ಕರ್ನಾಟಕ

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ಕೊರೋನಾ ಸೋಂಕು

Pinterest LinkedIn Tumblr


ದೇವನಹಳ್ಳಿ: ಇಡೀ ಜಗತ್ತನ್ನ ಕೊರೋನಾ ಮಹಾಮಾರಿ ಕಿತ್ತು ತಿನ್ನುತ್ತಿದೆ. ಜನರನ್ನ ರಕ್ಷಿಸೋಕೆ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಹಗಲಿರುಳು ದುಡಿಯುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ಇವರನ್ನೆಲ್ಲಾ ಸಂಬಾಳಿಸೊ ಜವಾಬ್ದಾರಿ ಹೊತ್ತಿದ್ದು ಜಿಲ್ಲಾಡಳಿತಗಳು. ಯಾರಿಗೆ ಏನೇ ಆದ್ರೂ ತಕ್ಷಣ ಸ್ಪಂದಿಸಿ ಜನರಿಗೆ ಊಟ, ತಿಂಡಿ, ಆಹಾರ ಪದಾರ್ಥ, ದವಸ-ಧಾನ್ಯ ಒದಗಿಸಿದ್ದು, ಸಾರ್ವಜನಿಕರ ಆರೋಗ್ಯ, ಕಷ್ಟಗಳಿಗೆ ಸ್ಪಂದಿಸಿದ್ದು, ಬಿಸಿಲು ಮಳೆ ಎನ್ನದೆ, ರಾತ್ರಿ ಹಗಲ್ಲೆನ್ನದೆ ಜನರಿಗಾಗಿ ಮಿಡಿದದ್ದು ಜಿಲ್ಲಾಡಳಿತಗಳು. ಮಾನವೀಯ ಮೌಲ್ಯಗಳಿಗೆ ಅರ್ಥ ಕಲ್ಪಿಸಿದ್ದು ಇದೇ ಜಿಲ್ಲಾಡಳಿತಗಳೇ.

ಕೊರೋನದಿಂದ ಕ್ರಮೇಣ ಆಸ್ಪತ್ರೆ ಪಾಲಾದ ಸಾರ್ವಜನಿಕರು ಒಂದೆಡೆಯಾದರೆ, ಜನರು ಇನ್ನೊಂದೆಡೆ ಸಂಕಷ್ಟಕ್ಕೆ ಸಿಲುಕಿದ ಕೋಟ್ಯಾಂತರ ಜನರ ಹಸಿವು, ಬವಣೆ ನೀಗಿಸುವಲ್ಲಿ ಜಿಲ್ಲಾಡಳಿತ ನೇತೃತ್ವದ ಕಂದಾಯ ಇಲಾಖೆ, ತಾಲ್ಲೂಕು ಆಡಳಿತ ಹಗಲು ರಾತ್ರಿ ಎನ್ನದೆ ಜನರ ಜೀವ ಉಳಿಸಲು ತಮ್ಮ ಜೀವ ಲೆಕ್ಕಿಸದೆ ಮಾಡಿದ ನಿಸ್ವಾರ್ಥ ಸೇವೆಯಿಂದಲೇ ಕೊರೋನಾವನ್ನು ತಕ್ಕಮಟ್ಟಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ ಎಂದ್ರೆ ತಪ್ಪಾಗಲಾರದು. ಮೂರು ತಿಂಗಳ ಕೊರೋನ ವಿರುದ್ದದ ಹೋರಾಟದಲ್ಲಿ ಅದೆಷ್ಟೋ ಅಧಿಕಾರಗಳಿಗೆ ಕೊರೋನ ಸೊಂಕು ತಗುಲಿದ್ದು ಜೀವ ಉಳಿಸುವ ಪ್ರಯತ್ನದಲ್ಲಿ ಪೊಲೀಸರು, ಆಶಾ ಕಾರ್ಯಕರ್ತೆಯರಿಗೂ ತಗುಲಿದ್ದ ಸೋಂಕು ಇದೀಗ ಜಿಲ್ಲಾಧಿಕಾರಿ ಕಛೇರಿ ಹೊಕ್ಕಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯ ದೇಹ ಸೇರಿದೆ.

ವಿದೇಶದಿಂದ 48 ವಿಮಾನಗಳಲ್ಲಿ ಬಂದ ಸುಮಾರು 8,800 ಜನರ ಸ್ವಾಬ್ ಟೆಸ್ಟ್, ಥರ್ಮಲ್ ಸ್ಕ್ರೀನಿಂಗ್, ಕ್ವಾರೆಂಟೇನ್ ಸೇರಿ ಸೂಕ್ತ ವ್ಯವಸ್ಥೆಯನ್ನ ಜಿಲ್ಲಾಧಿಕಾರಿಗಳು ಕಲ್ಪಿಸಿದ್ದರು. ದೇಶೀ ವಿಮಾನಗಳ ಹಾರಾಟದ ಹೊಣೆ ಹೊತ್ತಿದ್ದ ಜಿಲ್ಲಾಧಿಕಾರಿಗಳು ಸಾರ್ವಜನಿಕರ ರಕ್ಷಣೆ ಮಾಡಿದ್ದಾರೆ. ಲಾಕ್ ಡೌನ್ ಸಡಿಲಿಕೆ ನಂತರ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ಭಾಗಗಳಲ್ಲಿ ಸೊಂಕಿತರು ಹೆಚ್ಚಾಗಿದ್ದರೂ ದೃತಿಗೆಡದೆ ಕೊರೋನ ನಿಗ್ರಹಕ್ಕೆ ತಂಡ ಕಟ್ಟಿಕೊಂಡು ಶ್ರಮಿಸಿದ ಜಿಲ್ಲೆಯ ಹಿರಿಯ ಅಧಿಕಾರಿಗೆ ಕೊರೋನಾ ಸೋಂಕು ತಗುಲಿರುವುದು ಹಲವರಿಗೆ ಆತಂಕ ಮೂಡಿಸಿದೆ. ಜಿಲ್ಲಾಧಿಕಾರಿಯವರ ಮನೆಯವರು, ಸಹೋದ್ಯೋಗಿಗಳು ಸೇರಿ 120 ಹೆಚ್ಚು ಜನರಿಗೆ ಪರೀಕ್ಷೆಗೆ ಒಳಪಡಿಸಿ, ಜಿಲ್ಲಾಡಳಿತ ಭವನವನ್ನ ಸ್ಯಾನಿಟೈಸ್ ಮಾಡಲಾಗಿದೆ.

ಜಿಲ್ಲೆಯ ಹೊಣೆ ಹೊತ್ತು ಕಣ್ಣಲ್ಲಿ ಕಣ್ಣಿಟ್ಟು ಜಾಗರೂಕತೆಯಿಂದ ಕಾಪಾಡಿದ ಜಿಲ್ಲಾಧಿಕಾರಿಗಳು ಬೇಗ ಗುಣಮುಖರಾಗಿ ಕ್ಷೇಮವಾಗಿ ಹಿಂದಿರುಗಲಿ ಎಂದು ಸಾರ್ವಜನಿಕರು ಪ್ರಾರ್ಥನೆ ಮಾಡಿದ್ದಾರೆ.

Comments are closed.