ಬೆಂಗಳೂರು: ರಾಜ್ಯ ಉಪಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿದ್ದ 13 ಅನರ್ಹ ಶಾಸಕರ ಪೈಕಿ 11 ಅನರ್ಹ ಶಾಸಕರು ಗೆದ್ದಿದ್ದಾರೆ. ಅನರ್ಹರಾದ ಹೆಚ್ ವಿಶ್ವನಾಥ ಹಾಗೂ ಎಂಟಿಬಿ ನಾಗರಾಜ್ ಉಪಚುನಾವಣೆಯಲ್ಲಿ ಸೋತಿದ್ದಾರೆ. ಈಗ ಇವರಿಗೂ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಡಲು ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ.
ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದವರು ಮಂಗಳವಾರ ಖಾಸಗಿ ಹೊಟೇಲ್ನಲ್ಲಿ ಸಭೆ ನಡೆಸಿದ್ದರು. ರಮೇಶ್ ಜಾರಕಿಹೊಳಿ ಸಭೆಯ ನೇತೃತ್ವ ವಹಿಸಿಕೊಂಡಿದ್ದರು. “ಗೆದ್ದವವರನ್ನು ಮಂತ್ರಿ ಮಾಡುತ್ತೇವೆ ಎಂದು ಬಿಎಸ್ವೈ ಹೇಳಿದ್ದಾರೆ. ಹಾಗಾಗಿ ನಮ್ಮದೇನು ಚಿಂತೆಯಿಲ್ಲ. ಆದರೆ, ಹೆಚ್ ವಿಶ್ವನಾಥ ಹಾಗೂ ಎಂಟಿಬಿ ನಾಗರಾಜ್ ಚುನಾವಣೆಯಲ್ಲಿ ಸೋತಿದ್ದಾರೆ. ಅವರ ಹಿತ ಕೂಡ ನಮಗೆ ಮುಖ್ಯ. ಇವರಿಬ್ಬರಿಗೂ ಸರ್ಕಾರದಲ್ಲಿ ಸೂಕ್ತ ಸ್ಥಾನ-ಮಾನ ಕೊಡಬೇಕು. ಆ ರೀತಿಯ ಒತ್ತಡವನ್ನು ನಾವೆಲ್ಲಾ ಸೇರಿ ತರೋಣ,” ಎನ್ನುವ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.
ಈ ಕುರಿತು ಇಂದು ಬಿಎಸ್ವೈ ಜೊತೆ ಚರ್ಚೆ ನಡೆಸಲು ನೂತನ ಶಾಸಕರು ನಿರ್ಧರಿಸಿದ್ದಾರೆ. ಅಲ್ಲದೆ, ಸಂಪುಟ ವಿಸ್ತರಣೆಗೆ ಸಮಯ ನಿಗದಿ ಬಗ್ಗೆ ಒತ್ತಡ ಹೇರುವುದು ಬೇಡ ಎನ್ನುವ ನಿರ್ಧಾರಕ್ಕೂ ಬರಲಾಗಿದೆ. “ಹೈಕಮಾಂಡ್ ಭೇಟಿ ಮಾಡಿ ತೀರ್ಮಾನ ಮಾಡುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ. ಬಿಎಸ್ವೈ ಅವರನ್ನು ನಂಬಿ ಬಂದಿದ್ದೇವೆ. ಅವರು ಕೈ ಬಿಡುವುದಿಲ್ಲ ಎನ್ನುವ ನಂಬಿಕೆ ಇದೆ,” ಎಂದಿದ್ದಾರೆ ನೂತನ ಶಾಸಕರು.
ಡಿಸೆಂಬರ್ 5ರಂದು ಉಪಚುನಾವಣೆ ನಡೆದಿತ್ತು. ಡಿಸೆಂಬರ್ 9ಕ್ಕೆ ಫಲಿತಾಂಶ ಹೊರ ಬಿದ್ದಿತ್ತು. ಬಿಜೆಪಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರವನ್ನು ಭದ್ರವಾಗಿಸಿಕೊಂಡಿತ್ತು. ಹುಣಸೂರಿನಿಂದ ಸ್ಪರ್ಧಿಸಿದ್ದ ಎಚ್ ವಿಶ್ವನಾಥ್ ಹಾಗೂ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಉಪಚುನಾವಣೆಯಲ್ಲಿ ಸೋತಿದ್ದರು.
Comments are closed.