತಿದ್ದವರು ಈಗ ಇವರ ಸರ್ಕಾರ ಏನಾಗಿದೆ, ಟೇಕಾಫ್ ಅಲ್ಲ ಸರ್ಕಾರ ಆಫ್ ಆಗಿಬಿಟ್ಟಿದೆ, ದಾರಿಯಲ್ಲಿ ನಿಂತ ಡಕೋಟಾ ಎಕ್ಸ್ ಪ್ರೆಸ್ ಸರ್ಕಾರ, 18 ತಿಂಗಳಾದರೂ ಯಡಿಯೂರಪ್ಪಗೆ ಸರ್ಕಾರ ಎಂಬ ಬಸ್ ಓಡಿಸಲು ಬರುತ್ತಿಲ್ಲ, ಗೇರ್ ಹಾಕಲು ಕೂಡ ಯಡಿಯೂರಪ್ಪಗೆ ತಿಳಿಯುತ್ತಿಲ್ಲ. ನಾಲ್ಕು ‌ಕಡೆಗಳಿಂದಲೂ ಬಸ್ ಹಿಡಿದು ಎಳೆದಾಡುತ್ತಿದ್ದಾರೆ, ಹೀಗೇ ಎಳೆದರೆ ಗೇರೇ ಕಿತ್ತುಬರಬಹುದು ಎಂದು ಲೇವಡಿ ಮಾಡಿದರು.

ನಮ್ಮ ಸರ್ಕಾರ ಎಲ್ಲಾ ಭರವಸೆಗಳನ್ನು ಈಡೇರಿಸಿದೆ. ಯಡಿಯೂರಪ್ಪ 18 ತಿಂಗಳಲ್ಲಿ ಏನೆಲ್ಲಾ ಮಾಡಿದ್ದಾರೆ ಎಂಬುದರ ಬಗ್ಗೆ ಚರ್ಚೆಗೆ ಬರಲಿ. ನಾವು ಚರ್ಚೆಗೆ ಸಿದ್ಧ, ಯಡಿಯೂರಪ್ಪ ಚರ್ಚೆಗೆ ಸಿದ್ಧರಿದ್ದಾರೆಯೇ ಎಂದು ಸವಾಲೆಸಿದರು.

Comments are closed.