ಕರ್ನಾಟಕ

ಬ್ಲಾಕ್​ಮೇಲ್ ಪ್ರಕರಣ : 6 ವರ್ಷಗಳ ದ್ವೇಷಕ್ಕೆ ಉರುಳಿತು ಯುವಕನ ಹೆಣ

Pinterest LinkedIn Tumblr

ಬೆಂಗಳೂರು : ಮಹಿಳೆಯೊಬ್ಬಳ ಖಾಸಗಿ ವಿಡಿಯೋವನ್ನು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಕೊಂಡಿದ್ದ ಬೆಂಗಳೂರಿನ ನಂದಿನಿ ಲೇಔಟ್​ನ ವ್ಯಕ್ತಿಯೊಬ್ಬ ಆ ವಿಡಿಯೋ ಇಟ್ಟುಕೊಂಡು ದಂಪತಿಯನ್ನು ಬ್ಲಾಕ್​ಮೇಲ್ ಮಾಡುತ್ತಿದ್ದ. ಆತನ ಕಾಟಕ್ಕೆ ಬೇಸತ್ತಿದ್ದ ದಂಪತಿ ಆ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾರೆ.

6 ವರ್ಷಗಳ ಹಿಂದೆ ಸಾವಿತ್ರಿ ಎಂಬ ಮಹಿಳೆ ಸ್ನಾನ ಮಾಡುತ್ತಿರುವ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ನಂದಿನಿ ಲೇಔಟ್​ನ ಸಂತೋಷ್ ಕೊಲೆಯಾದ ವ್ಯಕ್ತಿ. ಸಾವಿತ್ರಿಯ ಖಾಸಗಿ ವಿಡಿಯೋ ಇಟ್ಟುಕೊಂಡು 6 ವರ್ಷಗಳಿಂದ ಹಣಕ್ಕೆ ಬೇಡಿಕೆ ಇಡುತ್ತಿದ್ದ ಸಂತೋಷ್ ಈಗಾಗಲೇ ಸಾಕಷ್ಟು ದುಡ್ಡನ್ನು ಪಡೆದುಕೊಂಡಿದ್ದ. ಮನೆ ಪಕ್ಕದಲ್ಲೇ ವಾಸವಾಗಿದ್ದ ಸಂತೋಷ್​ನ ಕಾಟಕ್ಕೆ ಬೇಸತ್ತಿದ್ದ ಮಂಜುನಾಥ್ ದಂಪತಿ ಆತನನ್ನು ಕೊಲ್ಲಲು ಸಂಚು ರೂಪಿಸಿದ್ದರು. ಹಣ ಕೊಡದೆ ಇದ್ದರೆ ವಿಡಿಯೋ ಹರಿಬಿಡುವುದಾಗಿ ಹೆದರಿಸುತ್ತಿದ್ದ ಸಂತೋಷ್​ಗೆ ದುಡ್ಡು ಕೊಟ್ಟು ಮಂಜುನಾಥ್​ಗೂ ಸಾಕಾಗಿತ್ತು. ಹೀಗಾಗಿ, ಹಣ ತೆಗೆದುಕೊಂಡು ಹೋಗಲು ಸಂತೋಷ್​ನನ್ನು ಬರಲು ಹೇಳಿದ್ದ ಮಂಜು ಮತ್ತು ಸಾವಿತ್ರಿ ಆತನನ್ನು ಕೊಲೆ ಮಾಡಿದ್ದರು.

ಪ್ರಕರಣದ ಹಿನ್ನೆಲೆಯೇನು?: 2004ರಿಂದ ಮಂಜುನಾಥ್ ಮನೆಯ ಪಕ್ಕದಲ್ಲೇ ವಾಸವಾಗಿದ್ದ ಮೃತ ಸಂತೋಷ್ ಆಗಾಗ 5-10 ಸಾವಿರ ರೂ.ಗಳಿಗೆ ಬೇಡಿಕೆ ಇಡುತ್ತಿದ್ದ. ಪ್ರತಿ ತಿಂಗಳು ಸಂಬಳ ಬಂದಾಗ ಮಂಜುನಾಥ್​ಗೆ ವಿಡಿಯೋ ತೋರಿಸಿ ಹಣ ಪಡೆಯುತ್ತಿದ್ದ. ತನ್ನ ಖಾಸಗಿ ವಿಡಿಯೋ ಮಾಡಿಕೊಂಡಿರುವ ವಿಚಾರ ಸಾವಿತ್ರಿಗೂ ಗೊತ್ತಿರಲಿಲ್ಲ. ತನ್ನ ಹೆಂಡತಿಗೆ ಹೇಳಿದರೆ ಆಘಾತವಾಗುತ್ತದೆ ಎಂದು ಮಂಜುನಾಥ್​ ಈ ವಿಷಯವನ್ನು ಪತ್ನಿಗೆ ಹೇಳಿರಲಿಲ್ಲ.

ಇದೇ ತಿಂಗಳ 14ನೇ ತಾರೀಕು ಮತ್ತೆ ಹಣಕ್ಕೆ ಬೇಡಿಕೆಯಿಟ್ಟಾಗ ಮಂಜುನಾಥ್ ತನ್ನ ಹೆಂಡತಿಗೆ ಈ ವಿಷಯ ಹೇಳಿದ್ದ. ಕೈಯಲ್ಲಿ ದುಡ್ಡಿಲ್ಲದ ಕಾರಣ ಭಯಗೊಂಡಿದ್ದ ದಂಪತಿ ಆ ವಿಡಿಯೋವನ್ನು ಸಂತೋಷ್ ಯಾರಿಗಾದರೂ ತೋರಿಸಿದರೆ ಏನು ಮಾಡುವುದೆಂದು ತಲೆಬಿಸಿ ಮಾಡಿಕೊಂಡಿದ್ದರು. ನಂತರ ಇದಕ್ಕೆಲ್ಲ ಅಂತ್ಯ ಹಾಡಲು ಯೋಚಿಸಿದ್ದ ಅವರಿಬ್ಬರು ಸಂತೋಷ್​ಗೆ ಮನೆಗೆ ಬರಲು ಹೇಳಿದ್ದರು. ಆತನನ್ನು ಟಿವಿ ಮುಂದೆ ಕೂರಿಸಿ ರಾಡಿನಿಂದ ಹೊಡೆದು ಸಾಯಿಸಿದ್ದರು. ನಂತರ ಆತನ ಮೃತದೇಹವನ್ನು ಮೂಟೆಯಲ್ಲಿ ಕಟ್ಟಿಕೊಂಡು ಆಟೋದಲ್ಲಿ ಹೋಗಿ ಲಗ್ಗೆರೆಯ ರಸ್ತೆ ಬಳಿ ಎಸೆದಿದ್ದರು. ಮಂಜುನಾಥ್ ಮತ್ತು ಸಾವಿತ್ರ ದಂಪತಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Comments are closed.