ಕರ್ನಾಟಕ

ರಾಜ್ಯದಲ್ಲಿ ಕೊರೋನಾ ಕುರಿತು ತಜ್ಞರು ಹೇಳುವುದೇನು?

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದರೂ ಮತ್ತೊಂದು ಕಡೆ ಚೇತರಿಕೆ ಪ್ರಮಾಣ ಅಧಿಕವಾಗುತ್ತಿದ್ದು, ಮರಣ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತಿದೆ. ಮರಣ ಪ್ರಮಾಣವನ್ನು ಕಡಿಮೆ ಮಾಡುವ ದೀರ್ಘಕಾಲೀನ ಗುರಿಯನ್ನು ಪೂರೈಸುವವರೆಗೆ ಹೆಚ್ಚಿನ ಸಂಖ್ಯೆಯ ಸಕ್ರಿಯ ಪ್ರಕರಣಗಳು ಕೆಟ್ಟದ್ದಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಕಾಣಿಸಿಕೊಂಡ ಕೊರೋನಾ ನಂತರ ವ್ಯಾಪಕ ರೀತಿಯಲ್ಲಿ ಹರಡುತ್ತಿದ್ದು, ಅಕ್ಟೋಬರ್ 9ರವರೆಗೂ 9 ಲಕ್ಷದ 90 ಸಾವಿರದ 269 ಪ್ರಕರಣಗಳು ವರದಿಯಾಗಿವೆ.

ಅಕ್ಟೋಬರ್ 7 ರಂದು ಒಂದೇ ದಿನ ಅತಿ ಹೆಚ್ಚು 10,947 ಪ್ರಕರಣಗಳು ದಾಖಲಾಗಿದ್ದವು. ಆದರೆ, ಸಕ್ರೀಯ ಪ್ರಕರಣಗಳ ಪೈಕಿಯಲ್ಲಿ ಕೇವಲ 873 ಪ್ರಕರಣಗಳು ಮಾತ್ರ ಐಸಿಯುನಲ್ಲಿವೆ.

ಹೆಚ್ಚಿನ ಕೋವಿಡ್-19 ಪರೀಕ್ಷೆ ನಡೆಸಿರುವುದರಿಂದ ಸಕ್ರಿಯ ಪ್ರಕರಣಗಳು ಹೆಚ್ಚಾಗಿವೆ.ಪಾಸಿಟಿವ್ ಪ್ರಕರಣಗಳು ಶೇ.12 ಮತ್ತು 13 ರ ನಡುವೆ ಸ್ಥಿರವಾಗಿದ್ದು, ಸಕ್ರೀಯ ಪ್ರಕರಣಗಳ ಸಂಖ್ಯೆ ಸಮಾನಾಂತರವಾಗಿ ಬೆಳೆಯುತ್ತಿವೆ.ಇದರಿಂದ ಶೀಘ್ರದಲ್ಲಿ ಪತ್ತೆ ಹಚ್ಚಿ ಮರಣ ಪ್ರಮಾಣ ತಗ್ಗಿಸಲು ನೆರವಾಗಲಿದೆ ಎಂದು ಜಯದೇವ ಹೃದ್ರೋಗ ಸಂಶೋಧನಾ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಹೇಳುತ್ತಾರೆ.

ಮರಣ ಪ್ರಮಾಣ ಇಳಿಕೆ: ಮರಣ ಪ್ರಮಾಣವನ್ನು ಶೇ. 1ಕ್ಕಿಂತಲೂ ತಗ್ಗಿಸಬೇಕೆಂಬುದು ರಾಜ್ಯ ಸರ್ಕಾರದ ಗುರಿಯಾಗಿದೆ. ಜುಲೈ 20ರವರೆಗೂ ಶೇ. 2. 08ರಷ್ಟಿದ್ದ ಮರಣ ಪ್ರಮಾಣ ಅಕ್ಟೋಬರ್ 9ರ ವೇಳೆಗೆ ಶೇ. 1.41ಕ್ಕೆ ಕುಸಿದಿದೆ. ಹಿರಿಯ ನಾಗರಿಕರ ಸೋಂಕಿನ ಸಂಖ್ಯೆಯೂ ಕಡಿಮೆಯಾಗಿದೆ.ಇದೊಂದು ಉತ್ತಮ ಬೆಳವಣಿಗೆಯಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಹೆಚ್ಚಿನ ಅರಿವು, ಶೀಘ್ರದಲ್ಲಿಯೇ ಪರೀಕ್ಷೆ ಮತ್ತು ಚಿಕಿತ್ಸೆಯಿಂದ ಮರಣ ಪ್ರಮಾಣ ಕಡಿಮೆಯಾಗಿದೆ ಎಂದು ಕೋವಿಡ್ ಡೆತ್ ಆಡಿಟ್ ಕಮಿಟಿ ಸದಸ್ಯ ಡಾ. ಸತೀಶ್ ಹೇಳಿದ್ದಾರೆ.

ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಕೂಡಲೇ ಪರೀಕ್ಷೆ ನಡೆಸುವುದರಿಂದ ಮುಂದೆಯೂ ಚೇತರಿಕೆ ಪ್ರಮಾಣ ಮತ್ತಷ್ಟು ಸುಧಾರಿಸಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಮಾಡುತ್ತಿರುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಮೂರು ‘ಸಿ’ಗಳನ್ನು ತಡೆಗಟ್ಟಿ, ಜನದಟ್ಟಣೆ, ಮುಚ್ಚಿದ ಸ್ಥಳಗಳು, ಸೋಂಕಿತರ ಸಂಪರ್ಕ ಮತ್ತು ಮಾಸ್ಕ್ ಧರಿಸಿ, ಕೈಗಳನ್ನು ಶುಚಿಗೊಳಿಸಿ, ಅದಷ್ಟು ಅಂತರ ಕಾಪಾಡುವುದರಿಂದ ಸೋಂಕು ಬರದಂತೆ ಎಚ್ಚರ ವಹಿಸಬೇಕೆಂದು ಪಬ್ಲಿಕ್ ಹೆಲ್ತ್ ಪೌಂಡೇಷನ್ ಆಫ್ ಇಂಡಿಯಾದ ಸಾಂಕ್ರಾಮಿಕ ರೋಗ ವಿಭಾಗದ ಮುಖ್ಯಸ್ಥ ಡಾ. ಗಿರಿಧರ್ ಆರ್ ಬಾಬು ಮಾಹಿತಿ ನೀಡಿದ್ದಾರೆ.

Comments are closed.