ಬೆಂಗಳೂರು(ಜು.11): ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರ ನಿಯಂತ್ರಣಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಭಾರೀ ಸರ್ಕಸ್ ಮಾಡುತ್ತಿದೆ. ಕೊರೋನಾ ವಿರುದ್ಧ ಹೋರಾಡುವು ಹೇಗೆ ಎಂಬುದನ್ನು ಚರ್ಚಿಸಲು ಸಿಎಂ ಸಾಲುಸಾಲು ಸಭೆಗಳನ್ನು ನಡೆಸುತ್ತಿದ್ದಾರೆ. ಹೀಗಿರುವಾಗಲೇ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆಗೆ ಸಿಎಂ ಯಡಿಯೂರಪ್ಪ ವಿಡಿಯೋ ಕಾನ್ಫ್ರೆನ್ಸ್ಗೆ ಮುಂದಾಗಿದ್ಧಾರೆ.
ಸಿಎಂ ಯಡಿಯೂರಪ್ಪ ತಮ್ಮ ಮನೆಯಿಂದಲೇ ಸೋಮವಾರ ವಿಡಿಯೋ ಕಾನ್ಫ್ರೆನ್ಸ್ ಮೂಲಕ ಜಿಲ್ಲಾಧಿಕಾರಿಗಳ ಸಭೆ ನಡೆಸಲಿದ್ದಾರೆ. ಇದರಲ್ಲೂ ಸೋಂಕು ಹೆಚ್ಚಿರುವ ಜಿಲ್ಲೆಗಳ ಡಿಸಿಗಳೊಂದಿಗೆ ಕೂಲಂಕುಷವಾಗಿ ಚರ್ಚೆ ಮಾಡಲಿದ್ದಾರೆ. ಈ ವೇಳೆ ಎಲ್ಲಾ ಜಿಲ್ಲೆಗಳಲ್ಲಿನ ಸದ್ಯದ ಕೊರೋನಾ ವೈರಸ್ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಲಿದ್ಧಾರೆ.
ಆಯಾ ಜಿಲ್ಲೆಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗಳು ಏನು ಕ್ರಮ ತೆಗೆದುಕೊಂಡಿದ್ದಾರೆ? ಸೋಂಕಿನ ಪ್ರಮಾಣ ಎಷ್ಟಿದೆ? ಕೋವಿಡ್-19 ಪೀಡಿತರಿಗೆ ಚಿಕಿತ್ಸೆ ಹೇಗೆ ನೀಡುತ್ತಿದ್ಧಾರೆ? ಎನ್ನುವುದರ ಬಗ್ಗೆ ಡಿಸಿಗಳ ಜತೆ ಸುಧೀರ್ಘ ಸಮಾಲೋಚನೆ ಮಾಡಲಿದ್ಧಾರೆ ಸಿಎಂ.
ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅಂದೇ ಕೆಲವು ಪ್ರಮುಖ ನಿರ್ಧಾರಗಳನ್ನು ಸಿಎಂ ತೆಗೆದುಕೊಳ್ಳಲಿದ್ಧಾರೆ. ಅಂತರ್ ಜಿಲ್ಲಾ ಓಡಾಟದ ನಿರ್ಬಂಧದ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸೋಂಕಿತರ ಓಡಾಟದಿಂದ ಜಿಲ್ಲೆಯಲ್ಲಿ ಕೊರೋನಾ ಹೆಚ್ಚಳದ ವಿಷಯ ಕಂಡು ಬಂದಲ್ಲಿ ಅಂತರ್ ಜಿಲ್ಲಾ ಪ್ರಯಾಣಕ್ಕೆ ಬ್ರೇಕ್ ಹಾಕಲಿದ್ದಾರೆ. ಎಷ್ಟು ಟೆಸ್ಟಿಂಗ್ ಸಾಧ್ಯವೋ ಅಷ್ಟು ಮಾಡಿ, ಹಾಗೆಯೇ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ ನೀಡಲಿದ್ದಾರೆ.
ಕರ್ನಾಟಕದಲ್ಲೇ ಅತೀಹೆಚ್ಚು ಕೊರೋನಾ ಕೇಸುಗಳ ದಾಖಲಾಗುತ್ತಿರುವುದು ಬೆಂಗಳೂರಿನಲ್ಲೇ. ವಿರೋಧ ಪಕ್ಷಗಳು ಕೊರೋನಾ ಮಟ್ಟಹಾಕಲು ಬೆಂಗಳೂರನ್ನು ಸಂಪೂರ್ಣ ಲಾಕ್ಡೌನ್ ಮಾಡಿ ಎಂದು ಒತ್ತಾಯಿಸಿವೆ. ಆದರೆ, ಬೆಂಗಳೂರು ನಗರದಲ್ಲಿ ಮತ್ತೊಮ್ಮೆ ಲಾಕ್ಡೌನ್ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿರುವ ಕೊರೋನಾ ತಡೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಭಾರೀ ಸರ್ಕಸ್ ನಡೆಸುತ್ತಿದೆ.
ಇದನ್ನೂ ಓದಿ: Delhi Coronavirus Updates: ದೆಹಲಿಯಲ್ಲಿ ಕೋವಿಡ್-19 ಕಾವು: ಒಂದೇ ದಿನ 2,089 ಕೇಸ್, 1.10 ಲಕ್ಷದ ಗಡಿ ಸಮೀಪಿಸಿದ ಸೋಂಕಿತರ ಸಂಖ್ಯೆ
ಈ ಮಧ್ಯೆ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಕೊರೋನಾ ಸೋಂಕು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಡಾ ಸುದರ್ಶನ್ ಬಲ್ಲಾಳ್ ನೇತೃತ್ವದ ತಜ್ಞರ ತಂಡ ಅಭಿಪ್ರಾಯಪಟ್ಟಿದೆ. ಸರ್ಕಾರಕ್ಕೆ ಮುಂದಿನ ದಿನಗಳು ಸವಾಲಾಗಿ ಪರಿಣಮಿಸಲಿದೆ ಎಂದು ಹೇಳುತ್ತಿದೆ.
Comments are closed.