ರಾಮನಗರ: ಬೆಟ್ಟಹಳ್ಳಿ ಗ್ರಾಮದ ಯುವತಿ ಕೊಲೆ ಪ್ರಕರಣದ ತನಿಖೆ ಜವಾಬ್ದಾರಿಯನ್ನು ಸರ್ಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ಅಧೀಕ್ಷಕ ರವಿ ಡಿ. ಚನ್ನಣ್ಣನವರ್ ಅವರಿಗೆ ವಹಿಸಿದೆ.
ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಅವರಿಗೆ ಕೊರೋನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಕೊಲೆ ಆರೋಪಿಗಳನ್ನು ಪತ್ತೆಹಚ್ಚುವ ಜವಬ್ದಾರಿ ರವಿ ಡಿ.ಚನ್ನಣ್ಣನವರ್ ಹೆಗಲಿಗೆ ಬಂದಿದೆ.
ಕಳೆದ ಅ. 8ರಂದು ಬೆಟ್ಟಹಳ್ಳಿ ಗ್ರಾಮದ 19 ವರ್ಷದ ಯುವತಿಯೊಬ್ಬಳು ಕಾಣೆಯಾಗಿದ್ದಳು. ನಿರಂತರ ಹುಡುಕಾಟದ ನಂತರ ಮಾವಿನ ತೋಟದಲ್ಲಿ ಶವವಾಗಿ ಪತ್ತೆಯಾದಳು. ಪೊಲೀಸರು ಪುನೀತ್ ಎಂಬ ಯುವಕನನ್ನು ವಿಚಾರಣೆಗೆ ಕರೆದೊಯ್ದಿದ್ದರು. ಇದರ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಯುವತಿಯದು ಕೊಲೆ, ಅತ್ಯಾಚಾರ, ಮರ್ಯಾದೆ ಹತ್ಯೆ ಹೀಗೆ ವಿವಿಧ ರೀತಿಯ ವದಂತಿಗಳು ಹರಿದಾಡುತ್ತಿವೆ.
ಮಾಗಡಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಕೊಲೆ ಪ್ರಕರಣ ಕುರಿತಾಗಿ ಮಾಹಿತಿ ಸಂಗ್ರಹಿಸಿದ ರವಿ ಡಿ.ಚನ್ನಣ್ಣನವರ್ ಅವರು , ರಾಮನಗರ ಎಎಸ್ಪಿ ರಾಮರಾಜ್, ಡಿವೈಎಸ್ಪಿ ಓಂಪ್ರಕಾಶ್, ಮಾಗಡಿ ವೃತ್ತ ನಿರೀಕ್ಷಕ ಬಿ.ಎಸ್.ಮಂಜುನಾಥ್, ಮಾಗಡಿ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್, ಕುದೂರು ಸಬ್ ಇನ್ಸ್ಪೆಕ್ಟರ್ ಟಿ.ಎಚ್ .ಮಂಜುನಾಥ್ ಅವರಿಗೆ ತನಿಖೆ ಕುರಿತು ಮಾರ್ಗದರ್ಶನ ಮಾಡಿದರು.
ಈ ಪ್ರಕರಣ ಕುರಿತು ಮಾತನಾಡಿದ ರವಿ.ಡಿ. ಚನ್ನಣ್ಣನವರ್, ಇದೊಂದು ಗಂಭೀರ ಪ್ರಕರಣವಾಗಿದ್ದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಅವರು ರಜೆಯಲ್ಲಿರುವ ಕಾರಣ ತನಿಖೆ ಜವಾಬ್ದಾರಿ ನಮ್ಮ ಮೇಲಿದೆ. ಈ ಪ್ರಕರಣ ಸಂಬಂಧ ಜಿಲ್ಲೆಯ ಪೊಲೀಸ್ ಅಧಿಕಾರಿಗಳಲ್ಲಿ ಮಾಹಿತಿ ಸಂಗ್ರಹಿಸಿದ್ದೇನೆ. ಯಾವುದೇ ಕಾರಣಕ್ಕೂ ಆರೋಪಿಗಳು ತಪ್ಪಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದರು.
Comments are closed.