ಕರ್ನಾಟಕ

ಮರಳಿ ಕಾಪಿನಾಡು ಮೂಡಿಗೆರೆಯಿಂದ ಬೆಂಗಳೂರಿಗೆ ಪ್ರಯಾಣ

Pinterest LinkedIn Tumblr


ಚಿಕ್ಕಮಗಳೂರು: ಕೊರೋನಾದ ಕರಿಛಾಯೆಗೆ ಸಿಕ್ಕಿ ನರಳಾಡಿದವರ ಕಥೆ ನೂರಾರು. ಮಕ್ಕಳನ್ನು ನೋಡಿಕೊಳ್ಳೋರಿಲ್ಲ ಅನ್ನುವವರು, ಅಪ್ಪ-ಅಮ್ಮನನ್ನು ಬಿಟ್ಟು ಬಂದಿದ್ವಿ ಹೋಗೋಕಾಗ್ತಿಲ್ಲ ಅನ್ನೋರಿದ್ದಾರೆ. ಆಫೀಸ್ಸಿನಿಂದ ಮೇಲಿಂದ ಮೇಲೆ ಫೋನ್ ಬರ್ತಿದೆ, ಹೋಗೋಕೆ ಬಸ್ಸಿಲ್ಲ ಅನ್ನೋರಿದ್ದಾರೆ. ನನ್ನ ಹೆಂಡ್ತಿ ಪ್ರಗ್ನೆಂಟ್, ಒಂದು ದಿನಕ್ಕೆ ಅಂತ ಬಂದೆ, 40 ದಿನ ಆದ್ರೂ ಹೋಗೋಕೆ ಆಗ್ತಿಲ್ಲ. ಹೀಗೆ ಎಲ್ಲರದೂ ಒಂದೊಂದು ರೀತಿಯ ಸಂಕಟದ ಕತೆಯಾಗಿದೆ.

ಕಾಫಿನಾಡಲ್ಲಿ ಜನರ ಒತ್ತಡಕ್ಕೆ ಮಣಿದು ಸರ್ಕಾರವೇ ಬಸ್ ಬಿಟ್ಟಿದ್ರಿಂದ, ಬೆಂಗಳೂರಲ್ಲಿ ಬದುಕು ಕಟ್ಟಿಕೊಂಡಿದ್ದ ಉದ್ಯೋಗಿಗಳು ಮರಳಿ ಗೂಡು ಸೇರುವಂತಾಗಿದೆ. ಕಳೆದ ಒಂದೂವರೆ ತಿಂಗಳಿಂದ ಕಾಫಿನಾಡಲ್ಲಿ ಒಂದೇ ಒಂದು ಕೊರೋನ ಕೇಸಿಲ್ಲ. ಮುಂಜಾಗೃತ ಕ್ರಮವಾಗಿ 40 ದಿನಗಳಿಂದ ಜಿಲ್ಲೆ ಸಂಪೂರ್ಣ ಸ್ಥಬ್ಧವಾಗಿತ್ತು. ಈ ಸಮಯದಲ್ಲಿ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದ ಸಾವಿರಾರು ಮಂದಿ ಜಿಲ್ಲೆಗೆ ಬರಬೇಕಾಗಿತ್ತು. ಇದೀಗ ಗ್ರೀನ್ ಜೋನ್ ಜಿಲ್ಲೆಗಳಲ್ಲಿ ಸರ್ಕಾರ ಲಾಕ್ಡೌನ್ ಸಂಪೂರ್ಣ ಸಡಿಲಗೊಳಿಸಿದೆ. ಈ ವೇಳೆ ಬೆಂಗಳೂರು ಬಿಟ್ಟು ಹೊರ ಹೋಗಿದ್ದ ಜನರಿಗೆ ಕೂಡಲೇ ಕೆಲಸಕ್ಕೆ ಬರಬೇಕೆಂದು, ಇಲ್ಲದಿದ್ದರೆ ಕೆಲಸದಿಂದ ತೆಗೆದು ಹಾಕುವುದಾಗಿ ಅನೇಕ ಸಂಸ್ಥೆಗಳು ಸಿಬ್ಬಂದಿಗೆ ಎಚ್ಚರಿಕೆ ನೀಡಿವೆ.

