ಕರ್ನಾಟಕ

ನಾನು ಕರೆದಾಗ ನನ್ನ ಜೊತೆ ದೈಹಿಕ ಸಂಪರ್ಕ ಹೊಂದಬೇಕು

Pinterest LinkedIn Tumblr


ಮೈಸೂರು: ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕು ಮೆಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೇಘನಾ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಪ್ರಿಯತಮ ಮಣಿಕಂಠನ ಕಿರುಕುಳಕ್ಕೆ ಬೇಸತ್ತು ಮೇಘನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಏನಿದು ಪ್ರಕರಣ?
ಮೃತ ಮೇಘನಾ ಮತ್ತು ಮಣಿಕಂಠ ಕೆಲವು ದಿನಗಳಿಂದ ಪ್ರೀತಿಸುತ್ತಿದ್ದರು. ಅಂತರ್ಜಾತಿ ಹಿನ್ನೆಲೆಯಲ್ಲಿ ಮೇಘನಾ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ನಂತರ ಮೇಘನಾ ಒಪ್ಪಿಗೆ ಪಡೆದು ಪೋಷಕರು ಮತ್ತೊಬ್ಬ ಯುವಕನೊಂದಿಗೆ ಮದುವೆ ಫಿಕ್ಸ್ ಮಾಡಿದ್ದರು. ಆತನೊಂದಿಗೆ ನಿಶ್ಚಿತಾರ್ಥ ಕೂಡ ಮಾಡಲಾಗಿತ್ತು. ಈ ವಿಚಾರ ತಿಳಿದ ಮಣಿಕಂಠ ನಿಶ್ಚಿತಾರ್ಥ ಮಾಡಿಕೊಂಡ ಹುಡುಗನಿಗೆ ಮೇಘನಾ ಮತ್ತು ತನ್ನ ಪ್ರೀತಿಯ ವಿಚಾರವನ್ನು ತಿಳಿಸಿದ್ದಾನೆ.

ನೀನು ನನ್ನ ಬಿಟ್ಟು ಬೇರೆಯವರನ್ನು ಮದುವೆಯಾಗಲು ಬಿಡುವುದಿಲ್ಲ. ನಾನು ಕರೆದಾಗ ನೀನು ಬಂದು ನನ್ನ ಜೊತೆ ದೈಹಿಕ ಸಂಪರ್ಕ ಹೊಂದಬೇಕು ಎಂದು ಒತ್ತಾಯಿಸಿದ್ದಾನೆ. ಅಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿರುವ ಹುಡುಗನಿಗೆ ಫೋನ್ ಮಾಡಿ, ನನಗೆ ಈ ಮದುವೆ ಇಷ್ಟವಿಲ್ಲ ಎಂದು ಕ್ಯಾನ್ಸಲ್ ಮಾಡು. ಇಲ್ಲದಿದ್ದರೆ ನಾವಿಬ್ಬರು ಜೊತೆಯಲ್ಲಿ ತೆಗೆಸಿಕೊಂಡಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ನನ್ನ ಮಗಳಿಗೆ ಬೆದರಿಕೆ ಹಾಕಿದ್ದನು ಎಂದು ಮೇಘನಾ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಷ್ಟೇ ಅಲ್ಲದೇ ಮಣಿಕಂಠ ಇಬ್ಬರೂ ಒಟ್ಟಿಗೆ ಇರುವ ಫೋಟೋವನ್ನು ವಾಟ್ಸಪ್‍ಗೆ ಕಳುಹಿಸಿ ಬ್ಲ್ಯಾಕ್‍ಮೇಲ್ ಮಾಡಿದ್ದಾನೆ. ಕೊನೆಗೆ ಇದರಿಂದ ನೊಂದ ಮೇಘನಾ ಮನೆಯವರು ಹಬ್ಬಕ್ಕೆ ಹೋದಾಗ ಯಾರು ಇಲ್ಲದೆ ವೇಳೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಮಣಿಕಂಠ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೊಡ್ಡಕವಲಂದೆ ಪೊಲೀಸ್ ಠಾಣೆಯಲ್ಲಿ ಮೇಘನಾ ತಂದೆ ದೂರು ಸಲ್ಲಿಸಿದ್ದಾರೆ.

ಮೇಘನಾ ತಂದೆ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಮಣಿಕಂಠ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Comments are closed.