ಕರ್ನಾಟಕ

ಚುನಾವಣೆಯಲ್ಲಿ ಸೋತ ಅನರ್ಹರಿಗೂ ಸಚಿವ ಸ್ಥಾನಕ್ಕೆ ಬೇಡಿಕೆ; ಸಂಕಷ್ಟದಲ್ಲಿ ಯಡಿಯೂರಪ್ಪ !

Pinterest LinkedIn Tumblr

ಬೆಂಗಳೂರು: ರಾಜ್ಯ ಉಪಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿದ್ದ 13 ಅನರ್ಹ ಶಾಸಕರ ಪೈಕಿ 11 ಅನರ್ಹ ಶಾಸಕರು ಗೆದ್ದಿದ್ದಾರೆ. ಅನರ್ಹರಾದ ಹೆಚ್ ವಿಶ್ವನಾಥ ಹಾಗೂ ಎಂಟಿಬಿ ನಾಗರಾಜ್ ಉಪಚುನಾವಣೆಯಲ್ಲಿ ಸೋತಿದ್ದಾರೆ. ಈಗ ಇವರಿಗೂ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಡಲು ರಮೇಶ್​ ಜಾರಕಿಹೊಳಿ ಮುಂದಾಗಿದ್ದಾರೆ.

ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದವರು ಮಂಗಳವಾರ ಖಾಸಗಿ ಹೊಟೇಲ್​ನಲ್ಲಿ ಸಭೆ ನಡೆಸಿದ್ದರು. ರಮೇಶ್​ ಜಾರಕಿಹೊಳಿ ಸಭೆಯ ನೇತೃತ್ವ ವಹಿಸಿಕೊಂಡಿದ್ದರು. “ಗೆದ್ದವವರನ್ನು ಮಂತ್ರಿ ಮಾಡುತ್ತೇವೆ ಎಂದು ಬಿಎಸ್​​ವೈ ಹೇಳಿದ್ದಾರೆ. ಹಾಗಾಗಿ ನಮ್ಮದೇನು ಚಿಂತೆಯಿಲ್ಲ. ಆದರೆ, ಹೆಚ್ ವಿಶ್ವನಾಥ ಹಾಗೂ ಎಂಟಿಬಿ ನಾಗರಾಜ್ ಚುನಾವಣೆಯಲ್ಲಿ ಸೋತಿದ್ದಾರೆ. ಅವರ ಹಿತ ಕೂಡ ನಮಗೆ ಮುಖ್ಯ. ಇವರಿಬ್ಬರಿಗೂ ಸರ್ಕಾರದಲ್ಲಿ ಸೂಕ್ತ ಸ್ಥಾನ-ಮಾನ ಕೊಡಬೇಕು. ಆ ರೀತಿಯ ಒತ್ತಡವನ್ನು ನಾವೆಲ್ಲಾ ಸೇರಿ ತರೋಣ,” ಎನ್ನುವ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ಈ ಕುರಿತು ಇಂದು ಬಿಎಸ್​ವೈ ಜೊತೆ ಚರ್ಚೆ ನಡೆಸಲು ನೂತನ ಶಾಸಕರು ನಿರ್ಧರಿಸಿದ್ದಾರೆ. ಅಲ್ಲದೆ, ಸಂಪುಟ ವಿಸ್ತರಣೆಗೆ ಸಮಯ ನಿಗದಿ ಬಗ್ಗೆ ಒತ್ತಡ ಹೇರುವುದು ಬೇಡ ಎನ್ನುವ ನಿರ್ಧಾರಕ್ಕೂ ಬರಲಾಗಿದೆ. “ಹೈಕಮಾಂಡ್ ಭೇಟಿ ಮಾಡಿ ತೀರ್ಮಾನ ಮಾಡುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ. ಬಿಎಸ್​​ವೈ ಅವರನ್ನು ನಂಬಿ ಬಂದಿದ್ದೇವೆ. ಅವರು ಕೈ ಬಿಡುವುದಿಲ್ಲ ಎನ್ನುವ ನಂಬಿಕೆ ಇದೆ,” ಎಂದಿದ್ದಾರೆ ನೂತನ ಶಾಸಕರು.

ಡಿಸೆಂಬರ್​ 5ರಂದು ಉಪಚುನಾವಣೆ ನಡೆದಿತ್ತು. ಡಿಸೆಂಬರ್​ 9ಕ್ಕೆ ಫಲಿತಾಂಶ ಹೊರ ಬಿದ್ದಿತ್ತು. ಬಿಜೆಪಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರವನ್ನು ಭದ್ರವಾಗಿಸಿಕೊಂಡಿತ್ತು. ಹುಣಸೂರಿನಿಂದ ಸ್ಪರ್ಧಿಸಿದ್ದ ಎಚ್​​ ವಿಶ್ವನಾಥ್​ ಹಾಗೂ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ಉಪಚುನಾವಣೆಯಲ್ಲಿ ಸೋತಿದ್ದರು.

Comments are closed.