ಆದರೆ, ಜಿಲ್ಲೆಗೆ ಬಂದು ಲಾಕ್ ಆಗಿದ್ದವರು ಮತ್ತೆ ಲಾಕ್ ಆದ್ರು. ಸ್ವಂತ ವಾಹನ ಇದ್ದವರು ಬೆಂಗಳೂರಿಗೆ ವಾಪಸ್ ಹೋದರು. ಆದರೆ, ಇಲ್ಲದವರು ಸರ್ಕಾರಿ ಬಸ್ಸಿಗಾಗಿ ಕಾಯುತ್ತಾ ಕುಳಿತರು. ಜನರ ಸಮಸ್ಯೆಯನ್ನು ಅರಿತ ಸರ್ಕಾರ ಬೆಂಗಳೂರಿಗೆ ತೆರಳುವವರಿಗೆ ಬಸ್ಸುಗಳ ವ್ಯವಸ್ಥೆ ಮಾಡಿದೆ. ಇಂದು ಮೂಡಿಗೆರೆ ತಾಲೂಕಿನಿಂದ ಎರಡು ಸರ್ಕಾರಿ ಬಸ್ಸುಗಳು ಬೆಂಗಳೂರು ಹೊರಟವು. ಇವುಗಳಲ್ಲಿ ಹತ್ತಾರು ಜನ ಬೆಂಗಳೂರಿಗೆ ತೆರಳಿದರು.

ಗರ್ಭಿಣಿ ಹೆಂಡತಿಯನ್ನು ಮನೆಯಲ್ಲೇ ಬಿಟ್ಟು, ಅಮ್ಮನನ್ನು ಊರಿಗೆ ಬಿಡಲು ಬಂದಿದ್ದ ವ್ಯಕ್ತಿಯೊಬ್ಬರು 40 ದಿನಗಳಿಂದ ಚಿಕ್ಕಮಗಳೂರಲ್ಲೇ ಲಾಕ್ ಆಗಿದ್ದರು. ಇಂದು ಬಸ್ ಬಿಟ್ಟಿದ್ದು ಸಂತೋಷವಾಯ್ತು. ಬೆಂಗಳೂರಲ್ಲಿ ನನ್ನ ಹೆಂಡತಿ ಒಬ್ಬಳೇ ಇದ್ದಾಳೆ. ಮನೆ ಮೂರನೇ ಮಹಡಿಯಲ್ಲಿ ಇರೋದು. ಆಸ್ಪತ್ರೆ ಹಾಗೂ ಅಕ್ಕಪಕ್ಕದವರು ನೋಡಿಕೊಳ್ಳುತ್ತಿದ್ದಾರೆ. ಮೊದಲು ಮನೆಗೆ ಹೋಗಬೇಕು ಎಂದು ಹೇಳಿ ಭಾವುಕರಾದರು.

ಜನರು ಅನಿವಾರ್ಯವಾಗಿ ಭವಿಷ್ಯದ ದೃಷ್ಟಿಯಿಂದ ಬೆಂಗಳೂರು ಕಡೆಗೆ ಮುಖ ಮಾಡಲು ನಿರ್ಧರಿಸಿದರೂ ಮೊದಲು ಬಸ್ಸುಗಳ ವ್ಯವಸ್ಥೆ ಇರಲಿಲ್ಲ. ಈ ವೇಳೆ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಅವರು, ಸಂಬಂಧಪಟ್ಟವರ ಜೊತೆ ಮಾತನಾಡಿ ಗ್ರೀನ್ ಝೋನ್ ಜಿಲ್ಲೆಯಿಂದ, ರೆಡ್ ಝೋನ್ ಬೆಂಗಳೂರು ಜಿಲ್ಲೆಗೆ ಬಸ್ ವ್ಯವಸ್ಥೆ ಮಾಡಿ ಮಾಡಿಕೊಟ್ಟರು. ಮೂಡಿಗೆರೆಯಿಂದ ಎರಡು ಬಸ್ಸಿನಲ್ಲಿ ಒಟ್ಟು 68 ಜನ ಬೆಂಗಳೂರು ತಲುಪಿದ್ದಾರೆ. ಎಲ್ಲರಿಗೂ ಚಿಕ್ಕಮಗಳೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಕ್ರೀನಿಂಗ್ ಮಾಡಲಾಯ್ತು. ಪ್ರತಿಯೊಬ್ಬರು ತಮ್ಮ ಗುರುತಿನ ಚೀಟಿಯೊಂದಿಗೆ ಮಾಹಿತಿ ನೀಡಿ, ಸ್ಕ್ರೀನಿಂಗ್​ಗೆ ಒಳಗಾಗಿ ಬೆಂಗಳೂರು ಬಸ್ ಹತ್ತಿದರು.

ಮಾಮೂಲಿ ದಿನಗಳಲ್ಲಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಕೆಂಪು ಬಸ್ಸಿನ ದರ 250 ರಿಂದ 270 ಇರುತ್ತದೆ. ಆದರೆ ಇಂದು ಒಬ್ಬರಿಗೆ 700 ರೂಪಾಯಿ ದರವಿತ್ತು. ಪ್ರಯಾಣಿಕರು ಹಣದ ಬಗ್ಗೆ ಯೋಚಿಸದೇ ತಮ್ಮ ಕರ್ತವ್ಯ-ಜವಾಬ್ದಾರಿಗಳ ಬಗ್ಗೆ ಯೋಚಿಸಿ ಬೆಂಗಳೂರು ಹೊರಟರು.

Comments are closed.