ಕರ್ನಾಟಕ

ನೆರೆಪೀಡಿತ ಪ್ರದೇಶಗಳಲ್ಲಿ ಜಾನುವಾರಗಳ ಚಿಕಿತ್ಸೆಗೂ ಲಂಚ ಕೇಳುತ್ತಿರೋ ವೈದ್ಯರು

Pinterest LinkedIn Tumblr


ಹುಬ್ಬಳ್ಳಿ: ಇತ್ತೀಚೆಗಷ್ಟೇ ಸಂಭವಿಸಿದ ನೆರೆ ಪ್ರವಾಹದಿಂದ ರೈತರು ತತ್ತರಿಸಿದ್ದಾರೆ. ಆ ರೈತರ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಪಶು ವೈದ್ಯರು ಲಂಚ ಕೇಳುತ್ತಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಲಂಚಬಾಕ ಪಶು ವೈದ್ಯ ಡಾ. ನಿಂಗಪ್ಪ ಮಾಯಾಗೋಳ್ ಕೈ ತುಂಬಾ ಸರ್ಕಾರಿ ಸಂಬಳ ಬರುತ್ತಿದ್ದರೂ ರೈತರು ಹಣ ಕೊಡದಿದ್ದರೆ ಜಾನುವಾರುಗಳಿಗೆ ಚಿಕಿತ್ಸೆಯನ್ನೇ ನೀಡುತ್ತಿಲ್ಲ. ರೈತರ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕಾದರೆ ಇನ್ನೂರು ಮುನ್ನೂರರಿಂದ ಸಾವಿರ ಸಾವಿರ ರೂಪಾಯಿವರೆಗೂ ಲಂಚ ಕೊಡುವಂತೆ ಕೇಳುತ್ತಿದ್ದಾರೆ.

ಇತ್ತೀಚೆಗಷ್ಟೇ ಸಂಭವಿಸಿದ ನೆರೆಪ್ರವಾಹದಿಂದ ತತ್ತರಿಸಿ ಹೋಗಿರುವ ರೈತರ ಗೋಳು ಒಂದೆಡೆಯಾದರೆ ಧನದಾಹಿ ಪಶು ವೈದ್ಯ ಡಾ. ನಿಂಗಪ್ಪ ವೈದ್ಯನ ಲಂಚದಾಹದಿಂದ ಕುಂದಗೋಳ ತಾಲೂಕಿನ ರೈತರು ಬೇಸತ್ತು ಹೋಗಿದ್ದಾರೆ. ಮಾನವೀಯತೆಯನ್ನೇ ಮರೆತ ಈ ಲಂಚಬಾಕ ವೈದ್ಯ ರಾಜಾರೋಷವಾಗಿ ರೈತರಿಂದ ಹಣ ತೆಗೆದುಕೊಳ್ಳುವ ಸಂಪೂರ್ಣ ವೀಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ರೈತರು ತಮ್ಮ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಬೇಕೆಂದರೆ ಈ ಪಶು ವೈದ್ಯರಿಗೆ ಲಂಚ ನೀಡಲೇಬೇಕು.

ಪ್ರತಿ ತಿಂಗಳು ಈ ಪಶು ವೈದ್ಯರಿಗೆ ಸರ್ಕಾರದಿಂದ ಸರಿಯಾಗಿ ಸಂಬಳ ಬರುತ್ತಿದ್ದರೂ ಪಶುಗಳಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಇಲ್ಲಿನ ರೈತರ ಜೀವವನ್ನೇ ಹಿಂಡುತ್ತಿದ್ದಾರೆ. ತಾಲೂಕಿನಾದ್ಯಂತ 60 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಾವಿರಾರು ಜಾನುವಾರುಗಳನ್ನ ರೈತರು ಸಾಕಿದ್ದಾರೆ. ಆದರೆ ಆ ಜಾನುವಾರುಗಳಿಗೆ ಅನಾರೋಗ್ಯ ಎದುರಾದರೆ ಈ ವೈದ್ಯರು ಚಿಕಿತ್ಸೆ ನೀಡಬೇಕಾದರೆ ನೂರರಿಂದ ಸಾವಿರದವರೆಗೆ ಹಣ ನೀಡಿದರೆ ಮಾತ್ರ ಚಿಕಿತ್ಸೆ ನೀಡಲು ಬರುತ್ತಾರೆ. ಹೀಗಾಗಿ ಈ ಭಾಗದ ರೈತರು ವೈದ್ಯರ ಈ ನಡೆಗೆ ಬೇಸತ್ತಿದ್ದು, ತಮ್ಮ ನೋವನ್ನು ಯಾರಿಗೂ ಹೇಳಿಕೊಳ್ಳದೆ ಒದ್ದಾಡುತ್ತಿದ್ದಾರೆ.

Comments are closed.