ಬೆಂಗಳೂರು(ಆ.03): ಇತ್ತೀಚೆಗೆ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ತಲೆಮರೆಸಿಕೊಂಡಿದ್ದ ಡ್ರೋನ್ ಪ್ರತಾಪ್ ಬೆಂಗಳೂರು ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದರು. ಸಾಂಸ್ಕೃತಿಕ ನಗರಿ ಮೈಸೂರಿನಿಂದ ಡ್ರೋನ್ ಪ್ರತಾಪ್ನನ್ನು ಬೆಂಗಳೂರಿಗೆ ಕರೆ ತಂದಿದ್ದ ಪೊಲೀಸರು ಸ್ಟಾರ್ ಹೋಟೆಲ್ವೊಂದರಲ್ಲಿ ಕ್ವಾರಂಟೈನ್ ಮಾಡಿದ್ದರು. ಇಂದಿಗೆ ಕ್ವಾರಂಟೈನ್ ಅವಧಿ ಮುಗಿದಿದೆ. ಹೀಗಾಗಿ ಸಿವಿಲ್ ಡಿಫೆನ್ಸ್ ಕಮಾಂಡೆಂಟ್ ಚೇತನ್ ಕುಮಾರ್ ಡ್ರೋನ್ ಪ್ರತಾಪ್ ವಿಚಾರಣೆ ನಡೆಸಿದರು.
ಡ್ರೋನ್ ಪ್ರತಾಪ್ ವಿಚಾರಣೆ ವೇಳೆ ಚೇತನ್ ಕುಮಾರ್ ಕ್ವಾರಂಟೈನ್ ಉಲ್ಲಂಘಿಸಿದ ಬಳಿಕ ಬೆಂಗಳೂರಿನಿಂದ ಮೈಸೂರಿಗೆ ಹೋಗಲು ಯಾರು ಸಹಕರಿಸಿದರು ಎಂಬ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಚೇತನ್ ಕುಮಾರ್ ಅವರಿಗೆ ವಿಚಾರಣೆಗೆ ಸರಿಯಾಗಿ ಸಹಕರಿಸದೇ ಡ್ರೋನ್ ಪ್ರತಾಪ್ ಉಡಾಫೆ ತೋರಿದ್ದಾನೆ.
ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಸಿವಿಲ್ ಡಿಫೆನ್ಸ್ ಕಮಾಂಡೆಂಟ್ ಚೇತನ್ ಕುಮಾರ್, ಡ್ರೋನ್ ಪ್ರತಾಪ್ ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಯಾವುದೇ ಟಿವಿ ಕಾರ್ಯಕ್ರಮಕ್ಕೆ ಹೋಗಿದ್ದರು. ಹಾಗಾಗಿ ಇವರನ್ನು ಬಂಧಿಸಿ ಸ್ಟಾರ್ ಹೋಟೆಲ್ವೊಂದರಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಿದ್ದೆವು. ಹೋಟೆಲ್ನಲ್ಲಿ ಕ್ವಾರಂಟೈನ್ ಆದಾಗಲೂ ಇವರು ನಿಯಮ ಉಲ್ಲಂಘನೆ ಮಾಡಿದ್ದಾರೆ. ಆದ್ದರಿಂದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಿದ್ದೇವೆ ಎಂದರು.
ಇನ್ನು, ತಾನು ಕ್ವಾರಂಟೈನ್ ಆಗುದ್ದ ಸ್ಟಾರ್ ಹೋಟೆಲ್ಗೆ ತನ್ನ ವಕೀಲರನ್ನು ಕರೆಸಿಕೊಂಡು ಡ್ರೋನ್ ಪ್ರತಾಪ್ 2 ಗಂಟೆಗಳ ಕಾಲ ಚರ್ಚಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಕ್ವಾರಂಟೈನ್ ನಿಮಯ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.
ಸದ್ಯ ಡ್ರೋನ್ ಪ್ರತಾಪ್ ಕ್ವಾರಂಟೈನ್ ಅವಧಿ ಮುಗಿದಿದೆ. ಈಗಾಗಲೇ ಚೇತನ್ ಕುಮಾರ್ ಅವರು ಕೂಡ ಡ್ರೋನ್ ಪ್ರತಾಪ್ ವಿಚಾರಣೆ ಮಾಡಿದ್ದಾರೆ. ಇವರ ಆದೇಶದ ಮೇರೆಗೆ ತಲಘಟ್ಟಪುರ ಪೊಲೀಸರು ಡ್ರೋನ್ ಪ್ರತಾಪ್ನನ್ನು ವಶಕ್ಕೆ ಪಡೆಯಲು ಮುಂದಾಗಿದ್ಧಾರೆ. ಈ ಮುನ್ನ ಮತ್ತೊಮ್ಮೆ ಡ್ರೋನ್ ಪ್ರತಾಪ್ ಕೊರೋನಾ ಟೆಸ್ಟ್ ಮಾಡಿಸಲಾಗಿದೆ. ರಿಪೋರ್ಟ್ ನೆಗಿಟಿವ್ ಬಂದಿದೆ.
ಡ್ರೋನ್ ಪ್ರತಾಪ್ ಕಳೆದ ತಿಂಗಳು ಜುಲೈ 15 ರಂದು ಹೈದರಾಬಾದ್ನಿಂದ ಬೆಂಗಳೂರಿಗೆ ಬಂದಿದ್ದ. ಹೊರ ರಾಜ್ಯದಿಂದ ಬಂದ ಹಿನ್ನೆಲೆಯಲ್ಲಿ ನಗರದ ತಲಘಟ್ಟಪುರದ ಅಪಾರ್ಟ್ ಮೆಂಟ್ವೊಂದರಲ್ಲಿ ಪ್ರತಾಪ್ ಹೋಂ ಕ್ವಾರಂಟೈನ್ ಆಗಿದ್ದ. ನಿಯಮದ ಪ್ರಕಾರ ಆತ 14ದಿನಗಳ ಕಾಲ ಕ್ವಾರಂಟೈನ್ ಆಗಬೇಕಿತ್ತು. ಆದರೆ, ಕ್ವಾರಂಟೈನ್ ಆದ ಮರುದಿನವೇ ಖಾಸಗಿ ಚಾನೆಲ್ನ ಸಂದರ್ಶನದಲ್ಲಿ ಪ್ರತಾಪ್ ಪಾಲ್ಗೊಂಡಿದ್ದ.
ಪ್ರತಾಪ್ ಕ್ವಾರಂಟೈನ್ ನಿಯಮಗಳ ಸ್ಪಷ್ಟ ಉಲ್ಲಂಘನೆ ಮಾಡಿದ್ದಾನೆ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ, ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಡ್ರೋನ್ ಪ್ರತಾಪ್ಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
Comments are closed.