
ಬೆಂಗಳೂರು(ಫೆ. 27): ಪಾಕಿಸ್ತಾನದ ಪರ ಘೋಷಣೆ ಕೂಗಿದ ಆರೋಪದಲ್ಲಿ ಬಂಧಿತವಾಗಿರುವ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ದ ಹುಬ್ಬಳ್ಳಿ ವಕೀಲರ ಸಂಘ ಹೊರಡಿಸಿದ ನಿರ್ಣಯದ ವಿರುದ್ಧ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನುಮಾರ್ಚ್ 6 ಕ್ಕೆ ಮುಂದೂಡಲಾಗಿದೆ.
ಆರೋಪಿಗಳ ಪರ ವಕಾಲತು ವಹಿಸಲು ಅಡ್ಡಿಪಡಿಸುವವರ ಹೆಸರು ಮತ್ತು ವಿಳಾಸ ನೀಡಿ ಎಂದು ಸೂಚಿಸಿದ ನ್ಯಾಯಪೀಠ, ಅಂಥವರ ವಿರುದ್ಧ ನ್ಯಾಯಾಂಗ ನಿಂದನೆಯ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿತು.
ಕೋರ್ಟ್ ಆವರಣದಲ್ಲಿನ ಘಟನೆ ಬಗ್ಗೆ ಚಿಂತಿತರಾಗಿದ್ದೇವೆ. ವಕೀಲರು ಆರೋಪಿಗಳ ಹಕ್ಕುಗಳ ರಕ್ಷಣೆ ಮಾಡಬೇಕು. ವಕೀಲರೇ ಸಂವಿಧಾನದ ವಿರುದ್ಧ ವರ್ತಿಸುವುದು ಸರಿಯಲ್ಲ. ಆರೋಪಿಗಳ ಪರ ವಕಾಲತ್ತು ವಹಿಸುವ ವಕೀಲರಿಗೆ ಪೊಲೀಸ್ ಭದ್ರತೆ ನೀಡಬೇಕು. ಹಿಂದಿನ ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕು. ಇಂತಹ ಘಟನೆಯಿಂದ ನ್ಯಾಯಾಂಗ ವ್ಯವಸ್ಥೆಯ ಘನತೆಗೆ ಧಕ್ಕೆಯಾಗಿತ್ತದೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ತಿಳಿಸಿದರು.
ವಕೀಲರು ನ್ಯಾಯಾಂಗ ಪ್ರಕ್ರಿಯೆಗೆ ಸಹಕರಿಸುವ ವಿಶ್ವಾಸವಿದ್ದು, ಘೋಷಣೆ ಕೂಗುವವರ, ಅಡ್ಡಿಪಡಿಸುವ ವಕೀಲರ ಹೆಸರು, ವಿಳಾಸ ಪಡೆಯಬೇಕು.ಜಾಮೀನು ಅರ್ಜಿ ಪ್ರಕ್ರಿಯೆ ತ್ವರಿತಗೊಳಿಸಿ ವಕಾಲತ್ತಿಗೆ ಆರೋಪಿಗಳ ಸಹಿ ಪಡೆಯಲು ಅವಕಾಶಕ್ಕೆ ಸೂಚನೆ ನೀಡಲಾಗಿದೆ.
ಹುಬ್ಬಳ್ಳಿಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ಮೂವರು ವಿದ್ಯಾರ್ಥಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೂವರು ಆರೋಪಿಗಳನ್ನು ಇಂದು ಹುಬ್ಬಳ್ಳಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಮಾರ್ಚ್ 2ರವರೆಗೆ ಇವರನ್ನು ನ್ಯಾಯಾಂಗ ಬಂಧನದಲ್ಲಿರಿಸುವಂತೆ ಕೋರ್ಟ್ ಆದೇಶ ನೀಡಿದೆ. ತಾಲಿಬ್ ಮಾಜಿದ್, ಆಮಿರ್ ವಾನಿ, ಮತ್ತು ಬಾಷಿತ್ ಸೋಫಿ- ಈ ಮೂವರು ಆರೋಪಿಗಳನ್ನು ಬಂಧಿಸಿ ಹುಬ್ಬಳ್ಳಿಯ ಜೈಲಿಗೆ ರವಾನೆ ಮಾಡಲಾಗಿದೆ.
ಆರೋಪಿಗಳ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಬೇಕಿದೆ ಎಂದ ನ್ಯಾಯಾಲಯವು, ಆರೋಪಿಗಳ ಜಾಮೀನು ಅರ್ಜಿಯ ಪ್ರಕ್ರಿಯೆ ತ್ವರಿತಗೊಳಿಸಬೇಕು. ಆರೋಪಿಗಳ ಸಹಿ ಪಡೆಯಬೇಕು ಎಂದು ಸೂಚಿಸಿ ಮಾರ್ಚ್ 6ಕ್ಕೆ ವಿಚಾರಣೆ ಮುಂದೂಡಿತು. ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದಲ್ಲಿ ನಡೆದ ಅರ್ಜಿ ವಿಚಾರಣೆಯಲ್ಲಿ ಹುಬ್ಬಳ್ಳಿ ವಕೀಲರ ಸಂಘದ ಪದಾಧಿಕಾರಿಗಳು ಹಾಜರಾಗಿದ್ದರು.
Comments are closed.