ಕರ್ನಾಟಕ

ಲಾಕ್‌ಡೌನ್‌ 5.0 ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರಕಾರ

Pinterest LinkedIn Tumblr


ಬೆಂಗಳೂರು: ಜೂನ್‌ 1ರಿಂದ ಪ್ರಾರಂಭವಾಗುವ ಲಾಕ್‍ಡೌನ್ 5.0ರ ಮಾರ್ಗಸೂಚಿಯನ್ನು ರಾಜ್ಯ ಸರಕಾರ ಪ್ರಕಟಿಸಿದೆ. ಶನಿವಾರ ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಯನ್ನು ಬಹಳ ಕಟ್ಟುನಿಟ್ಟಾಗಿ ರಾಜ್ಯದಲ್ಲಿ ಜಾರಿ ತರಲಾಗುತ್ತಿದೆ. ಜೂನ್‌ 30ರವರೆಗೂ ಲಾಕ್‌ಡೌನ್‌ ಮುಂದುವರೆಯಲಿದ್ದು, ಹಂತ-ಹಂತವಾಗಿ ಅನ್‌ಲಾಕ್‌ ಮಾಡಲಾಗುವುದು ಎಂದು ರಾಜ್ಯ ಸರಕಾರ ತಿಳಿಸಿದೆ.

ಜೂನ್ 8ರಿಂದ ದೇವಸ್ಥಾನ, ಮಸೀದಿ, ಚರ್ಚ್ ತೆರೆಯಲು ಸರಕಾರ ಅವಕಾಶ ನೀಡಿದೆ. ಇವುಗಳ ಜೊತೆ ಶಾಪಿಂಗ್‌ ಮಾಲ್‌ಗಳು, ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಇತರ ಆತಿಥ್ಯ ಚುಟವಟಿಕೆಗಳು ಜೂನ್‌ 8ರಿಂದಲೇ ಮರುಪ್ರಾರಂಭವಾಗಲಿವೆ. ಇನ್ನು, ಜುಲೈವರೆಗೂ ಶಾಲಾ-ಕಾಲೇಜುಗಳ ಪುನರಾರಂಭಕ್ಕೆ ಸರಕಾರ ಅನುಮತಿ ನೀಡಿಲ್ಲ.

ಥಿಯೇಟರ್‌, ಮೆಟ್ರೋ ರೈಲು, ಜಿಮ್‌, ಸ್ವಿಮ್ಮಿಂಗ್‌ ಫೂಲ್‌ಗಳನ್ನು ತೆರೆಯಲು ಅವಕಾಶ ನೀಡಿಲ್ಲ. ಪರಿಸ್ಥಿತಿ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸರಕಾರ ತಿಳಿಸಿದೆ. ಕೇಂದ್ರದ ಮಾರ್ಗಸೂಚಿಯಂತೆ ರಾತ್ರಿ ಕರ್ಫ್ಯೂವನ್ನು ರಾಜ್ಯದಲ್ಲಿಯೂ ಸಡಿಲಿಕೆ ಮಾಡಲಾಗಿದೆ. ಜೂನ್‌ 1 ರಿಂದ 30ರವರೆಗೂ ರಾತ್ರಿ 9 ರಿಂದ ಬೆಳಗ್ಗೆ 5 ರವರಗೆ ಕರ್ಫ್ಯೂ ಇರಲಿದೆ.

ಇನ್ನು, ಮದುವೆ ಸಮಾರಂಭಗಳಿಗೆ 50 ಜನರು ಹಾಗೂ ಅಂತ್ಯ ಸಂಸ್ಕಾರಗಳಿಗೆ 20 ಜನರ ಮಿತಿಯನ್ನು ರಾಜ್ಯದಲ್ಲೂ ಮುಂದುವರೆಸಲು ಸರಕಾರ ನಿರ್ಧರಿಸಿದೆ. ಜೂನ್‌ 30ರವರೆಗೂ ಕಂಟೈನ್ಮೆಂಟ್‌ ಝೋನ್‌ಗಳಲ್ಲಿ ಲಾಕ್‌ಡೌನ್‌ ಮುಂದುವರೆಯಲಿದೆ. ರಾಜ್ಯ ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಕಂಟೈನ್ಮೆಂಟ್‌ ಝೋನ್‌ಗಳನ್ನು ಜಿಲ್ಲಾಡಳಿತಗಳು ಗುರುತಿಸಲಿವೆ. ಕಂಟೈನ್ಮೆಂಟ್‌ ಝೋನ್‌ಗಳಲ್ಲಿ ಕೇವಲ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

ರಾಜ್ಯದಲ್ಲಿ ಜೂನ್‌ 8ರಿಂದ ಏನಿರುತ್ತೆ..?
* ಎಲ್ಲ ಧಾರ್ಮಿಕ ಕೇಂದ್ರಗಳು
* ಮಾಲ್, ಹೋಟೆಲ್, ರೆಸ್ಟೋರೆಂಟ್
* ಸಾರಿಗೆ ಬಸ್‍, ಖಾಸಗಿ ವಾಹನಗಳ ಸಂಚಾರ
* ಆಟೋ, ಕ್ಯಾಬ್‌ಗಳ ಸಂಚಾರ

ಜೂನ್‌ 8ರ ನಂತರವೂ ಏನಿರಲ್ಲ..?
* ಮೆಟ್ರೋ ರೈಲು ಸಂಚಾರ ಇರಲ್ಲ.
* ಸಿನಿಮಾ ಥಿಯೇಟರ್‌, ಜಿಮ್‌ ಸೆಂಟರ್‌, ಸಾರ್ವಜನಿಕ ಈಜುಕೋಳ, ಆಡಿಟೋರಿಯಂಗಳು ಕಾರ್ಯಾರಂಭ ಇಲ್ಲ.
* ಜುಲೈ ತಿಂಗಳವರೆಗೂ ಶಾಲಾ-ಕಾಲೇಜು, ಇತರ ತರಬೇತಿ ಕೇಂದ್ರಗಳು ಬಂದ್‌.
* ಸಾರ್ವಜನಿಕ, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ, ಮನರಂಜನೆ, ಧಾರ್ಮಿಕ ಸಭೆ ಸಮಾರಂಭಗಳಿಗೆ ಅವಕಾಶವಿಲ್ಲ.

Comments are closed.