ಕರ್ನಾಟಕ

ರಾಜ್ಯದಲ್ಲಿ ಇಂದು (ರವಿವಾರ) 5199 ಕೊರೋನಾ ಪ್ರಕರಣಗಳು ಪತ್ತೆ: 82 ಮಂದಿ ಸಾವು

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ಆರ್ಭಟ ಮುಂದುವರಿದಿದೆ. ಕಳೆದ ನಾಲ್ಕು ದಿನಗಳಿಂದ ದಿನವೊಂದರಲ್ಲಿ ಐದು ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರಿಂದ ರಾಜ್ಯದ ಸೋಂಕಿತರ ಸಂಖ್ಯೆ ಬರೋಬ್ಬರಿ 96 ಸಾವಿರದ ಗಡಿ ತಲುಪಿದೆ.

ಭಾನುವಾರ ರಾಜ್ಯದಲ್ಲಿ ಒಟ್ಟು 5199 ಪ್ರಕರಣಗಳು ವರದಿಯಾಗಿದ್ದು, ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 96,141ಕ್ಕೆ ಏರಿಕೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೋನಾ ಆರ್ಭಟಕ್ಕೆ ಕಳೆದ 24 ಗಂಟೆಗಳಲ್ಲಿ 82 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 1878 ಮಂದಿ ಕೋವಿಡ್‌ಗೆ ಬಲಿಯಾಗಿದ್ದು, 35838 ಮಂದಿ ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದಲ್ಲಿ 58417 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 632 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ರಾಜಧಾನಿ ಬೆಂಗಳೂರು ನಗರದಲ್ಲಿ 1950 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 45453ಕ್ಕೇರಿಕೆಯಾಗಿದೆ. ಬೆಂಗಳೂರಿನಲ್ಲಿ ಮಹಾಮಾರಿಗೆ ಇಂದು 29 ಮಂದಿ ಬಲಿಯಾಗಿದ್ದಾರೆ.

ಬಳ್ಳಾರಿಯಲ್ಲಿ 579, ಮೈಸೂರಿನಲ್ಲಿ 230, ಬೆಂಗಳೂರು ಗ್ರಾಮಾಂತರದಲ್ಲಿ 213, ದಕ್ಷಿಣ ಕನ್ನಡದಲ್ಲಿ 199, ಉಡುಪಿಯಲ್ಲಿ 169, ಧಾರವಾಡದಲ್ಲಿ 165, ಹಾಸನದಲ್ಲಿ 164, ಬೆಳಗಾವಿಯಲ್ಲಿ 163, ಕಲಬುರಗಿಯಲ್ಲಿ 152, ವಿಜಯಪುರದಲ್ಲಿ 132, ರಾಯಚೂರಿನಲ್ಲಿ 131 ಪ್ರಕರಣಗಳು ವರದಿಯಾಗಿವೆ.

ದಾವಣಗೆರೆಯಲ್ಲಿ 89, ಉತ್ತರಕನ್ನಡದಲ್ಲಿ 85, ಚಿಕ್ಕಬಳ್ಳಾಪುರದಲ್ಲಿ 81, ಬೀದರ್‌ನಲ್ಲಿ 77, ಮಂಡ್ಯದಲ್ಲಿ 64, ಗದಗ, ಚಿಕ್ಕಮಗಳೂರಿನಲ್ಲಿ ತಲಾ 61, ಯಾದಗಿರಿಯಲ್ಲಿ 56, ಚಿತ್ರದುರ್ಗದಲ್ಲಿ 53, ಕೋಲಾರದಲ್ಲಿ 47, ತುಮಕೂರಿನಲ್ಲಿ 46, ಬಾಗಲಕೋಟೆಯಲ್ಲಿ 41, ಕೊಪ್ಪಳದಲ್ಲಿ 40, ಶಿವಮೊಗ್ಗದಲ್ಲಿ 39, ಚಾಮರಾಜನಗರದಲ್ಲಿ 28, ಕೊಡಗಿನಲ್ಲಿ 20, ರಾಮನಗರದಲ್ಲಿ 15 ಪ್ರಕರಣಗಳು ವರದಿಯಾಗಿವೆ.

ಕಳೆದೊಂದು ದಿನದಲ್ಲಿ ರಾಜ್ಯಾದ್ಯಂತ 12,531 ಮಂದಿಗೆ ಕ್ಷಿಪ್ರ ಆಂಟಿಜೆನ್‌ ಪರೀಕ್ಷೆ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Comments are closed.