
ಗಜೇಂದ್ರಗಡ: ಕ್ಯಾನ್ಸರ್ ಕಾಯಿಲೆಯ ನಿವಾರಣೆಗೆ ಉಪಯೋಗಿಸುವ ಸಸ್ಯವಾದ ಅಮೃತಾಂಜನ ಗಡ್ಡೆಯೊಂದು ಗಜೇಂದ್ರಗಡ ಗುಡ್ಡದ ಹುಲ್ಲುಗಾವಲಿನಲ್ಲಿ ಕಂಡುಬಂದಿದೆ. ಇದು ಸೆರೋಪೆಜಿಯಾ ಪ್ರಭೇದಕ್ಕೆ ಸೇರಿದ ಸುರುಳಿಯಾಕಾರದ ಸಸ್ಯವಾಗಿದೆ. ಅಪೋಸೈನೆಸಿ ಕುಟುಂಬಕ್ಕೆ ಸೇರಿದ ಸ್ಪೈರಲ್ ಸೆರೋಪೆಜಿಯಾ ಎಂಬ ಅಪರೂಪದ ಸಸ್ಯ ಇದು. ಕನ್ನಡದಲ್ಲಿ ಅಮೃತಾಂಜನ ಗಡ್ಡೆ ಎಂದು ಕರೆಯುತ್ತಾರೆ.
ತಿಳಿ ಹಸಿರು ಮತ್ತು ತಿಳಿ ಗುಲಾಬಿ ಮಿಶ್ರಿತ ವರ್ಣದಿಂದ ಕೂಡಿದ್ದು, ಕೊಳವೆ ಆಕಾರದ ರಚನೆ ಹೊಂದಿರುವ ಹೂವಿನ ದಳಗಳು ನೀಳವಾಗಿ ಬೆಳೆದು ತುದಿಯಲ್ಲಿ ಸುರುಳಿಗಟ್ಟುತ್ತದೆ. ಆದ್ದರಿಂದ ಇದಕ್ಕೆ ಸುರುಳಿ ಸೆರೋಪೆಜಿಯಾ ಎನ್ನುತ್ತಾರೆ.
ವಿಶ್ವದಲ್ಲಿ 244 ವಿವಿಧ ಸೆರೋಪೆಜಿಯಾ ಪ್ರಭೇದಗಳನ್ನು ಗುರುತಿಸಲಾಗಿದೆ. ಭಾರತದಲ್ಲಿ ಈ ಪ್ರಭೇದದ 52 ಜಾತಿಯ ಸಸ್ಯ ಸಂಕುಲವಿದ್ದು, ಬಹುಪಾಲು ಸೆರೋಪೆಜಿಯಾ ಪ್ರಭೇದಗಳು ದಕ್ಷಿಣ ಆಫ್ರಿಕಾ, ಕೀನ್ಯಾ, ಮಡಗಾಸ್ಕರ್ ಮತ್ತು ಭಾರತದ ಕಾಡುಗಳಲ್ಲಿ ಕಂಡುಬರುತ್ತದೆ.
………………………………
ಈ ಪ್ರಭೇದದ ಸಸ್ಯಗಳಲ್ಲಿನ ‘ಸರ್ಪೆಜಿನ್’ ಅಂಶವು ಕ್ಯಾನ್ಸರ್ ಕಾಯಿಲೆಯ ನಿವಾರಣೆಗೆ ಉಪಯೋಗಿಸಲಾಗುತ್ತದೆ. ರಾಜ್ಯದಲ್ಲಿ ಈ ಸಸ್ಯವು ಬನ್ನೇರುಘಟ್ಟ, ಹಾಸನ ಮತ್ತು ತುಮಕೂರಿನ ಗುಡ್ಡದ ಹುಲ್ಲುಗಾವಲು ಪ್ರದೇಶದಲ್ಲಿ ಕಂಡುಬರುತ್ತದೆ. ಕೃಷಿ ಮತ್ತು ಕೈಗಾರಿಕೆ ಉದ್ದೇಶಕ್ಕಾಗಿ ಗುಡ್ಡ, ಅರಣ್ಯಗಳನ್ನು ನಾಶ ಮಾಡುತ್ತಿರುವುದರಿಂದ ಇಂತಹ ಅಪರೂಪದ ಮೂಲಿಕೆಗಳು ಅವಸಾನದತ್ತ ಸಾಗಿವೆ.
| ಮಂಜುನಾಥ ನಾಯಕ, ಜೀವವೈವಿಧ್ಯ ಸಂಶೋಧಕ
Comments are closed.