ತುಮಕೂರು: ಕೊರೋನಾ ವೈರಸ್ ಸೋಂಕು ಅಪಾಯ ಮಟ್ಟಕ್ಕೆ ಏರುತ್ತಿರುವಂತಿದೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಇವತ್ತು ಬೆಳಗ್ಗೆ ಒಬ್ಬ ವ್ಯಕ್ತಿ ಕೊರೋನಾ ಸೋಂಕಿನಿಂದ ಬಲಿಯಾಗಿರುವುದು ವರದಿಯಾಗಿದೆ. ಬೆಳಗ್ಗೆ 10:45ಕ್ಕೆ 65 ವರ್ಷದ ವೃದ್ಧರೊಬ್ಬರು ಅಸುನೀಗಿದ್ಧಾರೆ ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಮೃತ ವ್ಯಕ್ತಿಯು ಶಿರಾ ಮೂಲದವರಾಗಿದ್ದು ಮಾರ್ಚ್ 11ರಂದು ದೆಹಲಿಯಿಂದ ಯಶವಂತಪುರಕ್ಕೆ ರೈಲಿನಲ್ಲಿ ಬಂದಿದ್ದರೆನ್ನಲಾಗಿದೆ. ದೆಹಲಿಯ ಜಾಮಿಯಾ ಮಸೀದಿಯಲ್ಲಿ ನಡೆದ ಸಭೆಯಲ್ಲೂ ಇವರು ಭಾಗಿಯಾಗಿದ್ದರು.
ಇವರ ಕುಟುಂಬದಲ್ಲಿ ಒಟ್ಟು 25 ಮಂದಿ ಇದ್ದಾರೆ. ಅವರೆಲ್ಲರನ್ನೂ ಐಸೋಲೇಶನ್ನಲ್ಲಿ ಇಡಲಾಗಿದೆ. ಹಾಗೆಯೇ ಈ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ 33 ಮಂದಿಯ ಸ್ಯಾಂಪಲ್ಗಳನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ.
ತುಮಕೂರಿನಲ್ಲಿ ಕೊರೋನಾಗೆ ಮೊದಲ ಬಲಿ ಇದಾಗಿದೆ. ರಾಜ್ಯದಲ್ಲಿ ಒಟ್ಟು ಮೂವರು ಸಾವನ್ನಪ್ಪಿದಂತಾಗಿದೆ. ದೇಶಾದ್ಯಂತ ಕೊರೋನಾದಿಂದ ಸತ್ತವರ ಸಂಖ್ಯೆ 18ಕ್ಕೆ ಏರಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 700 ದಾಟಿದೆ. ಕೇಂದ್ರ ಆರೋಗ್ಯ ಇಲಾಖೆ ಜಾಲತಾಣದಲ್ಲಿರುವ ಮಾಹಿತಿ ಪ್ರಕಾರ ಈದ 640 ರೋಗಿಗಳಲ್ಲಿ ಕೊರೋನಾ ಸೋಂಕು ಇದೆ.
ವಿಶ್ವಾದ್ಯಂತ ಸಾವಿನ ಪ್ರಮಾಣ 24 ಸಾವಿರದ ಗಡಿ ಮುಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದೆ. ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕ ಎಲ್ಲರಿಗಿಂತ ಮುಂದಿದೆ. ಇಲ್ಲಿ 85 ಸಾವಿರ ಜನರಿಗೆ ಸೋಂಕು ತಗುಲಿದೆ. ಸಾವಿನ ಸಂಖ್ಯೆಯಲ್ಲಿ ಇಟಲಿ ಮುಂದಿದೆ. ಇಲ್ಲಿ 8 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ಧಾರೆ. ಸ್ಪೇನ್ನಲ್ಲಿ ಸಾವಿನ ಸಂಖ್ಯೆ 4,300ರ ಗಡಿ ದಾಟಿದೆ.
Comments are closed.