ಕರ್ನಾಟಕ

ಕಾಫಿ ಡೇ ಸಿದ್ದಾರ್ಥ ಮಗನೊಂದಿಗೆ ಡಿಕೆ ಶಿವಕುಮಾರ್‌ ಪುತ್ರಿ ವಿವಾಹ ಮಾತುಕತೆ!

Pinterest LinkedIn Tumblr


ಬೆಂಗಳೂರು: ಡಿ.ಕೆ.ಶಿವಕುಮಾರ್‌ ಅವರ ಹಿರಿಯ ಪುತ್ರಿ ಐಶ್ವರ್ಯ ಹಾಗೂ ಎಸ್‌.ಎಂ.ಕೃಷ್ಣ ಅವರ ಮೊಮ್ಮಗ, ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ.ಸಿದ್ಧಾರ್ಥ ಹೆಗ್ಡೆ ಅವರ ಪುತ್ರ ಅಮಾರ್ತ್ಯ ಹೆಗ್ಡೆ ಅವರ ವಿವಾಹ ಬಂಧನ ನಿಶ್ಚಯವಾಗಿದೆ ಎಂದು ಹೇಳಲಾಗಿದೆ.

ಅಮೆರಿಕದಲ್ಲಿ ಶಿಕ್ಷಣ ಪಡೆದಿರುವ 26 ವರ್ಷದ ಅಮಾತ್ರ್ಯ ಅವರು ಸದ್ಯ ತಾಯಿ ಮಾಳವಿಕಾ ಅವರೊಂದಿಗೆ ಕಂಪನಿಯ ವ್ಯವಹಾರ ನಿರ್ವಹಿಸುತ್ತಿದ್ದಾರೆ. ಎಂಜಿನಿಯರಿಂಗ್‌ ಪದವೀಧರೆಯಾದ 22 ವರ್ಷದ ಐಶ್ವರ್ಯ ಅವರು ತಂದೆ ಡಿ.ಕೆ.ಶಿವಕುಮಾರ್‌ ಸ್ಥಾಪಿಸಿರುವ ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

ಮದುವೆ ಮಾತುಕತೆ ಅಂತಿಮ ಹಂತಕ್ಕೆ ತಲುಪಿದ್ದು, ಈ ವರ್ಷಾಂತ್ಯದೊಳಗೆ ವಿವಾಹ ಕಾರ್ಯ ನೆರವೇರಲಿದೆ ಎಂದು ಎರಡೂ ಕುಟುಂಬಗಳ ಆಪ್ತ ಮೂಲಗಳು ಹೇಳಿವೆ.

ಎಸ್‌ ಎಂ ಕೃಷ್ಣ ಅವರ ಜತೆಗೆ ಮಾತ್ರವಲ್ಲದೆ, ಅವರ ಅಳಿಯ ಸಿದ್ದಾರ್ಥ ಹಾಗೂ ಡಿ.ಕೆ.ಶಿವಕುಮಾರ್‌ ಮಧ್ಯೆ ಸುದೀರ್ಘ ಸ್ನೇಹ-ಸಂಬಂಧವಿತ್ತು. ಸಿದ್ಧಾರ್ಥ ಅವರು ಕಳೆದ ವರ್ಷದ ಜುಲೈನಲ್ಲಿ ದುರಂತ ಸಾವಿಗೆ ತುತ್ತಾಗುವ ಮುನ್ನವೇ ಎರಡೂ ಕುಟುಂಬಗಳ ಮಧ್ಯೆ ವಿವಾಹ ಸಂಬಂಧದ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಎರಡೂ ಕುಟುಂಬಗಳು ಕಳೆದ ಭಾನುವಾರ ಡಿ.ಕೆ.ಶಿವಕುಮಾರ್‌ ನಿವಾಸದಲ್ಲಿ ಒಟ್ಟಿಗೆ ಸೇರಿ ಎಸ್‌.ಎಂ.ಕೃಷ್ಣ ಅವರ ಉಪಸ್ಥಿತಿಯಲ್ಲಿ ಮದುವೆ ಮಾತುಕತೆ ಪೂರ್ಣಗೊಳಿಸಿವೆ ಎಂದು ಮೂಲಗಳು ಹೇಳಿವೆ.

”ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಎಲ್ಲವೂ ಭಗವಂತನ ನಿರ್ಧಾರ. ಸಿದ್ಧಾರ್ಥ ಅವರ ನಿಧನವಾಗಿ ವರ್ಷ ತುಂಬುವವರೆಗೆ ನಾವು ಕಾಯಬೇಕಿದೆ. ಸಂಪ್ರದಾಯದಂತೆ ಕುಟುಂಬ ಸದಸ್ಯರೊಬ್ಬರ ನಿಧನದ ವರ್ಷದವರೆಗೆ ಯಾವುದೇ ಶುಭ ಸಮಾರಂಭಗಳು ನಡೆಯುವಂತಿಲ್ಲ,” ಎಂದು ಡಿ.ಕೆ. ಶಿವಕುಮಾರ್‌ ‘ವಿಕ’ ಸೋದರ ಸಂಸ್ಥೆ ಟೈಮ್ಸ್ ಆಫ್‌ ಇಂಡಿಯಾಗೆ ಪ್ರತಿಕ್ರಿಯಿಸಿದ್ದಾರೆ.

Comments are closed.